ವೈಷಮ್ಯ ಮರೆತು ಪೂಜಾರಿ ಆಶೀರ್ವಾದ ಪಡೆದ ರಮಾನಾಥ ರೈ
ಮಂಗಳೂರು, ಏಪ್ರಿಲ್ 18: ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳಲ್ಲ ಎನ್ನುವ ಮಾತಿದೆ. ಅದರಂತೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷದಲ್ಲಿರುವ ಭಿನ್ನಮತ, ವೈಮನಸ್ಸು ಮರೆತು ಮತ ಬೇಟೆಗೆ ರಾಜಕೀಯ ನೇತಾರರು ಮತ್ತೊಮ್ಮೆ ಅಣಿಯಾಗುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಚುನಾವಣೆಗೆ ಸಿದ್ದರಾಗಿರುವ ಸಚಿವ ರಮಾನಾಥ ರೈ ಇಂದು ಬಂಟ್ವಾಳದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಮನೆಗೆ ಭೇಟಿ ನೀಡಿದರು. ಬಿ.ಸಿ ರೋಡ್ ನಲ್ಲಿರುವ ಪೂಜಾರಿಯವರ ಮನೆಗೆ ತೆರಳಿದ ರಮಾನಾಥ್ ರೈ ಜನಾರ್ಧನ ಪೂಜಾರಿ ಅವರಿಂದ ಆಶೀರ್ವಾದ ಪಡೆದುಕೊಂಡರು.
ಕೆಲಸ ಮಾಡೋದು ಬಿಟ್ಟು ಧರ್ಮಸ್ಥಳದಲ್ಲಿ ಆಣೆಪ್ರಮಾಣ ಮಾಡ್ತಾರಂತೆ!
ಸಚಿವ ರಮಾನಾಥ ರೈ ನಾಳೆ ಚುನಾವಣಾ ಕಣಕ್ಕಿಳಿಯಲು ಬಂಟ್ವಾಳದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾಮ ಪತ್ರ ಸಲ್ಲಿಸುವುದಕ್ಕೂ ಮುನ್ನ ಹಿರಿಯ ಕಾಂಗ್ರೆಸ್ಸಿಗ ಬಿ. ಜನಾರ್ದನ ಪೂಜಾರಿ ಅವರ ಆಶೀರ್ವಾದ ಪಡೆದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ರಮಾನಾಥ ರೈ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಪೂಜಾರಿಯವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಣ್ಣೀರು ಸುರಿಸಿದ್ದರು.
ಈ ವಿಚಾರ ಬಂಟ್ವಾಳ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಬಿಲ್ಲವ ಮತದಾರರಲ್ಲಿ ರೈ ವಿರುದ್ಧ ಆಕ್ರೋಶ ಹುಟ್ಟುಹಾಕಿತ್ತು. ಪೂಜಾರಿ ಅವರನ್ನು ಪಕ್ಷದಲ್ಲಿ ಮೂಲೆ ಗುಂಪು ಮಾಡಿದ್ದೇ ರಮಾನಾಥ ರೈ ಎಂಬ ಆರೋಪವೂ ಕೇಳಿ ಬಂದಿತ್ತು. ಈ ಬೆಳವಣಿಗೆಯ ಬಳಿಕ ಕಳೆದ ಒಂದು ವರ್ಷದಿಂದ ಜನಾರ್ದನ ಪೂಜಾರಿ ಮತ್ತು ರಮಾನಾಥ ರೈ ತಮ್ಮ ನಡುವೆ ಅಂತರ ಬೆಳೆಸಿಕೊಂಡಿದ್ದರು.
ಇದೀಗ ಚುನಾವಣೆಯ ಹೊಸ್ತಿಲಲ್ಲಿ ಸಚಿವ ರಮಾನಾಥ ರೈಯವರು ಸ್ವತಃ ಜನಾರ್ದನ ಪೂಜಾರಿಯವರ ಮನೆಗೆ ತೆರಳಿ ಕಾಲು ಮುಟ್ಟಿ ಆಶೀರ್ವಾದ ಕೋರಿದ್ದು ವಿಶೇಷ ಅರ್ಥ ಕಲ್ಪಿಸುವಂತಾಗಿದೆ. ಪೂಜಾರಿಯವರು ರಮಾನಾಥ ರೈ ಭೇಟಿ ಸಂದರ್ಭದಲ್ಲಿ ತಮ್ಮ ವೈಮನಸ್ಸನ್ನೂ ತೋರಿಸಿಕೊಂಡಿಲ್ಲ. ಬೆಂಬಲಿಗರ ಜೊತೆ ಮನೆಗೆ ಬಂದ ರೈಯನ್ನು ರಸ್ತೆವರೆಗೂ ನಡೆದುಕೊಂಡು ಬಂದು ಅವರು ಬೀಳ್ಕೊಟ್ಟಿದ್ದಾರೆ.
ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿಗಳ ಸಂಕ್ಷಿಪ್ತ ಪರಿಚಯ
ಬಂಟ್ವಾಳದಲ್ಲಿ ಪೂಜಾರಿ ಅವರ ಮನೆ ಪಕ್ಕವೇ ಪಕ್ಷದ ಹಲವಾರು ಕಾರ್ಯಕ್ರಮ ನಡೆದರೂ ರಮಾನಾಥ್ ರೈ ಆಗಲಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಯವರೇ ಆಗಲಿ ಪೂಜಾರಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ.
ಪೂಜಾರಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಈವರೆಗೆ ಅವರ ಮನೆಗೆ ತೆರಳಿ ರಮಾನಾಥ್ ರೈ ಆರೋಗ್ಯವನ್ನೂ ವಿಚಾರಿಸಿರಲಿಲ್ಲ. ಆದರೆ ಈಗ ಏಕಾಏಕಿ ಪೂಜಾರಿ ಅವರ ಆಶೀರ್ವಾದ ಪಡೆದಿರುವುದು ಕುತೂಹಲ ಕೆರಳಿಸಿದೆ.