ಮಂಗಳೂರು; ಪ್ರತಿಭಟನೆ ಎಚ್ಚರಿಕೆ, ರೋಹಿತ್ ಚಕ್ರತೀರ್ಥ ಸನ್ಮಾನ ರದ್ದು
ಮಂಗಳೂರು, ಜೂನ್ 25: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದ ಸಾಹಿತಿ, ಚಿಂತಕ ರೋಹಿತ್ ಚಕ್ರತೀರ್ಥಗೆ ಮಂಗಳೂರಿನಲ್ಲಿ ನಡೆಯಬೇಕಾಗಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.
ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ ಹಿನ್ನಲೆಯಲ್ಲಿ ಶನಿವಾರ ನಡೆಯಬೇಕಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮ ರದ್ದು ಮಾಡಲಾಗಿದೆ. ಪ್ರತಿಭಟನೆ ನಡೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವ ಕಾರಣದಿಂದ ಕಾರ್ಯಕ್ರಮ ರದ್ದು ಮಾಡಿರುವುದಾಗಿ ಆಯೋಜಕರು ಮಾಹಿತಿ ನೀಡಿದ್ದಾರೆ.
ಮಳಲಿ ಮಸೀದಿ ಪರಿಶೀಲನೆಗೆ ಕೋರ್ಟ್ ಕಮೀಷನರ್ ನೇಮಕ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಶನಿವಾರ ಮಂಗಳೂರಿನ ಕೆನರಾ ಹೈಸ್ಕೂಲ್ ಸಭಾಂಗಣದಲ್ಲಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥಗೆ ನಾಗರಿಕ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಸಮಾನ ಮನಸ್ಕರು ಸೇರಿಕೊಂಡು ಈ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಇದೀಗ ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ರದ್ದು ಮಾಡಲು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನಿರ್ಧರಿಸಿದೆ.
ಎಡಪಂಥೀಯ ಸಂಘಟನೆಗಳಿಂದ ಚಕ್ರತೀರ್ಥ ಕಾರ್ಯಕ್ರಮಕ್ಕೆ ಮುತ್ತಿಗೆ ನಿರ್ಧಾರ ಹಿನ್ನೆಲೆ ಕಾರ್ಯಕ್ರಮ ರದ್ದು ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದು ಮಾಡಿರುವುದಾಗಿ ಆಯೋಜಕರು ತಿಳಿಸಿದ್ದಾರೆ. ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಹೆಸರಿನಲ್ಲಿ ಎಡಪಂಥೀಯ ಸಂಘಟನೆಗಳಿಂದ ಶನಿವಾರ ಪ್ರತಿಭಟನೆಗೆ ಕರೆ ಕೊಡಲಾಗಿತ್ತು. ಸಂಜೆ 4.30 ಕ್ಕೆ ಸಮಾನ ಮನಸ್ಕ ಸಂಘಟನೆಗಳು, ನಾಗರಿಕರು ಒಟ್ಟು ಸೇರಿ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಮೆರವಣಿಗೆ ಮೂಲಕ ತೆರಳಿ ಡೊಂಗರಕೇರಿ ಕೆನರಾ ಹೈಸ್ಕೂಲ್ ನ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿತ್ತು.
ಫ್ಲೆಕ್ಸ್ ಹಾಕಿದ ಬಿಜೆಪಿ ನಾಯಕರ ವಿರುದ್ಧ ದೂರು ದಾಖಲಾಗಿಲ್ಲ ಏಕೆ?
