ಪುತ್ತೂರು: ಸಹಾಯ ಮಾಡುವಂತೆ ಕೋರಿ ಅತ್ಯಾಚಾರ ಎಸಗಿದ
ಮಂಗಳೂರು, ಜುಲೈ 6: ಪುತ್ತೂರಿನಲ್ಲಿ ನಿನ್ನೆ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಯತ್ನ ಪ್ರಕರಣ ದಾಖಲಾಗಿದ್ದು, ಇದೀಗ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ. ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಕೃತ್ಯ ಎಸಗಿದ್ದ ಪಳನೀರು ನಿವಾಸಿ ಅಜಿತ್ ಪೂಜಾರಿ (28) ಎಂಬಾತನನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲ್ಲೂಕಿನ 10ನೇ ತರಗತಿ ವಿದ್ಯಾರ್ಥಿನಿ, 15 ವರ್ಷದ ದಲಿತ ಸಮುದಾಯದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಅಜಿತ್ ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಲಕ್ಮಿ ಪ್ರಸಾದ್, ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಲಕಿಯನ್ನು ಭೇಟಿ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದರು.
ಪುತ್ತೂರಿನಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ, ಆರೋಪಿ ಬಂಧನ
ಬೆಳಿಗ್ಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿ ಬಳಿ ಬಂದ ಅಜಿತ್, ತನ್ನ ತಾಯಿ ಸೊಪ್ಪು ಕಡಿಯಲು ಬಂದು ಸುಸ್ತಾಗಿ ಗುಡ್ಡದಲ್ಲಿ ಬಿದ್ದಿದ್ದು, ಅವರನ್ನು ಎತ್ತಲು ಸಹಾಯ ಮಾಡುವಂತೆ ಬಾಲಕಿ ಬಳಿ ವಿನಂತಿಸಿದ್ದ. ಆತನ ಮಾತು ನಂಬಿದ ವಿದ್ಯಾರ್ಥಿನಿ ಆತನ ಜತೆ ಗುಡ್ಡಕ್ಕೆ ತೆರಳಿದ ಸಂದರ್ಭ ಆಕೆಯನ್ನು ಎಳೆದೊಯ್ದು, ಕಿರುಚಾಡದಂತೆ ಬಾಯಿಗೆ ಕೈಹಿಡಿದು ಮಾನಭಂಗಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಆಗ ಬಾಲಕಿ ಮೇಲೆ ಆರೋಪಿ ಆತ್ಯಾಚಾರವೆಸಗಿದ್ದಾನೆ ಎಂದು ಹೇಳಲಾಗಿದೆ.
ಘಟನೆ ಬೆಳಗ್ಗೆ 8 ಗಂಟೆಗೆ ನಡೆದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿ ಎಚ್ಚರಗೊಂಡು ಸುಮಾರು 9 ಗಂಟೆಗೆ ಮನೆಗೆ ತೆರಳಿದ್ದಾಳೆ. ಅಸ್ವಸ್ಥಗೊಂಡು ಮಲಗಿದ್ದ ಆಕೆಯನ್ನು ವಿಚಾರಿಸಿದ ಮನೆಯವರಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಬಾಲಕಿಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ತಪಾಸಣೆ ಹಿನ್ನೆಲೆಯಲ್ಲಿ ಮಂಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಅಜಿತ್ ವಿರುದ್ಧ ಸಂಪ್ಯ ಪೊಲೀಸರು ದಲಿತ ದೌರ್ಜನ್ಯ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.