ಮಂಗಳೂರಿನಲ್ಲಿ ಮತಾಂತರ ಜಾಲ ಸಕ್ರಿಯ; ಮನೆ ಹೊರಗೆ ಕ್ರೈಸ್ತ ಧರ್ಮ ಪ್ರಚಾರದ ಪುಸ್ತಕಗಳನ್ನಿಟ್ಟು ವ್ಯಕ್ತಿ ಪರಾರಿ
ಮಂಗಳೂರು, ಸೆಪ್ಟೆಂಬರ್ 25: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಜಾರಿ ಮಾಡಬೇಕೆಂಬ ಒತ್ತಾಯ ಜೋರಾಗಿದೆ. ಇತ್ತೀಚಿಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಗಂಭೀರ ಚರ್ಚೆಗಳು ನಡೆದಿವೆ.
ವಿಧಾನಸಭೆಯಲ್ಲಿ ಮತಾಂತರ ನಿಷೇಧದ ಬಗ್ಗೆ ಚರ್ಚೆಯಾಗುತ್ತಿರುವಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಮತಾಂತರ ನಡೆಸಲು ಪ್ರಯತ್ನಿಸಲಾಗುತ್ತಿದೆ ಎಂಬ ಅನುಮಾನ ಕಾಡಲಾರಂಭಿಸಿದೆ. ಅದರಲ್ಲೂ ಮತಾಂತರ ವಿಚಾರದಲ್ಲಿ ಈ ಹಿಂದೆ ಹೊತ್ತಿ ಉರಿದಂತಹ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರನ್ನು ಮತಾಂತರಗೊಳಿಸುವ ಪ್ರಕ್ರಿಯೆ ಗೌಪ್ಯವಾಗಿ ನಡೆಯುತ್ತಿದೆ ಎಂಬ ವಿಚಾರಕ್ಕೆ ಸದ್ಯ ಪುಷ್ಠಿ ಸಿಕ್ಕಿದೆ.
ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ ಸುಮಾರು 15 ಹಿಂದೂಗಳ ಮನೆಯ ಮುಂದೆ ಅಪರಿಚಿತ ವ್ಯಕ್ತಿಯೋರ್ವ ಕ್ರೈಸ್ತ ಧರ್ಮವನ್ನು ಪ್ರಚೋದಿಸುವ ಪತ್ರಗಳನ್ನು ಇಟ್ಟು ಹೋಗಿದ್ದು, ಮತಾಂತರದ ಜಾಲ ಮತ್ತೆ ಸಕ್ರಿಯವಾಗಿರುವ ಬಗ್ಗೆ ಅನುಮಾನ ಮೂಡಿಸಿದೆ.
ಮಂಗಳೂರು ನಗರ ಹೊರವಲಯದ ಸೋಮೇಶ್ವರದಲ್ಲಿರುವ ಉಳ್ಳಾಲ ರೈಲ್ವೇ ನಿಲ್ದಾಣದ ಹಿಂಭಾಗದ 15ಕ್ಕೂ ಅಧಿಕ ಮನೆಗಳ ಗೇಟುಗಳಲ್ಲಿ ಅಪರಿಚಿತ ವ್ಯಕ್ತಿಯೋರ್ವ ಕ್ರೈಸ್ತ ಧರ್ಮ ಪ್ರಚೋದಿಸುವ ಭಿತ್ತಿಪತ್ರ ಹಾಗೂ ಪುಸ್ತಕಗಳನ್ನು ಇಟ್ಟಿದ್ದಾನೆ. ಲುಂಗಿ ಧರಿಸಿ ಬಂದ ವ್ಯಕ್ತಿ ಸುಮಾರು 15 ಮನೆಗಳ ಗೇಟಿನಲ್ಲಿ ಕ್ರೈಸ್ತ ಧರ್ಮಕ್ಕೆ ಕುರಿತಾದ ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿರುವ ಎರಡು ಪುಸ್ತಕಗಳನ್ನು, ಭಿತ್ತಿ ಪತ್ರಗಳನ್ನು ಇಟ್ಟು ಪರಾರಿಯಾಗಿದ್ದಾನೆ.
