ಹಿಂದೂ ಸಂಘಟನೆ ಕಾರ್ಯಕರ್ತರಿಂದ ಯುವತಿಗೆ ಲೈಂಗಿಕ ದೌರ್ಜನ್ಯ?
ಮಂಗಳೂರು, ಫೆಬ್ರವರಿ 11: ಬರ್ತ್ ಡೇ ಪಾರ್ಟಿ ಮುಗಿಸಿ ಕಾರಿನಲ್ಲಿ ಸ್ನೇಹಿತನೊಂದಿಗೆ ಮನೆಗೆ ತೆರಳುತ್ತಿದ್ದ ಯುವತಿಯೋರ್ವಳ ಮೇಲೆ 3 ಮಂದಿ ಯುವಕರ ತಂಡ ಲೈಂಗಿಕ ಕಿರುಕುಳ ನೀಡಿದ ಘಟನೆ ಇಲ್ಲಿನ ಬಜ್ಪೆಯಲ್ಲಿ ನಡೆದಿದೆ. ಲೈಂಗಿಕ ಕಿರುಕುಳ ನೀಡಿದ ತಂಡ ಆಕೆಯ ಬಳಿ ಇದ್ದ ಹಣ, ಚಿನ್ನದ ಸರವನ್ನು ದೋಚಿದೆ ಎನ್ನಲಾಗಿದೆ.
ಶುಕ್ರವಾರ ತಡರಾತ್ರಿ ಮಂಗಳೂರಿನ ಹೊರವಲಯದ ಬಜ್ಪೆ ಬಳಿಯ ನಿರ್ಜನ ಪ್ರದೇಶ ಆದ್ಯಪಾಡಿಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣದ ಮಹಿಳಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಯುವತಿ ಶುಕ್ರವಾರ ತನ್ನ ಹುಟ್ಟು ಹಬ್ಬದ ಪಾರ್ಟಿ ಮುಗಿಸಿ ತೆರಳುವಾಗ ತಡವಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ಸಹೋದ್ಯೋಗಿಯೊಂದಿಗೆ ಕಾರಿನಲ್ಲಿ ಮನೆಯತ್ತ ತೆರಳುತ್ತಿದ್ದರು.
ಕಾರಿನಲ್ಲಿಬ್ಬರು ತೆರಳಿರುವುದನ್ನು ಗಮನಿಸಿದ ಯುವಕರ ತಂಡ ಒಂದು ಹಿಂಬಾಲಿಸಿ ಕೊಂಡು ಹೋಗಿದೆ ಎಂದು ಹೇಳಲಾಗಿದೆ. ಆದ್ಯಪಾಡಿ ಬಳಿ ಕಾರು ಅಡ್ಡಗಟ್ಟಿದ ಯುವಕರ ತಂಡ ಹಿಂದೂ ಸಂಘಟನೆಯ ಹೆಸರು ಹೇಳಿಕೊಂಡು ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದೆ ಎಂದು ದೂರಲಾಗಿದೆ.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಯುವತಿ ಪ್ರಕರಣ ದಾಖಲಿಸಿದ್ದಾಳೆ. ಯುವಕರ ತಂಡ ತನಗೆ ಲೈಂಗಿಕ ಕಿರುಕುಳವನ್ನೂ ನೀಡಿದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಅನ್ಯಧರ್ಮೀಯನ ಜತೆ ಇರುವ ಶಂಕೆಯಿಂದ ಕಾರು ಅಡ್ಡಗಟ್ಟಿದ್ದ ಶೇಕರ್, ಅಭಿಷೇಕ್, ನಿಖಿಲ್ ಹಾಗೂ ರಕ್ಷಿತ್ ತಮ್ಮ ಮೇಲೆ ಹಲ್ಲೆ ನಡೆಸಿ ತನ್ನಲ್ಲಿದ್ದ ಚಿನ್ನದ ಸರ, ಎಟಿಎಮ್ ಕಾರ್ಡ್ ಕಿತ್ತು ಕಾರಿಗೆ ಕಲ್ಲು ತೂರಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಯುವತಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಆದರೆ ಈ ನಡುವೆ ಈ ಘಟನೆಗೆ ಟ್ವಿಸ್ಟ್ ಸಿಕ್ಕಿದ್ದೂ ಯುವತಿ ಹಾಗು ಕಾರಿನಲ್ಲಿದ್ದ ಯುವಕನ ವಿರುದ್ಧ ರಕ್ಷಿತ್ ಎಂಬವರು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾರಿನಲ್ಲಿದ್ದ ಯುವಕ ಹಾಗೂ ಆತನ ಸ್ನೇಹಿತರು ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ.
ಯುವಕರು ಹೇಳುವ ಪ್ರಕಾರ, ತಮ್ಮ ಕೆಲಸ ಮುಗಿಸಿ ತಡರಾತ್ರಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಅದ್ಯಪಾಡಿ ನಿರ್ಜನ ಪ್ರದೇಶದಲ್ಲಿ ತಾವು ತೆರಳುತ್ತಿದ್ದಾಗ ಏಕಾಏಕಿ ಅತಿ ವೇಗದಿಂದ ಬಂದ ಕಾರು ಬೈಕ್ ಒಂದಕ್ಕೆ ಡಿಕ್ಕಿ ಹೊಡೆದು ಮುಂದೆ ಸಾಗಿದೆ.
ಈ ಪರಿಣಾಮ ಕಾರನ್ನು ಹಿಂಬಾಲಿಸಿ ಅಡ್ಡ ಗಟ್ಟಿ ಗುದ್ದಿ ಓಡಿದ ಬಗ್ಗೆ ಕಾರಿನಲ್ಲಿದ್ದವರನ್ನು ವಿಚಾರಿಸಿದ್ದೇವೆ . ಬೈಕ್ ಡ್ಯಾಮೇಜ್ ಆದುದಕ್ಕೆ ದುರಸ್ಥಿಗೆ ಹಣ ಕೇಳಿದ್ದೇವೆ ಎಂದು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಕಾರಿ ನಲ್ಲಿದ್ದ ಯುವತಿ ತನ್ನಲ್ಲಿದ್ದ ಎಟಿಎಂ ಕಾರ್ಡ್ ನೀಡಿ 1500 ರೂಪಾಯಿ ತೆಗೆದು ಕೊಳ್ಳುವಂತೆ ತಿಳಿಸಿದ್ದಾಳೆ. ಅದರಂತೆ ಎಟಿಎಂಗೆ ತೆರಳಿ ಹಣ ಡ್ರಾ ಮಾಡಿ ಬರುವಾಗ ಕಾರಿನಲ್ಲಿದ್ದ ಯುವಕನ ಸ್ನೇಹಿತರು ಬಂದು ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಎರಡು ಕಡೆಯಿಂದ ಪ್ರಕರಣ ದಾಖಲಿಸಿಕೊಂಡಿರುವ ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಯುವಕರು ಗಾಯಗೊಂಡಿದ್ದು ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಪೊಲೀಸರು ನಡೆಸಿದ್ದಾರೆ. ಪೊಲೀಸರ ತನಿಖೆಯ ಬಳಿಕವೇ ಈ ಪ್ರಕರಣದ ಸತ್ಯಾ ಸತ್ಯತೆ ಬೆಳಕಿಗೆ ಬರಲಿದೆ.