Stories Of Strength: ಕೊರೊನಾ ಗೆದ್ದ ದಕ್ಷಿಣ ಕನ್ನಡದ ಸಿಯೋನ್ ಆಶ್ರಮ ವಾಸಿಗಳು
ಮಂಗಳೂರು, ಜೂನ್ 28: ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಬೆಳ್ತಂಗಡಿಯ ಸಿಯೋನ್ ಆಶ್ರಮದ ಕೊರೊನಾ ಸ್ಫೋಟದಲ್ಲಿ, ಆಶ್ರಮ ವಾಸಿಗಳು ಕೊರೊನಾ ಗೆದ್ದು, ಸಾಹಸ ಮೆರೆದಿದ್ದಾರೆ.
ಆಶ್ರಮದಲ್ಲಿ ಒಟ್ಟು 270 ಜನರಿದ್ದು, ಕೊರೊನಾ ಟೆಸ್ಟ್ ನಡೆಸಿದಾಗ 225ಕ್ಕೂ ಹೆಚ್ಚು ಜನರಿಗೆ ಕೊರೊನಾ ಕಾಣಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಎಲ್ಲರಿಗೂ ಕೊರೊನಾ ನೆಗೆಟಿವ್ ಆಗಿದ್ದು, ಕೊವೀಡ್ ಕೇರ್ ಸೆಂಟರ್ನಲ್ಲಿದ್ದ ಸುಮಾರು 150ಕ್ಕೂ ಹೆಚ್ಚು ಮಂದಿ ಸಂಪೂರ್ಣ ಗುಣಮುಖರಾಗಿ ಈಗ ಮತ್ತೆ ಆಶ್ರಮ ಸೇರಿದ್ದಾರೆ.
Stories Of Strength: ಕೊರೊನಾ ಮಣಿಸಿದ ಬೆಳ್ತಂಗಡಿಯ 13 ಜನರ ಅವಿಭಕ್ತ ಕುಟುಂಬ
ಧರ್ಮಸ್ಥಳದ ರಜತಾದ್ರಿ ವಸತಿಗೃಹದಲ್ಲಿ 150 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಒಂದು ತಿಂಗಳ ಚಿಕಿತ್ಸೆಯ ಬಳಿಕ ಈಗ ಎಲ್ಲರೂ ಗುಣಮುಖರಾಗಿದ್ದಾರೆ. ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮುತುವರ್ಜಿಯಲ್ಲಿ ಆಶ್ರಮವಾಸಿಗಳ ಆರೈಕೆಯನ್ನು ಮಾಡಲಾಗಿತ್ತು.
ಸಂಪೂರ್ಣ ಗುಣಮುಖರಾದವರೆಲ್ಲರನ್ನೂ ಸಿಯೋನ್ ಆಶ್ರಮಕ್ಕೆ ಮತ್ತೆ ಕರೆದುಕೊಂಡು ಬರಲಾಗಿದ್ದು, ಆಶ್ರಮದ ಸಿಬ್ಬಂದಿ ಮತ್ತು ನೆರಿಯಾ ಗ್ರಾಮಸ್ಥರು ಕೊರೊನಾ ಗೆದ್ದ ಆಶ್ರಮ ವಾಸಿಗಳಿಗೆ ಸ್ವಾಗತ ಕೋರಿದ್ದಾರೆ. ಆಶ್ರಮವೇ ಕೊರೊನಾ ಗೆದ್ದ ಖುಷಿಯಲ್ಲಿ ಇಡೀ ಆಶ್ರಮಕ್ಕೆ ಸುಣ್ಣ- ಬಣ್ಣ ಬಳಿದು ಸಿಂಗರಿಸಲಾಗಿತ್ತು.
ಈ ಸಂದರ್ಭದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ಆಶ್ರಮದ ಅಭಿವೃದ್ಧಿಗೆ 50 ಲಕ್ಷ ರೂಪಾಯಿ ಘೋಷಣೆ ಮಾಡಿದ್ದಾರೆ. ಸಿಯೋನ್ ಆಶ್ರಮದ 126 ಮಂದಿ ಪುರುಷರು, 100 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 126 ಮಂದಿ ಸೋಂಕಿತರಾಗಿದ್ದರು.