ಕಾನತ್ತೂರು ಕ್ಷೇತ್ರದ ಮೊರೆ ಹೋದ ರಮಾನಾಥ್ ರೈ
ಮಂಗಳೂರು ಜೂನ್ 11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲ ಕಚ್ಚಿರುವುದರ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಕಾರಣಗಳ ಹುಡುಕಾಟ ಆರಂಭವಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ಕಾಂಗ್ರೆಸ್ ಹೀನಾಯವಾಗಿ ಸೋತಿದೆ.
ಕೇವಲ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಯು.ಟಿ ಖಾದರ್ ಗೆಲುವು ಸಾಧಿಸಿದ್ದಾರೆ. ಜಿಲ್ಲೆಯಲ್ಲಿ ರಮಾನಾಥ್ ರೈ, ಅಭಯ ಚಂದ್ರ ಜೈನ್ ರಂತಹ ಘಟಾನುಘಟಿ ಕಾಂಗ್ರೆಸ್ ನಾಯಕರೇ ಈ ಬಾರಿಯ ಚುನಾವಣೆಯಲ್ಲಿ ಊಹಿಸಲೂ ಸಾಧ್ಯವಾಗದ ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರು
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿಗೆ ನಾಯಕರ ಆತ್ಮಅವಲೋಕನ ಅರಂಭವಾಗಿದೆ. ಈ ನಡುವೆ ಚುನಾವಣೆಯಲ್ಲಿ ಸೋತ ಬಳಿಕ ಮಾಜಿ ಸಚಿವ ರಮಾನಾಥ್ ರೈ ತನ್ನ ಸೋಲಿಗೆ ಅಪಪ್ರಚಾರವೇ ಕಾರಣ ಎಂದು ಹೇಳಿ ತಿರುಗುತ್ತಿದ್ದಾರೆ.
ಬಂಟ್ವಾಳದ ಬಿಸಿ ರೋಡ್ ನಲ್ಲಿ ಹತ್ಯೆಗೀಡಾಗಿದ್ದ ಆರ್ ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ್ ಹತ್ಯೆಗೆ ರಮಾನಾಥ್ ರೈ ಅವರೇ ಕಾರಣ ಎಂಬ ವ್ಯವಸ್ಥಿತ ಅಪಪ್ರಚಾರ ಮಾಡಿದ ಕಾರಣ ತಮಗೆ ಸೋಲಾಗಿದೆ ಎಂಬುದು ರಮಾನಾಥ್ ರೈ ಅವರ ಆರೋಪ .
ಈ ಹಿನ್ನಲೆಯಲ್ಲಿ ಅಪಪ್ರಚಾರ ಮಾಡಿದವರ ವಿರುದ್ಧ ರಮಾನಾಥ ರೈ ನ್ಯಾಯದೇಗುಲ ಎಂದೇ ಪ್ರಸಿದ್ಧಿ ಪಡೆದಿರುವ ಕಾನತ್ತೂರು ಕ್ಷೇತ್ರದ ಮೊರೆ ಹೋಗಿದ್ದಾರೆ.
ಬಂಟ್ವಾಳ ತಾಲೂಕಿನ ಸಜಿಪ ಪರಿಸರದ ನಿವಾಸಿ ಆರ್ ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಸಂಬಂಧಿಸಿ ಅವರ ತಂದೆ ತನಿಯಪ್ಪ ಮಡಿವಾಳ ಅವರು ಈ ಕೊಲೆ ಬಿ.ರಮಾನಾಥ ರೈ ಬೇಂಬಲದಿಂದಲೇ ನಡೆಸಲಾಗಿದೆ ಎಂದು ಅರೋಪಿಸಿದ್ದರು.
