ಪುತ್ತೂರು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ರೈತ ಬಜಾರ್ ಶುರು
ಪುತ್ತೂರು, ಆಗಸ್ಟ್ 30: ಇಲ್ಲಿನ ಕಿಲ್ಲೆ ಮೈದಾನದಲ್ಲಿ ಸೋಮವಾರ ನಡೆಯುತ್ತಿದ್ದ ವಾರದ ಸಂತೆ ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಗೊಂಡ ಬಳಿಕ ಇದೀಗ ವಾರದ ಸಂತೆ ಬದಲು ಅಲ್ಲಲ್ಲಿ ರೈತ ಬಜಾರ್ ಹೆಸರಿನಲ್ಲಿ ತರಕಾರಿ ವ್ಯಾಪಾರ ಆರಂಭಗೊಂಡಿದೆ. ಸೋಮವಾರ ಭರ್ಜರಿ ವ್ಯಾಪಾರವೂ ನಡೆದಿದೆ.
ಈ ಮೊದಲು ಸಂತೆ ನಡೆಯುತ್ತಿದ್ದ ಕಿಲ್ಲೆ ಮೈದಾನದ ಪಕ್ಕದಲ್ಲೇ ಖಾಸಗಿ ಕಟ್ಟಡದ ದೊಡ್ಡ ಪ್ರಾಂಗಣದಲ್ಲಿ ಮತ್ತು ದರ್ಬೆಯಲ್ಲಿ ತರಕಾರಿ ಬಜಾರ್ ಆರಂಭಗೊಂಡಿದೆ. ಕಿಲ್ಲೆ ಮೈದಾನದಲ್ಲಿ ಸಂತೆ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳೇ ಇಲ್ಲಿಯೂ ವ್ಯಾಪಾರ ನಡೆಸುತ್ತಿದ್ದಾರೆ.[ಮಂಗಳೂರು : ಬಾವಿಯಿಂದ ಬಿಸಿನೀರ ಬುಗ್ಗೆ, ಜನರಿಗೆ ಕುತೂಹಲ]
ಕಿಲ್ಲೆ ಮೈದಾನದ ಸಂತೆ ಟೆಂಡರ್ ದಾರ ಜಯರಾಮ ನಾಯ್ಕ್ ನೇತೃತ್ವದಲ್ಲಿ ಕಿಲ್ಲೆ ಮೈದಾನದ ಬಳಿ ವ್ಯಾಪಾರ ಆರಂಭಿಸಿದ್ದಾರೆ. ಭಾನುವಾರವೇ ಇಲ್ಲಿ ತರಕಾರಿ ಬಜ಼ಾರ್ ಆರಂಭಗೊಂಡಿದೆ. ಹದಿನೈದಕ್ಕೂ ಅಧಿಕ ತರಕಾರಿ ವ್ಯಾಪಾರಿಗಳು ಇಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಪ್ರಮುಖರಾದ ನಿರ್ಮಲ್ ಕುಮಾರ್ ಜೈನ್, ನಗರಸಭಾ ಸದಸ್ಯ ರಾಜೇಶ್ ಬನ್ನೂರು ವ್ಯಾಪಾರ ಉದ್ಘಾಟನೆ ಸಂದರ್ಭ ಉಪಸ್ಥಿತರಿದ್ದರು. ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಶುಭ ಹಾರೈಸಿದರು.[ಹಬ್ಬದ ನೆಪದಲ್ಲಿ ಕಿರಿಕಿರಿ ಮಾಡಿದರೆ ಹುಷಾರ್..]
ಪ್ರಸ್ತುತ ಕಿಲ್ಲೆ ಮೈದಾನದಿಂದ ಒಕ್ಕಲೆಬ್ಬಿಸಿರುವ ಸಂತೆಯನ್ನು ಈಗಿನ ನಗರಸಭೆ ಆಡಳಿತ ಕಟ್ಟಡದ ತಳ ಭಾಗದಲ್ಲಿ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಒತ್ತಾಯಿಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ನಗರಸಭೆ ವಿಶೇಷ ಸಭೆಯಲ್ಲಿ ಬಿಜೆಪಿ ಸದಸ್ಯ ರಾಮಣ್ಣ ಗೌಡ ಹಲಂಗ ಅವರೂ ಇದೇ ಬೇಡಿಕೆ ಮುಂದಿಟ್ಟಿದ್ದರು.