ಮಂಗಳೂರು: ಆರ್ಎಸ್ಎಸ್ ಸಂಘ ಶಿಕ್ಷಾ ವರ್ಗದ ಚಿತ್ರಗಳು
ಮಂಗಳೂರು ಮೇ 9: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಥಮ ವರ್ಷದ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭವು ಮಂಗಳೂರಿನ ತಲಪ್ಪಾಡಿಯಲ್ಲಿ ಶಾರದಾ ವಿದ್ಯಾನಿಕೇತನದಲ್ಲಿ ಜರುಗಿತು. ಏಪ್ರಿಲ್ 17ರಂದು ಪ್ರಾರಂಭಗೊಂಡಿದ್ದ 20 ದಿನಗಳ ಈ ಪ್ರಶಿಕ್ಷಣ ವರ್ಗದಲ್ಲಿ ರಾಜ್ಯದ ಒಟ್ಟು ಆಯ್ದ 769 ಕಾರ್ಯಕರ್ತರು ಭಾಗವಹಿಸಿದ್ದರು.
ಮಂಗಳೂರು ವಿಭಾಗ ಕಾರ್ಯವಾಹ ಪಿ.ಎಸ್. ಪ್ರಕಾಶ್ ಮುಖ್ಯ ಭಾಷಣ ಮಾಡಿದರೆ, ಖ್ಯಾತ ವೈದ್ಯ ಡಾ. ಆನಂದ್ ವೇಣುಗೋಪಾಲ್ ಅಧಕ್ಷತೆ ವಹಿಸಿದ್ದರು.[ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಅರುಣ್ ಕುಮಾರ್]
"20 ದಿನಗಳಿಂದ ವರ್ಗ ನಡೆಯುತ್ತಿದೆ. ಇದೊಂದು ಪ್ರಮುಖ ವರ್ಗ, ಪ್ರತಿ ವರ್ಷ 20 ಸಾವಿರಕ್ಕೂ ಹೆಚ್ಚು ತರುಣರು ಸಂಘದ ಶಿಕ್ಷಣವನ್ನು ಪಡೆಯುತ್ತಾರೆ ಮತ್ತು ಕಾರ್ಯಕರ್ತರಾಗುತ್ತ್ತಿದ್ದಾರೆ. ಇವರಿಂದ 80 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಘದ ಚಟುವಟಿಕೆಗಳು ನಡೆಯುತ್ತಿವೆ. ಕಳೆದ 91 ವರ್ಷಗಳಲ್ಲಿ ಸಂಘವು ಸಮಾಜಕ್ಕೆ ಭರವಸೆ ನೀಡುತ್ತಲೇ ಬಂದಿದೆ ಎಂದು ಪಿ.ಎಸ್. ಪ್ರಕಾಶ್ ಹೇಳಿದರು.
"ಸಂಘದ ಉದ್ದೇಶ ಸ್ವಾಭಿಮಾನದ ಬದುಕನ್ನು, ಹಿಂದೂ ಸಂಘಟನೆಯ ಮೂಲಕ ಮೂಡಿಸುವುದು. ಹಿಂದುತ್ವವೇ ಇಲ್ಲಿನ ರಾಷ್ಟ್ರೀಯತೆ. ಈ ದೇಶದ ಜನತೆಯೇ ಹಿಂದೂಗಳು. ಮತ, ಪಂಗಡ, ಆಚಾರಗಳ ಮೂಲಕ ಓರ್ವ ಹಿಂದೂವನ್ನು ಪ್ರತ್ಯೇಕವಾಗಿ ಗುರುತಿಸುವುಸುವುದು ತಪ್ಪು ಎಂದು ಹೇಳಿದರು.['ಭಾರತ್ ಮಾತಾ ಕಿ ಜೈ ಎನ್ನದವರಿಗೆ ದೇಶದಲ್ಲಿರುವ ಹಕ್ಕಿಲ್ಲ']
"ಈ ಶಿಬಿರದಲ್ಲಿ ಶಿಕ್ಷಾರ್ಥಿಗಳು ತಮ್ಮ ತಾರುಣ್ಯದ ಹೊಸ್ತಿಲಲ್ಲಿ ಬದುಕಿಗೊಂದು ಹೊಸ ದೃಷ್ಟಿಕೋನ ಪಡೆಯುತ್ತಾರೆ. ರಾಷ್ಟ್ರೀಯ ಚಿಂತನೆಯನ್ನು ಮೈಗೂಡಿಸಿ "ನನ್ನ ಜೀವನದಲ್ಲಿ ರಾಷ್ಟ್ರವೇ ಪ್ರಧಾನ" ಎಂಬ ಸಂಕಲ್ಪ ತೊಡುತ್ತಾರೆ." ಎಂದು ಪಿ.ಎಸ್. ಪ್ರಕಾಶ್ ಹೇಳಿದರು.
"ಸಮಾಜವು ಸಂಕಷ್ಟಮಯ ಸ್ಥಿತಿಯನ್ನು ಎದುರಿಸಿದಾಗಲೆಲ್ಲ, ಬರ-ನೆರೆ-ಭೂಕಂಪ-ಅಪಘಾತ ಇತ್ಯಾದಿಗಳ ಸಂದರ್ಭಗಳಲ್ಲಿ ಸ್ವಯಂಸೇವಕರು ಕೆಲಸಮಾಡಿದ್ದಾರೆ. ಸಂಘದ ಗುರಿ ರಾಷ್ಟ್ರದ ಪರಮ ವೈಭವ. ಜಗತ್ತಿಗೆ ಶಾಂತಿ ಮತ್ತು ನೆಮ್ಮದಿ ಭಾರತೀಯ ಪರಂಪರೆಯಿಂದ ಮಾತ್ರ ಸಾಧ್ಯ ಹೀಗಾಗಿ ಜಗತ್ತಿನ ಅನೇಕ ದೇಶಗಳು ಇಂದು ಭಾರತದ ಕಡೆಗೆ ನೋಡುತ್ತಿವೆ ಎಂದು ತಿಳಿಸಿದರು.
2025ಕ್ಕೆ ದೇಶದ ಎಲ್ಲ ಗ್ರಾಮಗಳಿಗೂ ತಲುಪುವುದು ನಮ್ಮ ಉದ್ದೇಶ. ಇದಕ್ಕಾಗಿ ಸಮಾಜದ ಸರ್ವರ ನೆರವನ್ನು ಸಂಘ ಅಪೇಕ್ಷಿಸುತ್ತಿದೆ." ಎಂದು ಪಿ.ಎಸ್. ಪ್ರಕಾಶ್ ಮನವಿ ಮಾಡಿದರು.
ಆರ್ ಎಸ್ ಎಸ್ ಸರಕಾರ್ಯವಾಹ ಸುರೇಶ ಭೈಯ್ಯಾಜಿ ಜೋಷಿ, ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಆರ್ ಎಸ್ ಎಸ್ ಅಖಿಲ ಭಾರತೀಯ ಪದಾಧಿಕಾರಿಗಳಾದ ಮಂಗೇಶ್ ಭೇಂಡೆ, ಮುಕುಂದ ಸಿ.ಆರ್ ಶಿಬಿರದಲ್ಲಿ ಭಾಗವಹಿಸಿದ್ದರು.