ಈ ಕಾರಣ ಮನನೊಂದಿರುವ ಮಾಜಿ ಸಚಿವ ಬಿ.ರಮಾನಾಥ ರೈ ಕಾರಣಿಕ ಕ್ಷೇತ್ರ ಶ್ರೀ ನಾಲ್ಕರ್ ದೈವಸ್ಥಾನ ಕಾನತ್ತೂರಿಗೆ ಭೇಟಿ ನೀಡಿ ದೈವಗಳ ಸನ್ನಿಧಾನದಲ್ಲಿ ದೂರು ನೀಡಿದ್ದಾರೆ.
ಶರತ್ ಮಡಿವಾಳ ಪ್ರಕರಣದಲ್ಲಿ ವಿನಾಕಾರಣ ತನ್ನ ಹೆಸರನ್ನು ಬಳಸಿ ಅಪಪ್ರಚಾರ ನಡೆಸಲಾಗಿದೆ ಎಂದು ದೂರಿದ್ದಾರೆ ಎಂದು ಹೇಳಲಾಗಿದೆ. ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವವರನ್ನು ಕರೆದು ವಿಚಾರಣೆ ನಡೆಸಬೇಕು ಎಂದು ಬಿ.ರಮಾನಾಥ ರೈಯವರು ದೈವಸ್ಥಾನದಲ್ಲಿ ವಿನಂತಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಕಾನತ್ತೂರು ದೈವಸ್ಥಾನಕ್ಕೆ ಭೇಟಿ ನೀಡಿ ದೂರು ನೀಡಿರುವ ಕುರಿತು ಮಾಜಿ ಸಚಿವ ರಮಾನಾಥ ರೈ ಸ್ಪಷ್ಟನೆ ನೀಡಿದ್ದಾರೆ. ಹೌದು ನಾನು ಕಾನತ್ತೂರಿಗೆ ಭೇಟಿ ನೀಡಿದ್ದೇನೆ. ನಾನೊಬ್ಬ ಪರಿಪೂರ್ಣ ಆಸ್ತಿಕವಾದಿ. ದೈವ ದೇವರುಗಳ ಮೇಲೆ ಅಚಲ ನಂಬಿಕೆ ಹೊಂದಿದ್ದೇನೆ. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಕಾನತ್ತೂರಿನಲ್ಲಿ ಪ್ರಾರ್ಥನೆ ಮಾಡಿದ್ದೇನೆ.
ನನ್ನ ವಿರುದ್ಧ ಸುಳ್ಳು ಅಪಪ್ರಚಾರ ಮಾಡಿದ್ದಾರೆ, ಅದಕ್ಕಾಗಿ ಪ್ರಾರ್ಥಿಸಿದ್ದೇನೆ. ಏನು ಪ್ರಾರ್ಥನೆ ಅನ್ನೋದು ನನಗೆ, ದೈವಗಳಿಗೆ ಬಿಟ್ಟಿದ್ದು. ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಪತ್ತೆಯಾಗಿದೆ. ಆದರೂ ನನ್ನ ವಿರುದ್ದ ಆರೋಪ ಮಾಡಿರುವುದು ಯಾವ ನ್ಯಾಯ ? ಅದಕ್ಕಾಗಿ ಕಾನತ್ತೂರು ದೈವಸ್ಥಾನದಮೆಟ್ಟಿಲು ಹತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಮಾನಾಥ ರೈ ಅವರ ಸೋಲಿಗೆ ಈ ಅಪಪ್ರಚಾರ ಮಾತ್ರ ಕಾರಣವಾ? ಅಥವಾ ಕಲ್ಲಡ್ಕ ಶಾಲೆಯ ಮಕ್ಕಳ ಮಧ್ಯಾಹ್ನದ ಊಟದ ವಿಚಾರ ಸೇರಿದಂತೆ ಕ್ಷೇತ್ರದಲ್ಲಿ ಈ ವರೆಗೆ ಗೆಲ್ಲಲು ಮುಸ್ಲಿಂ ಸಮುದಾಯ ಅಲ್ಲಾಹು ಕಾರಣ ಎಂಬ ಹೇಳಿಕೆಯಾ? ಎನ್ನುವ ಕುರಿತು ಚರ್ಚೆ ಆರಂಭವಾಗಿದೆ.