ದಕ್ಷಿಣ ಕನ್ನಡದಲ್ಲಿ ಮತ್ತೆ ಸದ್ದು ಮಾಡಿದ ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ
ಮಂಗಳೂರು, ಫೆಬ್ರವರಿ 24:ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ವಿಚಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಸದ್ದು ಮಾಡುತ್ತಿದ್ದು, ಮತ್ತೆ ರಾಜಕೀಯ ಕೆಸರೆರೆಚಾಟ ಆರಂಭವಾಗಿದೆ. ಈ ನಡುವೆ ವಿಜಯ ಬ್ಯಾಂಕ್ ಅನ್ನು ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸುವ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಸರ್ವಪಕ್ಷಗಳ ಜನಪ್ರತಿನಿಧಿಗಳ ನಿಯೋಗ ದೆಹಲಿಗೆ ತೆರಳಲು ತೀರ್ಮಾನಿಸಿದೆ.
ವಿಲೀನದ ಬಗ್ಗೆ ಬ್ಯಾಂಕ್ ನೌಕರರ ಆತಂಕ, ವಿಜಯ ಬ್ಯಾಂಕ್ ಸಿಇಒ ಏನೆಂದರು?
ವಿಜಯಾ ಬ್ಯಾಂಕ್ ಉಳಿಸಿ ಹೋರಾಟ ಸಮಿತಿಯು ದ.ಕ. ಮತ್ತು ಉಡುಪಿ ಜಿಲ್ಲೆಯ ಸರ್ವಪಕ್ಷಗಳ ಜನಪ್ರತಿನಿಧಿಗಳು ತಮ್ಮ ನಿಲುವು ವ್ಯಕ್ತಪಡಿಸುವುದಕ್ಕಾಗಿ ನಗರದ ಪುರಭವನದಲ್ಲಿ ಏರ್ಪಡಿಸಿದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ವಿಜಯ ಬ್ಯಾಂಕ್ ಜತೆ ಇನ್ನೆರಡು ಬ್ಯಾಂಕ್ ಹೋಲಿಕೆ, ಇದು ಗೆಲ್ಲೋ ಆಟವಲ್ಲ!
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಮಾನಾಥ ರೈ, ಕೆಲವರಿಗೆ ಸಮಸ್ಯೆಗಳು ಇತ್ಯರ್ಥವಾಗುವುದು ಇಷ್ಟವಿಲ್ಲ. ಸಮಸ್ಯೆಗಳು ಜೀವಂತವಾಗಿದ್ದರೆ ಮಾತ್ರ ರಾಜಕೀಯ ಬೇಳೆ ಬೇಯಿಸಲು ಸಾಧ್ಯ ಎಂದು ತಿಳಿದುಕೊಂಡಿದ್ದಾರೆ. ವಿಜಯ ಬ್ಯಾಂಕ್ ಅನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ, ಮುಲ್ಕಿ ಸುಂದರರಾಮ ಶೆಟ್ಟರ ಹೆಸರನ್ನು ನಗರದ ರಸ್ತೆಗಿಡುವ ವಿಚಾರದಲ್ಲಿ ರಾಜಕೀಯ ಮಾಡಿದವರು ಇದೀಗ ಅವರ ಫೋಟೋವನ್ನು ಬ್ಯಾಂಕಿನಿಂದ ಮೂಲೆಗೆ ಸರಿಸುವಾಗ ವೌನವಾಗಿದ್ದಾರೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ನಾವು ರಸ್ತೆಯಲ್ಲಿ ನಿಂತು ಪ್ರತಿಭಟನೆ ಮಾಡಿದರೆ ಪ್ರಧಾನಿ, ವಿತ್ತ ಸಚಿವರಿಗೆ ತಲುಪುವುದಿಲ್ಲ. ದ.ಕ. ಮತ್ತು ಉಡುಪಿಯ ಬಿಜೆಪಿಯ ಸಂಸದರು, ವಿಧಾನ ಪರಿಷತ್ ಸದಸ್ಯರು, ಶಾಸಕರನ್ನು ಒಗ್ಗೂಡಿಸುವ ಜವಾಬ್ದಾರಿ ನನ್ನದು. ಸದಾನಂದ ಗೌಡ, ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯ್ಲಿ ಅವರನ್ನೂ ಒಳಗೊಂಡಂತೆ ಪ್ರಧಾನಿ, ವಿತ್ತ ಸಚಿವರ ಸಹಿತ ಸಂಬಂಧಪಟ್ಟವರನ್ನು ಕಂಡು ಭೇಟಿಯಾಗಿ ಅಹವಾಲು ಸಲ್ಲಿಸೋಣ ಎಂದು ಹೇಳಿದರು.