ಅಗ್ನಿಪಥ್ಗೆ ಅರ್ಜಿ ಹಾಕುವವರು ಸೇನಾ ಅಕಾಂಕ್ಷಿಗಳಲ್ಲ; ರಮಾನಾಥ್ ರೈ
ಮಂಗಳೂರು, ಜೂ27: ಅಗ್ನಿಪಥ್ ಯೋಜನೆಯನ್ನು ಜಾರಿಗೆ ತಂದ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಟೀಕಾ ಪ್ರಹಾರ ಮಾಡಿದೆ. ಆದರೆ ವಾಯುಸೇನೆ ಅಗ್ನಿಪಥ್ ಅಡಿ ಕರೆದಿದ್ದ ನೇಮಕಾತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಮೂರು ಸಾವಿರ ಹುದ್ದೆಗೆ ಮೂರೇ ದಿನದಲ್ಲಿ 57 ಸಾವಿರ ಅರ್ಜಿಗಳು ಬಂದಿದೆ.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, "ಅರ್ಜಿ ಹಾಕಿದವರೆಲ್ಲಾ ಸೇನಾ ಅಕಾಂಕ್ಷಿಗಳಲ್ಲ, ಅವರು ನಿರುದ್ಯೋಗಿಗಳು. ಈ ಯೋಜನೆ ಮೂಲಕ ಕೇಂದ್ರ ಸರ್ಕಾರ ದೇಶಭಕ್ತರ ಆಸೆಯನ್ನು ನುಚ್ಚುನೂರು ಮಾಡಿದೆ" ಎಂದು ಆರೋಪಿಸಿದರು.
ರೋಹಿತ್ ಚಕ್ರತೀರ್ಥ ಧಮ್ ಇದ್ದರೆ ಮಂಗಳೂರಿಗೆ ಬರಲಿ: ಮಿಥುನ್ ರೈ ಸವಾಲ್
"ಅಗ್ನಿಪಥ್ ಮೂಲಕ ಆಯ್ಕೆಯಾಗುವ ಯುವಕರಿಗೆ ನಾಲ್ಕು ವರ್ಷಗಳ ಬಳಿಕ ಉದ್ಯೋಗ ಇರುವುದಿಲ್ಲ. ಪಿಂಚಣಿ ವ್ಯವಸ್ಥೆ ಇರುವುದಿಲ್ಲ. ಅವರಿಗೆ ಜೀವನಕ್ಕೆ ಭಧ್ರತೆಯೂ ಇರುವುದಿಲ್ಲ. ಯೋಜನೆ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ಮಾಡುತ್ತೇವೆ" ಎಂದು ರಮಾನಾಥ್ ರೈ ಹೇಳಿದರು.
ಕಾಂಗ್ರೆಸ್ನವರ ಮಕ್ಕಳನ್ನು ಅಗ್ನಿಪಥ್ಗೆ ಕೇಳಿಲ್ಲ, ದೇಶಕ್ಕಾಗಿ ಸೇವೆ ಸಲ್ಲಿಸುವವರು ಬರ್ತಾರೆ: ಕಟೀಲ್
ಹೊರ ಗುತ್ತಿಗೆ ಆಧಾರದಲ್ಲೇ ಆಯ್ಕೆ
"ಅಗ್ನಿಪಥ್ ಮೂಲಕ ಅರ್ಜಿ ಹಾಕಿದವರು ನಿರುದ್ಯೋಗಿಗಳು, ಯಾರೂ ಸೇನಾ ಅಕಾಂಕ್ಷಿಗಳಲ್ಲ. ಅವರೆಲ್ಲಾ ನಿರುದ್ಯೋಗಿಳು, ಗುಮಾಸ್ತ ಹುದ್ದೆಗೂ ಇದಕ್ಕಿಂತ ಹೆಚ್ಚು ಅರ್ಜಿ ಹೋಗುತ್ತದೆ. ಜನರಿಗೆ ಉದ್ಯೋಗ ಇಲ್ಲ ಹಾಗಾಗಿ ಅರ್ಜಿ ಸಲ್ಲಿಸಿದ್ದಾರೆ" ಎಂದು ರಮಾನಾಥ್ ರೈ ಹೇಳಿದರು.