ಕುಲಪತಿ ಯಡಪಡಿತ್ತಾಯ ಉಪಸ್ಥಿತಿ ಬಗ್ಗೆಯೂ ಆಕ್ಷೇಪ
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಮುತ್ತಿಗೆಗೆ ನಿರ್ಧರಿಸಿದ್ದು, ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದವು. ವಿವಿ ಕುಲಪತಿ ಡಾ. ಸುಬ್ರಹ್ಮಣ್ಯ ಯಡಿಪಡಿತ್ತಾಯ ಅಧ್ಯಕ್ಷತೆಯಲ್ಲಿ ನಡೆಯಲಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಯಡಪಡಿತ್ತಾಯ ಉಪಸ್ಥಿತಿ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು. ನಾರಾಯಣ ಗುರುಗಳ ಪಠ್ಯ ಕೈ ಬಿಟ್ಟಿರುವ ಹಿನ್ನೆಲೆಯಲ್ಲೂ ಬಿಲ್ಲವ ಸಂಘಟನೆಗಳೂ ಪ್ರತಿಭಟನೆಗೆ ನಿರ್ಧರಿಸಿದ್ದವು. ಆದರೆ ಕೊನೆಗೂ ಕಾನೂನು ಸುವ್ಯವಸ್ಥೆ ಹಿನ್ನೆಲೆ ಇಡೀ ಕಾರ್ಯಕ್ರಮ ರದ್ದು ಮಾಡಿರುವುದಾಗಿ ಆಯೋಜಕರು ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಸಮಸ್ಯೆ ಸಾಧ್ಯತೆ ಹಿನ್ನಲೆ ರದ್ದು
ಡಿವೈಎಫ್ಐ, ಯವ ಕಾಂಗ್ರೆಸ್, ದಲಿತ ಸಂಘರ್ಷ ಸಮಿತಿ, ಸಿಐಟಿಯು, ಕಾಂಗ್ರೆಸ್ ಪಕ್ಷ, ಜಾತ್ಯಾತೀತ ಜನತಾ ದಳ, ಸಿಪಿಐಎಂ, ಭಾರತ ವಿದ್ಯಾರ್ಥಿ ಫೆಡರೇಷನ್ (SFI), NSUI ದಕ್ಷಿಣ ಕನ್ನಡ, ಮಾನವತಾ ವೇದಿಕೆ, ಅಖಿಲ ವಕೀಲರ ಭಾರತ ಸಂಘ, ಪ್ರಗತಿಪರ ಚಿಂತಕರ ವೇದಿಕೆ, ಜನವಾದಿ ಮಹಿಳಾ ಸಂಘ (JMS), ಸಿಪಿಐ ದಕ್ಷಿಣ ಕನ್ನಡ ಜಿಲ್ಲೆ, ನಾರಾಯಣ ಗುರು ಅಭಿಮಾನಿ ಬಳಗ ಮಂಗಳೂರು, AITUC ದ ಕ ಜಿಲ್ಲೆ, AIYF ದ.ಕ ಜಿಲ್ಲಾ ಸಮಿತಿ, ಭಗತ್ ಸಿಂಗ್ ಕ್ರಾಂತಿ ಬಳಗ, INTUC ದಕ್ಷಿಣ ಕನ್ನಡ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಹೆಸರಿನಲ್ಲಿ ಮುತ್ತಿಗೆ ಹಾಕಲು ನಿರ್ಧರಿಸಿತ್ತು. ಇದರಿಂದ ಕಾನೂನು ಸುವ್ಯವಸ್ಥೆ ಸಮಸ್ಯೆ ಸಾಧ್ಯತೆ ಹಿನ್ನೆಲೆ ಕಾರ್ಯಕ್ರಮ ರದ್ದು ಮಾಡಲಾಗಿದೆ.
ಕಾರ್ಯಕ್ರಮ ನಡೆದರೆ ಪ್ರತಿಭಟನೆ ಎಚ್ಚರಿಕೆ
ಈ ಕಾರ್ಯಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನಾಡಿನ ಮಹಾನ್ ಚೇತನಗಳಿಗೆ, ನಾಡಗೀತೆಗೆ ಅವಮಾನ ಎಸಗಿರುವ ರೋಹಿತ್ ಚಕ್ರತೀರ್ಥರಿಗೆ ಮಂಗಳೂರಿನಲ್ಲಿ ನಾಗರಿಕ ಸನ್ಮಾನ ನಡೆಸುತ್ತಿರುವುದು ಆಘಾತಕಾರಿ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಎಸ್. ಯಡಪಡಿತ್ತಾಯ ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರು ಭಾಗವಹಿಸುತ್ತಿರುವುದು ಸರಿಯಲ್ಲ. ತಕ್ಷಣ ಅವರು ಈ ಕಾರ್ಯಕ್ರಮದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದಲ್ಲಿ ನಾವು ಕಾರ್ಯಕ್ರಮದ ಸಂದರ್ಭ ಪ್ರತಿಭಟನೆ ನಡೆಸಲಿದ್ದೇವೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದರು.
