ಫಲ್ಗುಣಿ ನದಿ ತೀರದಲ್ಲಿ 'ರಿವರ್ ಫೆಸ್ಟ್' ಗೆ ಚಾಲನೆ
ಮಂಗಳೂರು, ಜನವರಿ 12: ಮಂಗಳೂರಿನಲ್ಲಿ ವೀಕ್ ಎಂಡ್ ಗಾಗಿ ಆಯೋಜಿಸಲಾಗಿರುವ ನದಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಕೂಳೂರಿನಲ್ಲಿ ಆಯೋಜಿಸಲಾಗಿರುವ ನದಿ ಉತ್ಸವ ಪಂಚವಾದ್ಯಗಳ ಮೇಳದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರಿಂದ ಉದ್ಘಾಟನೆಗೊಂಡಿದೆ.ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಫಲ್ಗುಣಿ ನದಿ ತಟದಲ್ಲಿ ಈ ಉತ್ಸವ ಆಯೋಜಿಸಲಾಗಿದೆ.
ನದಿ ಉತ್ಸವ ಹಿನ್ನೆಲೆಯಲ್ಲಿ ಫಲ್ಗುಣಿ ನದಿ ತೀರ ಬಣ್ಣ ಬಣ್ಣದ ತಳಿರು ತೋರಣಗಳಿಂದ ಅಲಂಕೃತಗೊಂಡು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.ಉತ್ಸವದ ಹಿನ್ನೆಲೆಯಲ್ಲಿ ಫಲ್ಗುಣಿ ನದಿಯ ಹಿನ್ನಿರಿನಲ್ಲಿ ಜೆಟ್ಸ್ಕೀ, ಫೆರ್ರಿಗಳು ಅಲಂಕೃತಗೊಂಡು ಓಡಾಡುತ್ತಿವೆ.
ನದಿ ತೀರದಲ್ಲಿ ಎರಡು ದಿನಗಳ ಕಾಲ ಸ್ಥಳೀಯ ಹಾಗೂ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದ ಕಲಾ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಂಡಿದ್ದು ಕೂಳೂರಿನಲ್ಲಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡಿದ್ದರೂ ಮುಂದಿನ ಪ್ರಮುಖ ಕಾರ್ಯಕ್ರಮಗಳು ಬಂಗ್ರ ಕೂಳೂರಿನಲ್ಲಿ ನಡೆಯಲಿದೆ.
ಬಂಗ್ರ ಕೂಳೂರಿನ 23 ಎಕರೆ ಸರಕಾರಿ ಜಮೀನಿನಲ್ಲಿ ಫ್ಲೀ ಮಾರ್ಕೆಟ್, ಆಹಾರೋತ್ಸವ, ಕಲಾ ಕಾರ್ಯಕ್ರಮಗಳು ಹಾಗೂ ವಿವಿಧ ವೈವಿದ್ಯಮಯ ಕಾರ್ಯಕ್ರಮಗಳ ಆಯೋಜಿಸಲಾಗಿದೆ. ನದಿ ಹಾಗು ಪ್ರಕೃತಿ ಪ್ರೇಮಿಗಳಿಗೆ ನದಿ ಬದಿಯ ಈ ಕಾರ್ಯಕ್ರಮ ಚೇತೋಹಾರಿಯಾಗಲಿದೆ. ಉತ್ಸವವನ್ನು ಜಿಲ್ಲಾಡಳಿತ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ನದಿ ಉತ್ಸವದ ಪ್ರಮುಖ ಸ್ಥಳವಾದ ಬಂಗ್ರ ಕೂಳೂರು ಬಳಿಗೆ ದೋಣಿ ಮೂಲಕ ಸಾಗಬೇಕಾದರೆ ಸುಲ್ತಾನ್ ಬತ್ತೇರಿ ಅಥವಾ ಕೂಳೂರು ಸೇತುವೆ ಬಳಿಯಿಂದ ಆಗಮಿಸಬೇಕು. ಇಲ್ಲವಾದಲ್ಲಿ ಕೂಳೂರು ಬಸ್ಸು ನಿಲ್ದಾಣ ಸಮೀಪದ ರಸ್ತೆ ಮಾರ್ಗವಾಗಿ ನಡೆದುಕೊಂಡು ನದಿ ಸೌಂದರ್ಯವನ್ನು ಆಸ್ವಾದಿಸುತ್ತಾ ಸುಮಾರು 2 ಕಿ.ಮೀ. ದೂರವನ್ನು ಕ್ರಮಿಸಬಹುದಾಗಿದೆ. ದೋಣಿ ಮೂಲಕ ಸಾಗಲು ತಲಾ 50 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ.