ಮೊಣ್ಣಂಗೇರಿಯಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್
ಮಂಗಳೂರು, ಜುಲೈ 23: ದಕ್ಷಿಣ ಕನ್ನಡ ಹಾಗು ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಕಳೆದ 3 ದಿನಗಳಿಂದ ನಿರಂತರವಾಗಿ ಈ ಭಾಗದಲ್ಲಿ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಭೂ ಕುಸಿತ ಸಂಭವಿಸುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಸುಳ್ಯ ಗಡಿಭಾಗ ಮೊಣ್ಣಂಗೇರಿಯಲ್ಲಿ ಸೋಮವಾರ ಸಂಜೆ ಗುಡ್ಡ ಕುಸಿದು ರಸ್ತೆ ಬಿದ್ದ ಪರಿಣಾಮ ರಸ್ತೆ ಸಂಪೂರ್ಣ ಬಂದ್ ಆಗಿದೆ.
ಜೋಡುಪಾಲದಲ್ಲಿ ಬರೆ ಕುಸಿತ; ಜನರಲ್ಲಿ ಹೆಚ್ಚಿದೆ ಆತಂಕ
ಮೊಣ್ಣಂಗೇರಿ ಸಂಪರ್ಕಿಸುವ ರಸ್ತೆ ಮೇಲೆ ಬರೆ ಕುಸಿದಿದೆ. ಹೀಗಾಗಿ ಸಂಪರ್ಕ ಕಡಿತಗೊಂಡಿದೆ. ಕಳೆದ ವರ್ಷವೂ ಇದೇ ಪ್ರದೇಶದಲ್ಲಿ ಗುಡ್ಡ ಕುಸಿತವಾಗಿತ್ತು. ಈಗ ಅದೇ ಮಾದರಿಯಲ್ಲಿ ಕುಸಿತವಾಗಿದ್ದು, ಕೆಸರು ಮಣ್ಣು ಹರಿದಿದೆ. ಈ ಹಿನ್ನೆಲೆಯಲ್ಲಿ ಮೊಣ್ಣಂಗೇರಿ ಗ್ರಾಮಸ್ತರಲ್ಲಿ ಆತಂಕ ಸೃಷ್ಟಿಯಾಗಿದೆ. 4 ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಕುಸಿತಗೊಂಡ ಮಣ್ಣು ತೆರವು ಮಾಡಲಾಗಿತ್ತು. ಈಗ ಮತ್ತೆ ಭೂ ಕುಸಿತ ಉಂಟಾಗುತ್ತಿರುವುದು ಜನರ ಭೀತಿಗೆ ಕಾರಣವಾಗಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ಸೇರಿದಂತೆ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿವೆ. ಪಶ್ಚಿಮ ಘಟ್ಟದಿಂದ ಹರಿದುಬರುವ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.