ರಂಗಮಂದಿರ ಸೇರಿ ಹಲವು ಬೇಡಿಕೆ ಈಡೇರಿಕೆಗೆ ಸಚಿವೆ ಜಯಮಾಲಾಗೆ ಮನವಿ
ಮಂಗಳೂರು, ಜುಲೈ 24: ಅಶಕ್ತ ಕಲಾವಿದರಿಗೆ ನೀಡುವ ಮಾಶಾಸನವನ್ನು ಒಂದೂವರೆ ಸಾವಿರದಿಂದ ಐದು ಸಾವಿರಕ್ಕೆ ಏರಿಸಬೇಕು. ಜಿಲ್ಲೆಯಲ್ಲಿ ರಂಗಮಂದಿರದ ನಿರ್ಮಾಣ ಮಾಡಬೇಕು ಎಂದು ಸಚಿವೆ ಜಯಮಾಲಾ ಅವರಿಗೆ ತುಳುನಾಟಕ ಕಲಾವಿದರ ಒಕ್ಕೂಟ ಸಂಸ್ಥೆಯು ಮನವಿ ಸಲ್ಲಿಸಿತು.
ಜಿಲ್ಲೆಗೆ ಭೇಟಿ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರನ್ನು ಭೇಟಿಯಾದ ತುಳುನಾಟಕ ಕಲಾವಿದರ ಒಕ್ಕೂಟ ಸಂಸ್ಥೆಯ ಅಧ್ಯಕ್ಷ ಡಿ.ಶೆಟ್ಟಿ ಹಾಗೂ ನಿಯೋಗವು ಸರ್ಕ್ಯೂಟ್ ಹೌಸ್ನಲ್ಲಿ ಭೇಟಿ ಆಗಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಳುಸಾಹಿತ್ಯ ಅಕಾಡೆಮಿಯಿಂದ ನಾಟಕ ಪ್ರದರ್ಶನಗಳಿಗೆ ಅನುದಾನ ನೀಡಲು ಕಾನೂನು ತೊಡಕಿದ್ದು ಅದನ್ನು ಹೋಗಲಾಡಿಸಬೇಕು ಅಲ್ಲದೆ ತುಳುರಂಗಭೂಮಿಗೆ ಬೇಕಾದ ಮೂಲಭೂತ ಸೌಕರ್ಯಗಳ ಕುರಿತು ಮನವಿ ಸಲ್ಲಿಸಿದರು.
ಆಷಾಢ ಮಾಸದಲ್ಲಿ ಮಾರಿ ಓಡಿಸಲು ತುಳುನಾಡಿನ ಮನೆ ಮನೆಗೆ ಬರುವ ಆಟಿ ಕಳೆಂಜ
ಜಯಮಾಲ ಅವರಿಗೆ ನೀಡಿದ ಮನವಿಯಲ್ಲಿ ಅಶಕ್ತ ಅರ್ಹ ಕಲಾವಿದರಿಗೆ ನೀಡುತ್ತಿರುವ ಮಾಶಾಸನ ರೂ.1,500 ರೂಪಾಯಿಯನ್ನು 5,000ಕ್ಕೆ ಹೆಚ್ಚಿಸಬೇಕು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗಳಿಗೆ, ತುಳುನಾಟಕ ಪ್ರದರ್ಶನಗಳಿಗೆ ಅನುದಾನ ನೀಡಲು ಕಾನೂನಿನ ತೊಂದರೆಯಿರುವುದರಿಂದ ರಂಗ ಚಟುವಟಿಕೆಗಳು ಕುಂಠಿತವಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಿ ರಂಗಭೂಮಿಯ ಬೆಳವಣಿಗೆಗೆ ಸಹಕರಿಸಬೇಕೆಂದು ಜಯಮಾಲ ಅವರಲ್ಲಿ ನಿಯೋಗ ಕೋರಿಕೊಂಡಿತು.
ಜಿಲ್ಲೆಯಲ್ಲಿ ಮಹಿಳಾ ನಾಟಕೋತ್ಸವ, ಮಕ್ಕಳ ನಾಟಕೋತ್ಸವ, ಕಾಲೇಜು ರಂಗೋತ್ಸವ, ರಂಗ ತರಬೇತಿ ಶಿಬಿರ, ರಂಗ ಪ್ರಾತ್ಯಕ್ಷಿಕೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆರ್ಥಿಕ ನೆರವು, ಅಂತರಾಷ್ಟ್ರೀಯ ಮಟ್ಟದಲ್ಲಿ ತುಳುನಾಟಕ ಪ್ರದರ್ಶಿಸುವ ತಂಡಗಳಿಗೆ ವಿಶೇಷ ಯೋಜನೆಯಡಿಯಲ್ಲಿ ವಿವಿಧ ಸೌಲಭ್ಯ ನೀಡಬೇಕೆಂದು ಸಚಿವೆ ಅವರ ಬಳಿ ಮನವಿ ಮಾಡಿದರು.
ಉಡುಪಿಯಲ್ಲಿ ಮದಿರಂಗಿ ರಂಗ್: ಅಪ್ಪಟ ದೇಸಿ ಸ್ಪರ್ಧೆಯಲ್ಲಿ ಮಿಂದೆದ್ದ ಜನ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಂದರ್ಭಗಳಲ್ಲಿ ತುಳು ನಾಟಕರಂಗದ ಅರ್ಹ ಸಾಧಕ ಕಲಾವಿದರನ್ನು ಗುರುತಿಸುವುದು, ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ತುಳು ಮಾತೃಭಾಷೆಯ ಕಲಾವಿದರಿಗೂ ಸದಸ್ಯತನ ನೀಡುವುದು ಹಾಗೂ ಅಕಾಡೆಮಿ ಪ್ರಶಸ್ತಿಗೂ ತುಳುನಾಟಕ ರಂಗದ ಅರ್ಹ ಕಲಾವಿದರನ್ನು ಪರಿಗಣಿಸುವುದು, ರಂಗಭೂಮಿಗೆ ಸಂಬಂಧಿಸಿದಂತೆ ಸಲಕರಣೆಗಳನ್ನು ಖರೀದಿಸಲು ಆರ್ಥಿಕ ನೆರವು, ಹಾಗೂ ನಾಡಹಬ್ಬ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಳುನಾಡಿನ ವೀರಪುರುಷರ, ಮಹಿಳಾಮಣಿಗಳ, ಸ್ವಾಂತಂತ್ರ್ಯ ಹೋರಾಟಗಾರರ, ಕುರಿತಾದ ನಾಟಕ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ನಿಯೋಗದಲ್ಲಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರು, ರಂಗಕರ್ಮಿ ವಿ.ಜಿ ಪಾಲ್, ಪ್ರದೀಪ್ ಆಳ್ವ ಕದ್ರಿ, ಮೋಹನ್ ಕೊಪ್ಪಳ ಕದ್ರಿ. ಗೋಕುಲ್ ಕದ್ರಿ ಮೊದಲಾದವರು ಉಪಸ್ಥಿತರಿದ್ದರು.