'ಬಿಜೆಪಿ ಕಾರ್ಯಕರ್ತರ ಮನೇಲಿ ಬೇಯುತ್ತಿರುವುದು ಅನ್ನ ಭಾಗ್ಯದ ಅಕ್ಕಿ'
ಮಂಗಳೂರು, ಏಪ್ರಿಲ್ 08:ರಸ್ತೆಯಲ್ಲಿ ಮೋದಿ ಮೋದಿ ಎಂದು ಕೂಗುವ ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ಬೇಯುತ್ತಿರುವುದು ರಾಜ್ಯ ಸರಕಾರದ ಅನ್ನ ಭಾಗ್ಯದ ಅಕ್ಕಿ ಎಂದು ಮಾಜಿ ಸಚಿವ ರಮಾನಾಥ್ ರೈ ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಂಟ್ವಾಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಈ ಬಾರಿಯ ಚುನಾವಣಾ ಪ್ರಚಾರಕ್ಕೆ ವಿಷಯವೇ ಇಲ್ಲ. ಅವರು ಕೇವಲ 'ಮತ್ತೊಮ್ಮೆ ಮೋದಿ. ಮತ್ತೊಮ್ಮೆ ಮೋದಿ' ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಅವರ ಮನೆಯಲ್ಲಿ ಬೇಯುತ್ತಿರುವುದು ಮಾತ್ರ ಈ ಹಿಂದಿನ ಸಿದ್ದರಾಮಯ್ಯ ಸರಕಾರದ ಅನ್ನಭಾಗ್ಯದ ಅಕ್ಕಿ ಎಂದು ಕಿಡಿಕಾರಿದರು.
ನಳಿನ್ ವೈಫಲ್ಯವೇ ದ.ಕ.ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಲಿದೆ:ರಮಾನಾಥ್ ರೈ
ಈ ಚುನಾವಣೆ ಯಾರೊಬ್ಬರ ಶಕ್ತಿ ಪ್ರದರ್ಶನವಲ್ಲ. ದೇಶದ ಭವಿಷ್ಯವನ್ನು ರೂಪಿಸುವ ಮತ್ತು ತೀರ್ಮಾನ ಮಾಡುವ ಚುನಾವಣೆ. ಈ ದೇಶಕ್ಕೆ ಯಾರು ಬೇಕು? ಯಾರು ಬೇಡ? ಎಂಬ ನಿರ್ಧಾರವನ್ನು ಮುಂದಿಟ್ಟುಕೊಂಡು ಈ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಾರಿಯ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದೇ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ರಮಾನಾಥ್ ರೈ, ನರೇಂದ್ರ ಮೋದಿ ಬರಲೂಬಾರದು, ಒಂದು ವೇಳೆ ಬಂದರೆ ಅದರಿಂದ ದೇಶದ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಅಪಾಯ ಖಂಡಿತ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ವೈಫಲ್ಯಗಳನ್ನು ಬಹಿರಂಗಪಡಿಸಲು ಮುಂದಾದ ರಮಾನಾಥ್ ರೈ
ಈ ಚುನಾವಣೆ ಸಂವಿಧಾನದ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ನರೇಂದ್ರ ಮೋದಿ ಸಮಾಜವನ್ನು ವಿಭಜಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ದೇಶದ ಪ್ರಧಾನಿಯೇ ಸಮಾಜವನ್ನು ಒಡೆಯುವ ಹೇಳಿಕೆ ನೀಡಿದರೆ ಈ ಸಮಾಜ ಎಲ್ಲಿಗೆ ಹೋಗಿ ತಲುಪಬಹುದು ಎಂದು ರಮಾನಾಥ್ ರೈ ಪ್ರಶ್ನಿಸಿದರು.