"ಹೊರ ಗುತ್ತಿಗೆ ಆಧಾರದಲ್ಲೇ ಸೇನೆಗೆ ಆಯ್ಕೆ ಮಾಡುವುದು ಎಂದರೆ ಏನು ಅರ್ಥ?. ಇದನ್ನು ದೇಶಪ್ರೇಮಿಗಳು ಒಪ್ಪಲು ಸಾಧ್ಯವಿಲ್ಲ.ಯುವ ಶಕ್ತಿ ಬೇಕು ಅಂತಾ ಎರಡು ವರ್ಷ ನೇಮಕಾತಿ ಮಾಡದೇ ಇರುವಾಗ ಅವರಿಗೆ ಗೊತ್ತಾಗಲಿಲ್ವಾ?" ಎಂದು ರಮಾನಾಥ್ ರೈ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ರಮಾನಾಥ್ ರೈ ಆಕ್ರೋಶ
ಇನ್ನು "ಅಗ್ನಿಪಥ್ ಯೋಜನೆಗೆ ಕಾಂಗ್ರೆಸ್ನವರ ಮಕ್ಕಳು ಬೇಡ" ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಮಾಜಿ ಸಚಿವ ರಮಾನಾಥ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಳಿನ್ ಕುಮಾರ್ ಕಟೀಲ್ ಒಬ್ಬ ಹಾಸ್ಯಗಾರ, ಅವರ ಹೇಳಿಕೆಯನ್ನು ಗಂಭೀರ ಪರಿಗಣಿಸಲ್ಲ. ಅವರು ಈ ಹಿಂದೆ ಡಾಲರ್ ರೇಟ್, ಹೊಯ್ಗೆ ದರದ ಬಗ್ಗೆ ಹೇಳಿ ನಗೆಪಾಟಲಿಗೆ ಈಗೀಡಾಗಿದ್ದಾರೆ ಮತ್ತು ತಾನು ಹಾಸ್ಯಗಾರ ಎಂಬುವುದನ್ನು ಸಾಬೀತು ಮಾಡಿದ್ದಾರೆ. ಕಾಂಗ್ರೆಸ್ ಮಕ್ಕಳಲ್ಲ, ನಾವು ದೇಶದ ಮಕ್ಕಳ ಬಗ್ಗೆ ಪ್ರಶ್ನೆ ಮಾಡುತ್ತೇವೆ. ದೇಶಕ್ಕಾಗಿ ಹೋರಾಡಿದ ನಾಯಕರು ನಮ್ಮಲ್ಲಿದ್ದಾರೆ. ಇವರು ನೆಹರು ಸೇರಿ ದೇಶದ ನಾಯಕರನ್ನು ಅವಮಾನಿಸಿದ್ದಾರೆ" ಎಂದು ರಮಾನಾಥ್ ರೈ ಕಿಡಿಕಾರಿದ್ದಾರೆ.
ಕೇಂದ್ರ ಮೈದಾನ ಎಂದು ಹೆಸರಿಟ್ಟಿದ್ದು ಬ್ರಿಟಿಷರು
"ಮಂಗಳೂರಿನ ನೆಹರು ಮೈದಾನಕ್ಕೆ ಕೇಂದ್ರ ಮೈದಾನ ಎಂದು ಬಿಜೆಪಿ ಹೇಳುತ್ತಿದೆ. ಕೇಂದ್ರ ಮೈದಾನ ಎಂದು ಹೆಸರಿಟ್ಟಿದ್ದು ಬ್ರಿಟಿಷರು, ಅದನ್ನು ಬಿಜೆಪಿ ಹೇಳಿಕೊಳ್ಳುತ್ತಿದ್ದಾರೆ. ಇವರು ಬ್ರಿಟಿಷರ ಪರವಾಗಿದ್ದರು ಅನ್ನೋದನ್ನು ತೋರಿಸುತ್ತಿದ್ದಾರೆ. ಜವಹರಲಾಲ್ ನೆಹರೂ 11 ವರ್ಷ ಜೈಲಿನಲ್ಲಿದ್ದರು. ನೆಹರು ಭಾಷಣ ಮಾಡಿದ್ದಕ್ಕಾಗಿ ಆಗಿನ ಶ್ರೀನಿವಾಸ ಮಲ್ಯ, ಕಿಲ್ಲೆಯಂತವರು ನೆಹರು ಮೈದಾನ ಎಂದು ಹೆಸರಿಟ್ಟಿದ್ದರು. ಆದರೆ ಬಿಜೆಪಿ ಮಂದಿ ಶ್ರೀನಿವಾಸ ಮಲ್ಯ, ಕಿಲ್ಲೆಯವರಿಗೆ ಅವಮಾನಿಸುತ್ತಿದ್ದಾರೆ" ಎಂದು ರಮಾನಾಥ ರೈ ಹೇಳಿದರು.
ಇಂತಹ ಯೋಜನೆ ಅಸಮರ್ಪಕ
"ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಪಿಯೋನ್ ಸೇರಿದಂತೆ ಸಣ್ಣಪುಟ್ಟ ಕೆಲಸಕ್ಕೆ ಅರ್ಜಿ ಕರೆದಾಗಲೂ ಸಾವಿರಾರು ಮಂದಿ ಅರ್ಜಿ ಸಲ್ಲಿಸುತ್ತಾರೆ. ಹಾಗಾಗಿ ಅಗ್ನಿಪಥ್ಗೆ ಸೇರ್ಪಡೆಗೊಳ್ಳುತ್ತಿರುವವರು ಎಲ್ಲರೂ ಯೋಜನೆಯ ಲಾಭ ಅಥವಾ ದೇಶಸೇವೆಯ ಉದ್ದೇದಿಂದಲೇ ಸೇರುತ್ತಿಲ್ಲ" ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ರಮಾನಾಥ ರೈ ಹೇಳಿದ್ದಾರೆ.
"ದೇಶದ ಸುರಕ್ಷತೆಯ ದೃಷ್ಟಿಯಿಂದ ಸೇನೆಯ ವಿಚಾರದಲ್ಲಿ ಇಂತಹ ಯೋಜನೆ ಅಸಮರ್ಪಕ. ಇದು ಈಗಾಗಲೇ ಸೇನೆಗೆ ಭರ್ತಿಗಾಗಿ ಆಯ್ಕೆಗೊಂಡು ವೈದ್ಯಕೀಯ ಪ್ರಮಾಣ ಪತ್ರವನ್ನು ಎದುರು ನೋಡುತ್ತಿರುವ ಆಕಾಂಕ್ಷಿಗಳಿಗೆ ಮಾಡುತ್ತಿರುವ ಅನ್ಯಾಯ" ಎಂದರು.