22 ವರ್ಷಗಳ ಬಳಿಕ ದ್ವೇಷ ಸಾಧನೆ: ಮಂಗಳೂರಿನಲ್ಲೊಂದು ವಿಚಿತ್ರ ರಿವರ್ಸ್ ಲವ್ ಜಿಹಾದ್!
ಮಂಗಳೂರು, ಸೆಪ್ಟೆಂಬರ್ 9: ಆ ದಂಪತಿಯದ್ದು ಅಂತರ್ಧರ್ಮ ವಿವಾಹ. ಮದುವೆಯಾಗಿ 22 ವರ್ಷಗಳೇ ಕಳೆದಿವೆ. ಗಂಡ ಮೆಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದರೆ, ಮಡದಿ ಮನೆ ಮನೆಗೆ ಹೋಗಿ ಮುಸುರೆ ತಿಕ್ಕಿ ಜೀವನ ಮಾಡುತ್ತಿದ್ದರು. ಬಡತನವಿದ್ದರೂ ಆ ದಂಪತಿಯ ಪ್ರೀತಿಗೆ ಮಾತ್ರ ಸಿರಿತನವಿತ್ತು.
ಗಂಡ- ಹೆಂಡತಿ ಒಟ್ಟಾಗಿ ದುಡಿದು ಮಗಳನ್ನು ಎಂ.ಎಸ್ಸಿ ಪದವಿ ಶಿಕ್ಷಣ ಕೊಡಿಸಿದರು. ಮಗಳ ಮದುವೆ ಮಾಡಿ ಮತ್ತೆ ನೆಮ್ಮದಿಯ ಜೀವನ ನಡೆಸುವ ಯೋಚನೆಯೂ ಅವರಲ್ಲಿತ್ತು. ಹೀಗಾಗಿ ಮಗಳಿಗೆ ಒಳ್ಳೇ ಉದ್ಯೋಗದಲ್ಲಿರುವ ಯುವಕನ ಜೊತೆ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ಮಾಡಿದರು. ಆದರೆ ನಿಶ್ಚಿತಾರ್ಥವಾದ ಎರಡೇ ದಿನದಲ್ಲಿ ಮಗಳು ನಾಪತ್ತೆಯಾಗಿದ್ದಾಳೆ. ತಾಯಿಯ ಒಡವೆ, ಹಣದೊಂದಿಗೆ ಮನೆ ಬಿಟ್ಟು ಪರಾರಿಯಾಗಿದ್ದಾಳೆ. ಮಗಳು ಹೀಗೆ ಪರಾರಿಯಾಗುವುದಕ್ಕೆ ಇದ್ದ ಒಂದೇ ಒಂದು ಕಾರಣ 22 ವರ್ಷಗಳ ದ್ವೇಷ!
ಕೇರಳದಲ್ಲಿ ಅನ್ಲಾಕ್: ಗಡಿಯಲ್ಲಿ ಪ್ರವೇಶ ನಿರ್ಬಂಧ ಮಾಡಿದ ದಕ್ಷಿಣ ಕನ್ನಡ ಜಿಲ್ಲಾಡಳಿತ!
ತಮಗೊಂದು ತುತ್ತು ಅನ್ನ ಇಲ್ಲದಿದ್ದರೂ ತನ್ನ ಮಕ್ಕಳಿಗೆ ಬಡತನದ ಬೇಗೆ ತಾಗಬಾರದೆಂದು ಮಂಗಳೂರಿನ ಯಶೋಧಾ- ವೀರೇಶ್ ದಂಪತಿ ಹಗಳಿರುಳು ಕಷ್ಟ ಪಟ್ಟಿದ್ದರು. ವೀರೇಶ್- ಯಶೋಧಾ ದಂಪತಿ ಮದುವೆಯಾಗಿ 22 ವರ್ಷಗಳಾಗಿವೆ. ಮುಸ್ಲಿಂ ಧರ್ಮದವರಾದ ಯಶೋಧಾ, ವೀರೇಶ್ ಜೊತೆ ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು.
