ರಾಜೀನಾಮೆ ನೀಡಿದ ಡಿಸಿ ಸಸಿಕಾಂತ್ ಸೆಂಥಿಲ್ ವಿರುದ್ದ ಭಾರೀ ಭ್ರಷ್ಟಾಚಾರದ ಆರೋಪ
ಮಂಗಳೂರು, ಸೆ 9: "ಪ್ರಜಾಪ್ರಭುತ್ವದ ಅಡಿಗಲ್ಲೇ ಕುಸಿಯುತ್ತಿದೆ; ಇಲ್ಲಿರಲಾರೆ" ಎಂದು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ವಿರುದ್ದ, ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.
" ದಕ್ಷಿಣಕನ್ನಡ ಜಿಲ್ಲೆಯ ಮರಳುಗಾರಿಕೆ ಟೆಂಡರ್ ನಲ್ಲಿ ಜಿಲ್ಲಾಧಿಕಾರಿಗಳು ಅಕ್ರಮ ಎಸಗಿದ್ದಾರೆ" ಎಂದು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ ಮತ್ತು ಮರಳು ಜಂಟಿ ಕ್ರಿಯಾ ಸಮಿತಿ ಆರೋಪಿಸಿದೆ.
ಫ್ಯಾಸಿಸ್ಟ್ ದಾಳಿ ಸ್ಪಷ್ಟ: ರಾಜೀನಾಮೆಗೆ ಕಾರಣ ನೀಡಿದ ಸಸಿಕಾಂತ್ ಸೆಂಥಿಲ್
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸಂಘದ ಅಧ್ಯಕ್ಷರು, " ಉಡುಪಿ ಜಿಲ್ಲೆಯಲ್ಲಿ ಕಪ್ಪುಪಟ್ಟಿಗೆ ಸೇರಿರುವ ಎರಡು ಸಂಸ್ಥೆಗಳಿಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಸಂಬಂಧ ಸಸಿಕಾಂಥ್ ಸೆಂಥಿಲ್ ಅವಕಾಶ ನೀಡಿದ್ದಾರೆ" ಎಂದು ಆರೋಪಿಸಿದ್ದಾರೆ.
" ಐ ಸರ್ಜ್ ಪ್ರೈ.ಲಿಮಿಟೆಡ್ ಮತ್ತು ಟಿ4ಯು, ಈ ಎರಡು ಸಂಸ್ಥೆಗಳನ್ನು ಉಡುಪಿ ಜಿಲ್ಲಾಡಳಿತ ಕಪ್ಪು ಪಟ್ಟಿಗೆ ಸೇರಿಸಿತ್ತು. ಆದರೆ, ಈ ಎರಡು ಸಂಸ್ಥೆಗಳಿಗೆ, ಮರಳು ಲಾರಿಗಳಿಗೆ ಜಿಪಿಎಸ್ ಅಳವಡಿಸುವ ಬಿಡ್ ಅನ್ನು ನೀಡಲಾಗಿದೆ" ಎಂದು, ಸಸಿಕಾಂತ್ ವಿರುದ್ದ ಆರೋಪಿಸಲಾಗಿದೆ.
" ಇಷ್ಟೇ ಅಲ್ಲದೇ, ಜಿಲ್ಲೆಯ ಹಳೆಯಂಗಡಿ ಭಾಗದಲ್ಲಿ, ಹೂಳೆತ್ತಲಾಗಿದ್ದ ಹತ್ತು ಸಾವಿರಕ್ಕೂ ಹೆಚ್ಚು ಮೆಟ್ರಿಕ್ ಟನ್ ಮರಳನ್ನು, ಒಂದೇ ದಿನದಲ್ಲಿ ವಿಲೇವಾರಿ ಮಾಡಿ, ಮರಳು ರವಾನಿಸಲು ಸಸಿಕಾಂತ್ ಸೆಂಥಿಲ್ ಅವಕಾಶ ನೀಡಿದ್ದಾರೆ" ಎಂದು ಸಂಘದ ಅಧ್ಯಕ್ಷರು ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ
" ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅದು ಹೇಗೆ, ಒಂದೇ ದಿನದಲ್ಲಿ ಟೆಂಡರ್ ಕರೆದು, ಮರಳು ವಿಲೇವಾರಿ ಮಾಡುತ್ತಾರೆ" ಎಂದು ಅಧ್ಯಕ್ಷರು ಪ್ರಶ್ನಿಸಿದ್ದಾರೆ.