ದ.ಕ.ದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜ 12ರಿಂದ ನದಿ ಉತ್ಸವ
ಮಂಗಳೂರು, ಜನವರಿ 02: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ನೂತನ ಯೋಜನೆ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ನದಿ ಮತ್ತು ನದಿ ಕಿನಾರೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಪ್ರವಾಸೋದ್ಯಮ ತಾಣವಾಗಿ ಪರಿವರ್ತಿಸಿ ರಿವರ್ ಫೆಸ್ಟಿವಲ್ ಆರಂಭಿಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನದಿ ಉತ್ಸವದ ಲಾಂಛನವನ್ನು ಬಿಡುಗಡೆಗೊಳಿಸಲಾಗಿದೆ. ಜನವರಿ 12 ಮತ್ತು 13 ರಂದು ಈ ನದಿ ಉತ್ಸವವು ಜಿಲ್ಲೆಯ ಮೂರು ಕಿನಾರೆಗಳಲ್ಲಿ ನಡೆಯಲಿದೆ. ನದಿ ತೀರಗಳನ್ನು, ದ್ವೀಪಗಳನ್ನು ಹೊಂದಿರುವ ತಾಲೂಕು ಮಟ್ಟದಲ್ಲೂ ಉತ್ಸವಗಳನ್ನು ನಡೆಸಲು ಜಿಲ್ಲಾ ಮಟ್ಟದ ಕಾರ್ಯಕ್ರಮ ರೂಪಿಸಲಾಗಿದೆ.
ಮಂಗಳೂರಿಗೆ ಬರಲಿದೆ ಕೇರಳ ಮಾದರಿಯ ಬೋಟ್ ಹೌಸ್, ತೇಲುವ ರೆಸ್ಟೋರೆಂಟ್
ನದಿ ಉತ್ಸವಕ್ಕಾಗಿ ಬಂಗ್ರಕೂಳೂರಿನಲ್ಲಿರುವ 20 ಎಕರೆ ಸರಕಾರಿ ಭೂಮಿಯನ್ನು ಗುರುತಿಸಲಾಗಿದೆ. ಅಲ್ಲಿಗೆ ಸುಲ್ತಾನ್ ಬತ್ತೇರಿ, ತಣ್ಣೀರು ಬಾವಿ ಮತ್ತು ಕೂಳೂರಿನಿಂದ ಜೆಟ್ಟಿ ಮತ್ತು ದೋಣಿಗಳ ಮೂಲಕ ಸಂಪರ್ಕ ಕಲ್ಪಿಸಲು ತೀರ್ಮಾನಿಸಲಾಗಿದೆ.
ಜತೆಗೆ ನದಿಗಳ ಕುರಿತಾಗಿ ಚಿತ್ರೋತ್ಸವ ಇರುತ್ತದೆ. ಸರಕಾರ ನದಿ ಉತ್ಸವಕ್ಕಾಗಿ 25 ಲಕ್ಷ ರೂಪಾಯಿಯನ್ನು ಒದಗಿಸಿದೆ. ಉತ್ಸವದಲ್ಲಿ ಜಲ ಸಾಹಸ ಕ್ರೀಡೆಗಳು, ವಿವಿಧ ಮಳಿಗೆಗಳಿರುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಾಯೋಜಕರ ಬೆಂಬಲವನ್ನು ಕೂಡ ಪಡೆಯಲಾಗುತ್ತಿದೆ.