ಒಮ್ಮೆ ಮಾತ್ರ ತವರುಮನೆ ಹೊಸಲು ತುಳಿದಿದ್ದರು
ಯಶೋಧಾ ಈ ಹಿಂದಿನ ಹೆಸರು ಹಜರತ್. ಗದಗ ಜಿಲ್ಲೆಯ ಸಣ್ಣ ಹಳ್ಳಿಯ ಮೂಲದವರಾದ ಈ ದಂಪತಿ ಮಂಗಳೂರಿಗೆ ಬಂದು ಫ್ಲ್ಯಾಟ್ ಒಂದರಲ್ಲಿ ವಾಚ್ಮ್ಯಾನ್ ಆಗಿ ಜೀವನ ಕಂಡಿದ್ದರು. ಇಬ್ಬರೂ ಕೆಲಸಕ್ಕೆ ಹೋಗುತ್ತಾ ಮಗ ಮತ್ತು ಮಗಳಿಗೆ ಉತ್ತಮ ಶಿಕ್ಷಣವನ್ನು ನೀಡಿದ್ದರು.
ಮದುವೆಯಾದ ಆರಂಭದಲ್ಲಿ ಯಶೋಧಾ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದರೂ, ಆ ಬಳಿಕ ಯಾವುದೇ ಮಾತುಕತೆಗಳಿರಲಿಲ್ಲ. ಯಶೋಧಾ ಮದುವೆಯಾಗಿ ಇಷ್ಟು ವರ್ಷದಲ್ಲಿ ಒಮ್ಮೆ ಮಾತ್ರ ತವರುಮನೆ ಹೊಸಲು ತುಳಿದಿದ್ದರು. ಗಂಡ ಮತ್ತು ಕುಟುಂಬದ ಜೊತೆ ಮಂಗಳೂರಿನಲ್ಲಿ ನೆಮ್ಮದಿಯ ಜೀವನ ಮಾಡುತ್ತಿದ್ದರು. ಯಶೋಧಾರ ಮಗಳು ರೇಷ್ಮಾ ಎಂ.ಎಸ್ಸಿ ಪದವೀಧರೆಯಾಗಿದ್ದು, ಮಗ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದಾನೆ.ಹೂವಿನಹಡಗಲಿ ಮೂಲದ ವ್ಯಕ್ತಿಯ ಜೊತೆ ನಿಶ್ಚಿತಾರ್ಥ
ಪ್ರಾಯಕ್ಕೆ ಬಂದ ಮಗಳಿಗೆ ಮದುವೆ ಮಾಡಿ ಜವಾಬ್ದಾರಿಯನ್ನು ಕಡಿಮೆ ಮಾಡಬೇಕೆಂದು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಹೂವಿನಹಡಗಲಿ ಮೂಲದ ವ್ಯಕ್ತಿಯ ಜೊತೆ ರೇಷ್ಮಾ ನಿಶ್ಚಿತಾರ್ಥವನ್ನೂ ಈ ದಂಪತಿ ಮಾಡಿದ್ದರು. ನಿಶ್ಚಿತಾರ್ಥ ಸಂದರ್ಭದಲ್ಲಿ ರೇಷ್ಮಾಗೆ ಯುವಕನ ಕಡೆಯವರು ಆಭರಣಗಳನ್ನೆಲ್ಲಾ ಹಾಕಿದ್ದರು. ನಿಶ್ಚಿತಾರ್ಥವಾದ ಎರಡೇ ದಿನದಲ್ಲಿ ಕಾಲೇಜಿಗೆ ಪ್ರಾಕ್ಟಿಕಲ್ ಕ್ಲಾಸ್ ಅಂತಾ ಹೋದ ರೇಷ್ಮಾ ಆ ಬಳಿಕ ಧಿಡೀರ್ ನಾಪತ್ತೆಯಾಗಿದ್ದಳು. ಸಂಜೆಯಾಗುತ್ತಿದ್ದರೂ ಮಗಳು ಮನೆಗೆ ಬಾರದಿರುವುದರಿಂದ ಆತಂಕಗೊಂಡ ಯಶೋಧಾ ಮಂಗಳೂರಿನ ಬರ್ಕೆ ಠಾಣೆಯಲ್ಲಿ ನಾಪತ್ತೆ ಬಗ್ಗೆ ದೂರನ್ನು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ನಾಪತ್ತೆ ಪ್ರಕರಣವನ್ನು ಕೆದಕಿದಾಗ ಅಲ್ಲಿ ಕಂಡುಬಂದಿದ್ದು 22 ವರ್ಷಗಳ ದ್ವೇಷ ಸಾಧನೆ.
