ಪ್ರಸಿದ್ಧ ಕಂಬಳ ಓಟಗಾರ ಶ್ರೀನಿವಾಸ ಗೌಡಗೆ ಕೊಲೆ ಬೆದರಿಕೆ ಹಾಕಿದ ರಾಮ ಸೇನೆ ಕಾರ್ಯಕರ್ತ!
ಮಂಗಳೂರು, ಜುಲೈ 17: ಪ್ರಸಿದ್ಧ ಕಂಬಳ ಓಟಗಾರ, ಕಂಬಳದ ಹುಸೇನ್ ಬೋಲ್ಟ್ ಎಂದೇ ಪ್ರಸಿದ್ಧ ಪಡೆದಿರುವ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡಗೆ ರಾಮ ಸೇನೆಯ ಕಾರ್ಯಕರ್ತ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ರಾಮ ಸೇನೆಯ ಕಾರ್ಯಕರ್ತ ಪ್ರಶಾಂತ ಬಂಗೇರ ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಯಾಗಿದ್ದು, ಕಂಬಳದ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ ಗೌಡರಿಗೆ ಕರೆ ಮಾಡಿ ಪ್ರಶಾಂತ ಬಂಗೇರ ಅವಾಚ್ಯವಾಗಿ ಬೈದಿದ್ದಾನೆ.
ಮಂಗಳೂರಿನ ಕಾರ್ ಸ್ಟ್ರೀಟ್ನಲ್ಲಿರುವ ರಾಮ ಸೇನೆ ಕಚೇರಿಗೆ ಬರಬೇಕೆಂದು ಧಮ್ಕಿ ಹಾಕಿದ್ದಾನೆ. ಅಲ್ಲದೇ ಶ್ರೀನಿವಾಸ ಗೌಡ ಮನೆಯ ಹೆಣ್ಣುಮಕ್ಕಳ ಕುರಿತಾಗಿಯೂ ಅಮಾನಕಾರಿಯಾಗಿ ನಿಂದಿಸಿದ್ದಾನೆ. ಈ ಬಗ್ಗೆ ಶ್ರೀನಿವಾಸ ಗೌಡ ಮೂಡಬಿದಿರೆ ಪೊಲೀಸ್ ಠಾಣೆಗೆ ಪ್ರಶಾಂತ ಬಂಗೇರ ವಿರುದ್ಧ ದೂರು ನೀಡಿದ್ದಾರೆ.
ಈ ಬಗ್ಗೆ ಮೂಡಬಿದರೆಯ ಸಮಾಜ ಮಂದಿರದಲ್ಲಿ ಖಂಡನಾ ಸಭೆ ನಡೆದಿದ್ದು, ಖಂಡನಾ ಸಭೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಂಬಳ ಕೋಣಗಳ ಯಜಮಾನರು, ಕಂಬಳ ಸಂಘಟಕರು, ಕಂಬಳ ತೀರ್ಪುಗಾರರು, ಕಂಬಳ ಓಟಗಾರರು, ಕೋಣ ಬಿಡಿಸುವವರು, ಕೋಣಗಳ ಎಲ್ಲಾ ಸಿಬ್ಬಂದಿ ವರ್ಗದವರು ಹಾಗು ಕಂಬಳ ಅಭಿಮಾನಿಗಳು ಭಾಗವಹಿಸಿದ್ದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಮೂಡಬಿದರೆಯ ಶಾಸಕ ಉಮಾನಾಥ್ ಕೋಟ್ಯಾನ್ ಈ ಬೆದರಿಕೆ ಘಟನೆಯನ್ನು ಖಂಡಿಸಿದ್ದಾರೆ.