ರೋಹಿತ್ ಚಕ್ರತೀರ್ಥರನ್ನು ಕರೆಸಿ ಸನ್ಮಾನ ಮಾಡುವುದಕ್ಕೆ ನಮ್ಮದೇನು ತಕರಾರು ಇಲ್ಲ. ಆದರೆ ನಾಡಿನ ಖ್ಯಾತನಾಮರೂ, ಮಹಾನ್ ಚೇತನರುಗಳೂ ಆಗಿರುವ ಕಯ್ಯಾರ ಕಿಂಞಣ್ಣ ರೈ, ಬಸವಣ್ಣ, ಕುವೆಂಪು, ನಾರಾಯಣ ಗುರುಗಳಿಗೆ ಅವಮಾನ ಎಸಗಿರುವವರಿಗೆ ನಾಗರಿಕ ಸನ್ಮಾನ ಮಾಡುತ್ತಿರುವುದು ಅಷ್ಟೊಂದು ಸರಿಯಲ್ಲ. ಅದರಲ್ಲಿಯೂ ಸಭಾಧ್ಯಕ್ಷತೆಯನ್ನು ಮಂಗಳೂರು ವಿವಿಯ ಕುಲಪತಿಗಳಾದ ಮಾನ್ಯ ಯಡಪಡಿತ್ತಾಯರು ವಹಿಸಲಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದರು.
ನಾಗರಿಕ ಸನ್ಮಾನ ಪದ ತೆಗೆಯಲು ಒತ್ತಾಯ
ಮಂಗಳೂರು ವಿವಿ ಕುಲಪತಿ ಡಾ. ಪಿ. ಎಸ್. ಯಡಪಡಿತ್ತಾಯರಿಗೆ ಈ ವಿಚಾರದಲ್ಲಿ ಸಹಮತ ಇದೆಯೇ ಎಂಬುದರ ಬಗ್ಗೆ ಅವರು ಸ್ಪಷ್ಟಪಡಿಸಲಿ. ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ವಿಚಾರದಲ್ಲಿ ಮಾಡಿರುವ ಅಪಸವ್ಯ, ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಟ್ರೋಲ್ ಗಳು, ನಾಡಿನ ಖ್ಯಾತನಾಮರಿಗೆ ಮಾಡಿರುವ ಅವಮಾನದ ಬಗ್ಗೆ ಸಹಮತ ಇದೆಯೇ ಎಂದೂ ಕುಲಪತಿಯವರು ಸ್ಪಷ್ಟಪಡಿಸಲಿ. ಅದು ಇಲ್ಲವೆಂದಾದರೆ ಈ ಕಾರ್ಯಕ್ರಮವನ್ನು ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ರೋಹಿತ್ ಚಕ್ರತೀರ್ಥಗೆ ನಾಗರಿಕ ಸನ್ಮಾನ ಎಂಬ ಪದವನ್ನು ತೆಗೆದು ಹಾಕಲಿ. ಕುಲಪತಿಯವರು ಈ ಕಾರ್ಯಕ್ರಮದಲ್ಲಿ ಯಾವುದೇ ಕಾರಣಕ್ಕೂ ಭಾಗವಹಿಸಬಾರದು ಎಂದು ಒತ್ತಾಯಿಸುತ್ತಿದ್ದೇವೆ. ಅದನ್ನು ಮೀರಿಯೂ ಇದೇ ರೀತಿ ಕಾರ್ಯಕ್ರಮ ನಡೆಸುವುದಾದಲ್ಲಿ ಕಾರ್ಯಕ್ರಮದ ಸಂದರ್ಭ ನಾವು ಪ್ರತಿಭಟನೆ ನಡೆಸಲಿದ್ದೇವೆ ಎಂದು ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದ್ದರು.