ವೀರೇಶ್ ಜೊತೆ ಮದುವೆಯಾದ ಹಜರತ್ @ಯಶೋಧಾ
22 ವರ್ಷಗಳ ಹಿಂದೆ ಮಾತು ಮೀರಿ ಅನ್ಯ ಧರ್ಮೀಯನಾದ ವೀರೇಶ್ ಜೊತೆ ಮದುವೆಯಾದ ಹಜರತ್ @ಯಶೋಧಾ ಮೇಲೆ ಈಗ ತವರು ಮನೆಯವರು ದ್ವೇಷ ಸಾಧಿಸಿಕೊಂಡಿದ್ದಾರೆ. ಯಶೋಧಾ ಮಗಳು ರೇಷ್ಮಾ ಮನಪರಿವರ್ತನೆ ಮಾಡಿ ಮತ್ತೆ ಮೂಲಧರ್ಮಕ್ಕೆ ಕರೆತರಲು ಪ್ಲ್ಯಾನ್ ಮಾಡಿದ ಯಶೋಧಾ ಅಣ್ಣ, ತನ್ನ ಸ್ವಂತ ಅಕ್ಕನ ಮಗ ಅಕ್ಬರ್ನಿಗೆ ರೇಷ್ಮಾಳನ್ನು ಮದುವೆ ಮಾಡಿಕೊಡಲು ನಿರ್ಧರಿಸಿದ್ದಾನೆ. ಈ ಬಗ್ಗೆ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದ್ದು, ಪೊಲೀಸ್ ವಿಚಾರಣೆ ವೇಳೆ ರೇಷ್ಮಾ, ನಾನೀಗ ವಯಸ್ಕಳಾಗಿದ್ದು, ಯಾರನ್ನು ಮದುವೆಯಾಗಬೇಕೆಂಬ ನಿರ್ಧಾರ ಮಾಡುವ ಹಕ್ಕಿದೆ. ತಾಯಿ ಮನೆಗೆ ಮತ್ತೆ ಬರಲ್ಲ ಅಂತಾ ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾಳೆ.
ಯಶೋಧಾಗೆ ಆಕಾಶವೇ ತಲೆಗುರುಳಿದಂತಾಗಿದೆ
ಮಗಳ ಈ ಮಾತು ಕೇಳಿ ಯಶೋಧಾಗೆ ಆಕಾಶವೇ ತಲೆಗುರುಳಿದಂತಾಗಿದೆ. ಮನೆಯಿಂದ ಹೋಗುವಾಗ ರೇಷ್ಮಾ ಚಿನ್ನಾಭರಣ ಸಹಿತ, ತಾಯಿ ಕಷ್ಟಪಟ್ಟು ದುಡಿದು, ಬ್ಯಾಂಕ್ನಲ್ಲಿರಿಸಿದ 95,000 ಹಣವನ್ನೂ ತೆಗೆದುಕೊಂಡು ಹೋಗಿದ್ದಾಳೆ. ಮಗಳು ಮತ್ತೆ ಮನೆಗೆ ಬರುತ್ತಾಳೆಂದು ಆಸೆಗಣ್ಣುಗಳಿಂದ ಕಾಯುತ್ತಿರುವ ಯಶೋಧಾ, ಕಷ್ಟಪಟ್ಟು ಸಾಕಿದ ಮಗಳು, ನಿಷ್ಕರುಣಿಯಾಗಿ ಹೋಗಿ ಈಗ ಸಂಬಂಧದಲ್ಲಿ ಅಣ್ಣನಾಗಬೇಕಾಗಿದ್ದವನನ್ನೇ ಮದುವೆಯಾಗುತ್ತಿರುವುದಕ್ಕೆ ಕಂಗಾಲಾಗಿದ್ದಾರೆ.
ಒಟ್ಟಿನಲ್ಲಿ ಕೂಲಿ ಕೆಲಸ ಮಾಡಿ, ಹೊಟ್ಟೆ- ಬಟ್ಟೆ ಕಟ್ಟಿ, ಬಡತನ ಅಂದರೆ ಏನೆಂದು ತಿಳಿಯದಂತೆ ಬೆಳೆಸಿದ ಮಗಳು ಎದೆಯೆತ್ತರಕ್ಕೆ ಬಂದಾಗ ತಂದೆ ತಾಯಿಯನ್ನೇ ಕಡೆಗಣಿಸಿ ಹೋಗಿರುವುದು ಮಾತ್ರ ದುರಂತವಾಗಿದೆ. 22 ವರ್ಷಗಳ ದ್ವೇಷ ಸಾಧಿಸಿದ ಖುಷಿ ತವರು ಮನೆಯವರದ್ದಾದರೆ, ಯಾರದ್ದೋ ಮಾತು ಕೇಳಿ ಮಗಳು ಮನೆ ಬಿಟ್ಟು ಹೋದ ದುಃಖ ತಂದೆ- ತಾಯಿಯದ್ದಾಗಿದೆ.