ಮಂಜುನಾಥನ ಸನ್ನಿಧಿಯಲ್ಲಿ "ಈಶ್ವರಾರ್ಪಣ' ಕೃತಿ ಬಿಡುಗಡೆ
ಉಡುಪಿ, ಜನವರಿ 21: ಉಡುಪಿಯ ಖ್ಯಾತ ಪತ್ರಕರ್ತ ಎ.ಈಶ್ವರಯ್ಯ ಅವರ ಸಂಸ್ಮರಣೆ ಗ್ರಂಥ 'ಈಶ್ವರಾರ್ಪಣ' ವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬುಧವಾರ ಬಿಡುಗಡೆಗೊಳಿಸಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹರಿಕಾರರಾಗಿ ದುಡಿದಿದ್ದ ಖ್ಯಾತ ವಿಮರ್ಶಕ ಎ.ಈಶ್ವರಯ್ಯನವರ ಸಂಸ್ಮರಣ ಗ್ರಂಥದ ಕುರಿತಾಗಿ ಪುಸ್ತಕದ ಸಂಪಾದಕ ಪ್ರೊ.ಅರವಿಂದ ಹೆಬ್ಬಾರ್ ವಿವರ ನೀಡಿದರು.
ಹೊಸ ಸಾಹಸಕ್ಕೆ ಮುಂದಾದ ಉಡುಪಿಯ ಈಜುಗಾರ ಗಂಗಾಧರ
ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪುಸ್ತಕದ ಮುದ್ರಣಕ್ಕೆ ನೆರವಾದ ರಾಧಿಕಾ ಶಂಕರನಾರಾಯಣ ದಂಪತಿಯನ್ನು ಈ ವೇಳೆ ಸನ್ಮಾನಿಸಿದರು. ಬಳಿಕ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಈಶ್ವರಯ್ಯನವರು ಮಹಾ ಸಾತ್ವಿಕ ಮತ್ತು ವಿದ್ವಾಂಸ. ಸಂಗೀತ, ಯಕ್ಷಗಾನ, ಛಾಯಾಚಿತ್ರಗ್ರಹಣ, ಆಧುನಿಕ ವಿಜ್ಞಾನ, ತಾಂತ್ರಿಕತೆ ಮೊದಲಾದ ಹಲವಾರು ಕಲಾಪ್ರಕಾರಗಳಲ್ಲಿ ಅಪಾರ ಜ್ಞಾನ ಹೊಂದಿದ್ದರು ಎಂದರು.
ಧರ್ಮಸ್ಥಳ ಕ್ಷೇತ್ರದ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿರುವ ಕ್ಯಾಮೆರಾಗಳ ಬಗ್ಗೆ ಕರಾರುವಾಕ್ಕಾದ ಮಾಹಿತಿ ಒದಗಿಸಿ ಕೊಟ್ಟಿದ್ದರು. ಸಮಾಜ ಯಾವತ್ತೂ ಅವರನ್ನು ಮರೆಯಬಾರದು. ಅವರ ಸಾಮರ್ಥ್ಯ ಬಿಂಬಿಸುವ ನಿಟ್ಟಿನಲ್ಲಿ ಈ ಪುಸ್ತಕ ಉತ್ತಮ ದಾಖಲೆಯಾಗಲಿದೆ ಎಂದು ಹೇಳಿದರು.
ಉಡುಪಿಯ ರಾಗಧನದ ಅಧ್ಯಕ್ಷ ಡಾ. ಕಿರಣ್ ಹೆಬ್ಬಾರ್, ಕಾರ್ಯದರ್ಶಿ ಉಮಾ ಶಂಕರಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಮಂಗಳೂರಿನ ಮಣಿಕೃಷ್ಣಸ್ವಾಮಿ ಅಕಾಡೆಮಿಯ ಪಿ.ನಿತ್ಯಾನಂದ ರಾವ್ ಮತ್ತಿತರರು ಉಪಸ್ಥಿತರಿದ್ದರು.