2000 ರೂ ಸಿಗುವ ವದಂತಿ- ಮಂಗಳೂರಲ್ಲಿ ಮುಗಿಬಿದ್ದ ನೂರಾರು ಜನ
ಮಂಗಳೂರು, ಏಪ್ರಿಲ್ 15: ಕೂಲಿ ಕಾರ್ಮಿಕರಿಗೆ 2000 ರೂಪಾಯಿ ನೀಡಲಾಗುತ್ತದೆ ಎಂಬ ವದಂತಿ ಹರಡಿದ್ದು, ಖಾಸಗಿ ಕಟ್ಟಡದ ಮುಂದೆ ನೂರಾರು ಜನರು ಸೇರಿದ್ದ ಘಟನೆ ಮಂಗಳೂರಿನ ಕೂಳೂರಿನಲ್ಲಿ ನಡೆದಿದೆ. ಜನಜಂಗುಳಿ ತುಂಬಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಲಾಕ್ ಡೌನ್ ನಿಯಮವನ್ನೂ ಉಲ್ಲಂಘಿಸಲಾಗಿದೆ.
ಕೂಳೂರಿನ ಖಾಸಗಿ ಕಟ್ಟಡದಲ್ಲಿ ಕೂಲಿ ಕಾರ್ಮಿಕರ ಮಾಹಿತಿ ಪಡೆದು ಹಣವನ್ನು ಖಾತೆಗೆ ಹಾಕಲಾಗುತ್ತದೆ ಎಂಬ ಸುಳ್ಳು ಮಾಹಿತಿ ಹರಡಿದ್ದು, ಸುಮಾರು 700 ಮಂದಿ ಗುಂಪು ಸೇರಿದ್ದಾರೆ. ಯಾಕೆ ನಿಂತಿರುವಿರಿ ಎಂದು ಅವರನ್ನು ಪ್ರಶ್ನಿಸಿದರೆ 'ನಮ್ಮ ಬ್ಯಾಂಕ್ ಖಾತೆಗೆ 2000 ರೂ. ಹಣ ಬರುತ್ತದೆ' ಎಂದು ಬಂದಿದ್ದೇವೆ ಎಂದಿದ್ದಾರೆ. ಈ ಮಾಹಿತಿಯ ಮೂಲದ ಬಗ್ಗೆ ಯಾರಿಗೂ ತಿಳಿದಿಲ್ಲ.
ಬೆಳಗಾವಿಯಲ್ಲಿ ಮುಗಿಬಿದ್ದ ಜನರು: ಲಾಕ್ ಡೌನ್ ಲೆಕ್ಕಕ್ಕಿಲ್ಲ
ಅಲ್ಲಿ ಸೇರಿದ್ದ ಜನರೆಲ್ಲರೂ ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಹಿಡಿದುಕೊಂಡು ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಿಂತಿದ್ದರು. ಮಾಹಿತಿ ಪಡೆಯುವವರ ಬಳಿ ಈ ಕುರಿತು ಪ್ರಶ್ನಿಸಿದಾಗ, ಜಿಲ್ಲಾಧಿಕಾರಿ ಕಚೇರಿಯಿಂದ ಕೂಲಿ ಕಾರ್ಮಿಕರ ಮಾಹಿತಿ ಪಡೆಯಲು ತಿಳಿಸಿದ್ದಾರೆ, ಯಾರಿಗೂ 2000 ರೂ. ಬ್ಯಾಂಕ್ ಖಾತೆಗೆ ಹಾಕುತ್ತಿಲ್ಲ ಎಂಬ ಉತ್ತರ ಬಂದಿದೆ. ಸ್ವಲ್ಪ ಹೊತ್ತಿನಲ್ಲಿ ಕಾರ್ಮಿಕ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಅವರನ್ನು ಕೂಲಿ ಕಾರ್ಮಿಕರು ಮುತ್ತಿಗೆ ಹಾಕಿದ್ದಾರೆ. ಈ ಸಂದರ್ಭ ಅವರು ಕಾರು ಚಲಾಯಿಸಿ ಹೊರಟಿದ್ದಾರೆ.
ಮಾಹಿತಿ ಪಡೆಯುತ್ತಿದ್ದ ಯುವಕರೂ ಬೈಕ್ ಏರಿ ಅಲ್ಲಿಂದ ಪರಾರಿ ಆಗಿದ್ದಾರೆ. ಒಟ್ಟಿನಲ್ಲಿ 2000 ಸಿಗುತ್ತದೆ ಎಂದು ಮುಗಿಬಿದ್ದ ಜನರು ಏನೂ ಸಿಗದೆ ಮನೆ ದಾರಿ ಹಿಡಿದಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ, ಸ್ಥಳೀಯ ಕಾರ್ಪೊರೇಟರ್, ಮಹಾನಗರ ಪಾಲಿಕೆಯ ಆಯುಕ್ತರು ಯಾರಿಗೂ ನಿಖರ ಮಾಹಿತಿ ಇಲ್ಲ. ಈ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸಿ, ಜನರಿಗೆ ತಪ್ಪು ಮಾಹಿತಿ ನೀಡಿದವರ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ.