ಉಗ್ರರ ವಿರುದ್ಧ ಹೋರಾಡಲು ಮಂಗಳೂರು ಪೊಲೀಸರಿಗೆ 'ರಾಣಿ' ಬಲ!
ಮಂಗಳೂರು, ಸೆಪ್ಟೆಂಬರ್ 26; ದಕ್ಷಿಣ ಕನ್ನಡ ಜಿಲ್ಲೆಗೆ ಉಗ್ರರ ಭೀತಿ ಇರೋದನ್ನು ಕೇಂದ್ರ ಗುಪ್ತಚರ ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿರಬೇಕೆಂದು ಇಲಾಖೆ ಸೂಚಿಸಿದೆ. ಹಬ್ಬದ ಸಂದರ್ಭದಲ್ಲಿ ಉಗ್ರರು ಕರಾವಳಿ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ಎಸಗಬಹುದೆಂಬ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿದೆ. ಮುನ್ನೆಚ್ಚೆರಿಕಾ ಕ್ರಮವಾಗಿ ಜನಸಂದಣಿ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜನೆ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಆದರೆ ಈ ಭೀತಿಯಿಂದ ಮಂಗಳೂರನ್ನು ರಕ್ಷಣೆ ಮಾಡಲು 'ರಾಣಿ' ಈಗ ಅಖಾಡಕ್ಕೆ ಇಳಿದಿದ್ದಾಳೆ. ಮಂಗಳೂರು ಪೊಲೀಸ್ ಇಲಾಖೆಗೆ ಸ್ಫೋಟಕ ಪತ್ತೆಗಾಗಿ 'ರಾಣಿ' ಎಂಬ ಶ್ವಾನ ಸೇರ್ಪಡೆಯಾಗಿದೆ. ಸ್ಪೋಟಕ ಪತ್ತೆ ಮಾಡಲೆಂದು ಮಂಗಳೂರು ನಗರ ಪೊಲೀಸ್ ಇಲಾಖೆಗೆ ಹೊಸ ಶ್ವಾನವೊಂದು ಸೇರ್ಪಡೆಯಾಗಿದೆ. ಬಾಂಬ್ ಸೇರಿದಂತೆ ಇತರ ಸ್ಫೋಟಕ ಪತ್ತೆಗೆ ಹೆಣ್ಣು ಶ್ವಾನವೊಂದನ್ನು ಖರೀದಿಸಲಾಗಿದೆ. ಈ ಶ್ವಾನಕ್ಕೆ 'ರಾಣಿ' ಎಂದು ಹೆಸರಿಡಲಾಗಿದೆ.
ಮಂಗಳೂರು; ಗುಂಡು ಹಾರಿಸಿ ಬೀದಿ ನಾಯಿ ಹತ್ಯೆ
'ರಾಣಿ' ಲ್ಯಾಬ್ರಡರ್ ರಿಟ್ರೀವರ್ ತಳಿಯ ಶ್ವಾನ ಮರಿಯಾಗಿದ್ದು, 2020 ಅಕ್ಟೋಬರ್ 10 ರಂದು ಹುಟ್ಟಿದೆ. ಸ್ಪೋಟಕ ಪತ್ತೆ ಕರ್ತವ್ಯ ನಿರ್ವಹಿಸುವ ಸಲುವಾಗಿ ಈ ಶ್ವಾನವನ್ನು ಬೆಂಗಳೂರಿನಲ್ಲಿ ತರಬೇತಿಗೆ ನಿಯೋಜನೆ ಮಾಡಲಾಗಿತ್ತು. ಇದೀಗ ಸ್ಪೋಟಕ ತರಬೇತಿಯನ್ನು ಪೂರ್ಣಗೊಳಿಸಿ ಮಂಗಳೂರಿಗೆ ಆಗಮಿಸಿದೆ. ಇನ್ನು ಮಂಗಳೂರು ನಗರ ಘಟಕದಲ್ಲಿ ಪೊಲೀಸ್ ಇಲಾಖೆಯಲ್ಲಿನ ಸ್ಪೋಟಕ ಪತ್ತೆ ಕರ್ತವ್ಯ ನಿರ್ವಹಣೆ ಮಾಡಲಿದೆ.
ಭದ್ರಾವತಿಯಲ್ಲಿ ಬೀದಿ ನಾಯಿಗಳ ಹತ್ಯೆ; ದೂರು ದಾಖಲು
ಮಂಗಳೂರು ನಗರ ಪೊಲೀಸ್ ಶ್ವಾನದಳದಲ್ಲಿ ಈ ಹಿಂದೆ 5 ಶ್ವಾನಗಳಿತ್ತು. ಅದರಲ್ಲಿ 'ಸುಧಾ' ಎಂಬ ಡಾಬರ್ ಮನ್ ಶ್ವಾನ ಕ್ಯಾನ್ಸರ್ನಿಂದ ಜುಲೈ ತಿಂಗಳಲ್ಲಿ ಮೃತಪಟ್ಟಿತ್ತು. 2011ರ ಮಾರ್ಚ್ 15ರಂದು ಜನಿಸಿದ್ದ 'ಸುಧಾ'ಗೆ ಮಂಗಳೂರಿನ ಶ್ವಾನದಳದಲ್ಲಿಯೇ ತರಬೇತಿ ನೀಡಲಾಗಿತ್ತು.
ವಿಡಿಯೋ; ಪುತ್ತೂರಿನಲ್ಲಿ ಮಾಸ್ಕ್ ಧರಿಸಿ ಪೇಟೆಗೆ ಬಂದ ನಾಯಿ!
ಎಂಟು ವರ್ಷಗಳ ಹಿಂದಿನ ಉಳ್ಳಾದಲ್ಲಿ ನಡೆದಿದ್ದ ವಾಚ್ಮನ್ ಕೊಲೆ ಪ್ರಕರಣ, ಕೊರಗಜ್ಜ ದೇವಾಲಯದ ಕಳವು ಪ್ರಕರಣದಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಲು ಸುಧಾ ನೆರವಾಗಿತ್ತು. ಸುಧಾ ಅಕಾಲಿಕ ಕರಣದ ಬಳಿಕ ಇದೀಗ ಆ ಜಾಗಕ್ಕೆ 'ರಾಣಿ' ಸೇರ್ಪಡೆಯಾಗಿದ್ದು, ಮತ್ತೆ ಮಂಗಳೂರು ಶ್ವಾನದಳಕ್ಕೆ ಬಲ ಬಂದಂತಾಗಿದೆ.
ಮಂಗಳೂರು ನಗರದ ಕುಂಪಲ ಮೂಲದ ಮನೋಜ್ ಶೆಟ್ಟಿ ಜಿ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರ ನಾಗೇಂದ್ರ ಎಂಬ ಇಬ್ಬರು ಶ್ವಾನ ಹ್ಯಾಂಡ್ಲರ್ ಗಳು ಬೆಂಗಳೂರಿನಲ್ಲಿ 'ರಾಣಿ'ಗೆ ಸ್ಪೋಟಕ ಪತ್ತೆಯ ಬಗ್ಗೆ ತರಬೇತಿ ನೀಡಿದ್ದಾರೆ.
2021 ಫೆಬ್ರ 16 ರಿಂದ ಸೆಪ್ಟೆಂಬರ್ 16ರವರೆಗೆ 'ರಾಣಿ'ಗೆ ತರಬೇತಿ ನೀಡಲಾಗಿದ್ದು, ತರಬೇತಿಯನ್ನು ಪೂರ್ಣಗೊಳಿಸಿ ಮಂಗಳೂರಿಗೆ ಆಗಮಿಸಿದೆ. ಮುಂದೆ ರಾಣಿ ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಸ್ಫೋಟಕ ಪತ್ತೆ ಕರ್ತವ್ಯದಲ್ಲಿ ಪೊಲೀಸರಿಗೆ ಸಹಕರಿಸಲಿದ್ದಾಳೆ.
'ರಾಣಿ' ಪ್ರತಿದಿನ ಮಂಗಳೂರು ನಗರ, ಆಕಾಶವಾಣಿ ಕೇಂದ್ರ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ತಪಾಸಣೆ ಕಾರ್ಯ ಮಾಡುತ್ತಿದ್ದಾಳೆ. ಪೊಲೀಸ್ ಸಿಬ್ಬಂದಿ ಕೊಡುವ ಪ್ರತಿ ಆದೇಶವನ್ನು 'ರಾಣಿ' ಚಾಚೂ ತಪ್ಪದೇ ಪಾಲಿಸುತ್ತಿದ್ದಾಳೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನ ದ್ವಾರದ ಬಳಿ ಈ ಹಿಂದೆ ಆದಿತ್ಯರಾವ್ ಬ್ಯಾಗ್ನಲ್ಲಿ ಬಾಂಬ್ ಇಟ್ಟು ಹೋದ ಸಂದರ್ಭದಲ್ಲಿ ಬಾಂಬ್ ಅನ್ನು ಮೊದಲು ಪತ್ತೆ ಹಚ್ಚಿದ್ದು ಕೂಡಾ ಪೊಲೀಸ್ ಇಲಾಖೆಯ ಶ್ವಾನ ಅನ್ನೋದು ಗಮನಾರ್ಹ. ಹೀಗಾಗಿ ಮಂಗಳೂರಿನ ಪೊಲೀಸ್ ಇಲಾಖೆ ಶ್ವಾನದಳವನ್ನು ಬಲಪಡಿಸಲು 'ರಾಣಿ'ಯನ್ನು ಸೇರಿಸಿಕೊಂಡಿದೆ.
ಇನ್ನು 'ರಾಣಿ' ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, "ರಾಣಿ ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿಯನ್ನು ಮುಗಿಸಿದೆ. ಪ್ರತಿದಿನ ರಾಣಿ ಮಂಗಳೂರಿನ ವಿವಿಧ ಪ್ರದೇಶಗಳು ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡುತ್ತಿದೆ. ಈಗಾಗಲೇ ನುರಿತರಿಂದ ತರಬೇತಿಯನ್ನು ನೀಡಲಾಗಿದೆ. ವಿಧ್ವಂಸಕ ಕೃತ್ಯಗಳನ್ನು ತಪ್ಪಿಸಲು ರಾಣಿ ನೆರವಾಗುವ ವಿಶ್ವಾಸವಿದೆ" ಎಂದು ಹೇಳಿದ್ದಾರೆ.