'ಸ್ಪೆಷಲ್ ಛಬ್ಬಿಸ್' ಸಿನಿಮಾ ರೀತಿ ಲೂಟಿ ಮಾಡುತ್ತಿದ್ದ ಖತರ್ ನಾಕ್ ಗ್ಯಾಂಗ್ ತನಿಖೆ ಚುರುಕು
ಮಂಗಳೂರು, ಆಗಸ್ಟ್ 21: ಸಿಬಿಐ ಹೆಸರಿನಲ್ಲಿ ದಾಳಿ ನಡೆಸಿ ಮಂತ್ರಿಗಳು ಸೇರಿದಂತೆ ಖ್ಯಾತನಾಮ ಉದ್ಯಮಿಗಳನ್ನು ಲೂಟಿ ಮಾಡುತ್ತಿದ್ದ ಖತರ್ ನಾಕ್ ತಂಡವೊಂದರ ಕಥೆ ಆಧಾರಿತ 'ಸ್ಪೆಷಲ್ ಛಬ್ಬಿಸ್' ಹಿಂದಿ ಸಿನೆಮಾ ನೆನಪಿದೆಯೇ? ಇದೇ ರೀತಿಯಲ್ಲಿ ಲೂಟಿ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗೊಂದರ ತನಿಖೆ ಮಂಗಳೂರಿನಲ್ಲಿ ಈಗ ಬಿರುಸುಗೊಂಡಿದೆ.
ಕಾರಿಗೆ ಕೇಂದ್ರೀಯ ತನಿಖಾ ಸಂಸ್ಥೆಯ ನೇಮ್ ಬೋರ್ಡ್ ಅಳವಡಿಸಿ ದರೋಡೆಗೆ ಸಂಚು ರೂಪಿಸಿದ ತಂಡವೊಂದನ್ನು ಮಂಗಳೂರು ಪೊಲೀಸರು ಈಚೆಗೆ ಬಂಧಿಸಿದ್ದರು. ಈ ಖತರ್ ನಾಕ್ ತಂಡದ ಮಾಸ್ಟರ್ ಮೈಂಡ್ ಟಿ. ಸ್ಯಾಮ್ ಪೀಟರ್ (53) ಒಬ್ಬ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂಬುದು ಇದೀಗ ಬೆಳಕಿಗೆ ಬಂದಿದೆ. ದೇಶದ ನಾನಾ ಭಾಗಗಳಲ್ಲಿ ಸ್ಯಾಮ್ ಪೀಟರ್ ನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಆತನನ್ನು ವಶಕ್ಕೆ ಪಡೆಯಲು ಸಿಬಿಐ ತಂಡ ಬರಲಿದೆ.
ಮಂಗಳೂರಿನಲ್ಲಿ ಅಪರಾಧ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಗ್ಯಾಂಗ್ ನ 8 ಜನರ ಬಂಧನ
ದೇಶದ ನಾನಾ ಕಡೆ ಸ್ಯಾಮ್ ಪೀಟರ್ ಮೇಲೆ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದಲ್ಲೂ ಈತ ನಿರಂತರ ಲೂಟಿ ಮಾಡಿದ್ದು, ತಲೆಮರೆಸಿಕೊಂಡ ಕಾರಣ ಮಹಾರಾಷ್ಟ್ರ ಸರಕಾರ ಮೋಸ್ಟ್ ವಾಂಟೆಡ್ ಎಂದು ಘೋಷಿಸಿದೆ. ಈತನನ್ನು 'ಮೋಸ್ಟ್ ವಾಂಟೆಡ್ ಕ್ರಿಮಿನಲ್' ಎಂದು ಘೋಷಿಸಿದ ಬಳಿಕ ಈತನ ಬಂಧನಕ್ಕೆ ಸಿಸಿಬಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಈತ ವಿದೇಶಕ್ಕೆ ಹಾರಿರಬಹುದೆಂಬ ಸಂಶಯ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಹಲವು ಸಮಯದಿಂದ ಶೋಧ ಕಾರ್ಯವೂ ನಡೆದಿತ್ತು.
ಸ್ವಾತಂತ್ರ್ತೋತ್ಸವದ ಬಂದೋಬಸ್ತ್ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಮಂಗಳೂರಿನ ಪಂಪುವೆಲ್ ವೃತ್ತದ ಬಳಿಯಿರುವ ಲಾಡ್ಜ್ ಒಂದರಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಇರುವ ಬಗ್ಗೆ ಮಂಗಳೂರು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಸಂದರ್ಭ 8 ಆರೋಪಿಗಳು ಅಪರಾಧ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಆರೋಪಿಗಳು ಕೇಂದ್ರೀಯ ತನಿಖಾ ಸಂಸ್ಥೆಯ ನೇಮ್ ಬೋರ್ಡ್ ಅಳವಡಿಸಿರುವ ಕಾರಿನಲ್ಲಿ ಬಂದಿರುವುದು ಕಂಡುಬಂದಿದೆ.
ಈ ತಂಡ ಪ್ರಭಾವಿ ವ್ಯಕ್ತಿಗಳನ್ನು ಬೆದರಿಸಿ ಹಣ ವಸೂಲಿ ಮಾಡುವ ದಂಧೆಯಲ್ಲಿ ನಿರತರಾಗಿರುವುದು ತನಿಖೆಯಿಂದ ತಿಳಿದುಬಂದಿತ್ತು. ಬಂಧಿತರಲ್ಲಿ ಪ್ರಮುಖ ಆರೋಪಿಯಾಗಿರುವ ಕೇರಳ ಮೂಲದ ಸ್ಯಾಮ್ ಪೀಟರ್ ಎಂಬಾತನಿಗೆ ಪಶ್ಚಿಮ ಬಂಗಾಳ, ಭುವನೇಶ್ವರ ಮೊದಲಾದ ಕಡೆಯಲ್ಲೂ ಸಂಪರ್ಕ ಹೊಂದಿದ್ದು, ಈತ ಸ್ಥಳೀಯ ಸಂಪರ್ಕದ ಮೂಲಕ ಮಂಗಳೂರಿಗೆ ಬಂದಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿತ್ತು.