ಇನ್ನೊಂದು ಮನೆಯ ಗೇಟಿನಲ್ಲಿ ವ್ಯಕ್ತಿ ಪುಸ್ತಕಗಳನ್ನು ಇಡುವ ಸಂದರ್ಭದಲ್ಲಿ ಮನೆಯಲ್ಲಿದ್ದ ಆತನನ್ನು ಸೇಲ್ಸ್ಮ್ಯಾನ್ ಅಂತಾ ಭಾವಿಸಿ ತಮಗೆ ಯಾವುದೇ ವಸ್ತುಗಳು ಬೇಡ ಅಂತಾ ಹೇಳಿದ್ದಾರೆ. ಈ ವೇಳೆ ವ್ಯಕ್ತಿ ಪುಸ್ತಕ ಇಟ್ಟು ಪರಾರಿಯಾಗಿದ್ದಾನೆ. ಇದರಿಂದ ಸಂಶಯಗೊಂಡ ವೃದ್ಧೆ ಗೇಟು ಬಳಿ ಹೋಗಿ ಪರಿಶೀಲನೆ ನಡೆಸಿದಾಗ, ಕ್ರೈಸ್ತ ಧರ್ಮ ಸೇರಲು ಪ್ರಚೋದಿಸುವ ಪುಸ್ತಕಗಳು ಪತ್ತೆಯಾಗಿದೆ.
ಘಟನೆಯಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು, ಮತಾಂತರ ನಡೆಸುವ ಉದ್ದೇಶದಿಂದಲೇ ಕೃತ್ಯ ಎಸಗಲಾಗಿದೆ ಅನ್ನುವ ಆರೋಪ ವ್ಯಕ್ತವಾಗಿದೆ. ಘಟನೆಯ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಉಳ್ಳಾಲ ರೈಲ್ವೇ ನಿಲ್ದಾಣ ಮತ್ತು ಪುರಸಭೆ ಬಳಿ ಜಮಾಯಿಸಿದ ನೂರಾರು ಹಿಂದೂ ಕಾರ್ಯಕರ್ತರು ಮತಾಂತರ ಮಾಡಲು ಬಂದ ಅಪರಿಚಿತನನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಪೊಲೀಸರಿಗೆ ಒತ್ತಾಯ ಮಾಡಿದ್ದಾರೆ.
ಉಳ್ಳಾಲ ಕೋಮುಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಮತಾಂತರ ಮಾಡಲು ಕರಾವಳಿ ಭಾಗದ ಕ್ರೈಸ್ತ ಮಿಷನರಿಗಳು ಸಾಥ್ ನೀಡುತ್ತಿವೆ. ಅದರಿಂದ ರೈಲಿನಲ್ಲಿ ಬರುವ ಹೊರ ರಾಜ್ಯದ ಕ್ರೈಸ್ತ ಧರ್ಮ ಪ್ರಚಾರಕರು, ಧೈರ್ಯವಾಗಿ ಭಿತ್ತಿ ಪತ್ರ, ಪುಸ್ತಕಗಳನ್ನು ಹಂಚಿ, ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಪ್ರಚೋದನೆ ನೀಡುತ್ತಿದ್ದಾರೆ.
ಕೆಲವು ಕಡೆ ಮುಗ್ಧ ಜನರನ್ನು ಚರ್ಚ್ಗೆ ಪ್ರಾರ್ಥನೆಗೆ ಕರೆಯುವ ವಿಚಾರವೂ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಪೊಲೀಸರು ತಕ್ಷಣ ಬಂಧಿಸಬೇಕು. ಬಂಧಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಭಜರಂಗದಳ ನೀಡಿದೆ.