ಮಲೇರಿಯಾ ತಡೆಗೆ ಮಂಗಳೂರಿನಲ್ಲಿ 64,500 ಸೊಳ್ಳೆ ಪರದೆ ವಿತರಣೆ
ಮಂಗಳೂರು, ಆಗಸ್ಟ್ 02: ಮಳೆಗಾಲ ಆರಂಭವಾಯಿತೆಂದರೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ ಹಾವಳಿ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಂಗಳೂರು 'ಮಲೇರಿಯಾ ಸಿಟಿ' ಎಂಬ ಕುಖ್ಯಾತಿ ಪಡೆದಿದೆ.
ರಾಜ್ಯದಲ್ಲಿ ದಾಖಲಾಗುವ ಒಟ್ಟು ಮಲೇರಿಯಾ ಪ್ರಕರಣಗಳಲ್ಲಿ ಶೇ.70 ರಷ್ಟು ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಿಂದ ವರದಿಯಾಗುತ್ತಿದೆ. ಅದರಲ್ಲೂ ಜಿಲ್ಲೆಯಲ್ಲಿ ದಾಖಲಾಗುವ ಒಟ್ಟು ಪ್ರಕರಣಗಳಲ್ಲಿ ಶೇ.70 ರಷ್ಟು ಪ್ರಕರಣಗಳು ಮಂಗಳೂರು ನಗರದಿಂದ ವರದಿಯಾಗುತ್ತಿರುವುದು ಗಮನಾರ್ಹ.
ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸುಸ್ತಾಗಿ ಹೋದ ರಾಜ್ಯದ ಜನರು
ಈ ನಡುವೆ ಕೇಂದ್ರ ಸರಕಾರ ಮುಂದಿನ 5 ವರ್ಷಗಳಲ್ಲಿ ಭಾರತವನ್ನು ಮಲೇರಿಯಾ ಮುಕ್ತ ಮಾಡಲು ಯೋಜನೆ ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ರಾಜ್ಯದಲ್ಲಿಯೇ ಮಲೇರಿಯಾ ಪ್ರಕರಣಗಳಿಗೆ ಮೊದಲ ಸ್ಥಾನದಲ್ಲಿರುವ ಮಂಗಳೂರಿಗೆ ಸಾವಿರಾರು ಸೊಳ್ಳೆ ಪರದೆಗಳು ಬಂದಿವೆ.
ಇಡೀ ದೇಶವನ್ನೇ 2023 ರೊಳಗೆ ಸಂಪೂರ್ಣ ಮಲೇರಿಯಾ ಮುಕ್ತ ಮಾಡುವ ಉದ್ದೇಶ ಕೇಂದ್ರ ಸರಕಾರದ್ದಾಗಿದೆ. ಮೆಲೇರಿಯಾ ಹರಡುವುದರಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿರುವ ಮಂಗಳೂರು ಮೇಲೆಯೂ ಕೇಂದ್ರ ಸರಕಾರ ಗಮನ ಹರಿಸಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಮಂಗಳೂರು ನಗರಕ್ಕೆ ಈವರೆಗೆ 64,500 ಸೊಳ್ಳೆ ಪರದೆಗಳನ್ನು ಕಳುಹಿಸಿ ಕೊಡಲಾಗಿದೆ. ಈ ಸರಳ ಪರದೆಗಳು ಜೂನ್ ತಿಂಗಳಲ್ಲಿಯೇ ನಗರಕ್ಕೆ ಬಂದಿವೆ. ಆದರೆ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಜೂನ್ 18 ರವರೆಗೆ ಸೊಳ್ಳೆ ಪರದೆ ವಿತರಿಸಲು ಸಾಧ್ಯವಾಗಿರಲಿಲ್ಲ .
ಮಂಗಳೂರನ್ನು ಮಲೇರಿಯಾ ಮುಕ್ತಗೊಳಿಸುವ ನಿಟ್ಟಿನಲ್ಲಿ ಈವರೆಗೆ ಸುಮಾರು 32 ಸಾವಿರ ಸೊಳ್ಳೆ ಪರದೆಗಳನ್ನು ಮಂಗಳೂರು ಮಹಾನಗರ ಪಾಲಿಕೆ ವಿತರಿಸಿದೆ. ಮಂಗಳೂರು ಮಹಾನಗರ ಪಾಲಿಕೆಯ ಸ್ಥಳೀಯ ಕಾರ್ಪೊರೇಟರ್ ಗಳ ನೆರವಿನಿಂದ ಪಾಲಿಕೆ ಆರೋಗ್ಯ ಇಲಾಖೆಯ ಸೊಳ್ಳೆ ಪರದೆ ವಿತರಣೆಯಲ್ಲಿ ನಿರತವಾಗಿದೆ .
ನಗರದಲ್ಲಿ ಹೋಟೆಲ್ ಕಾರ್ಮಿಕರಿಗೆ, ಭದ್ರತಾ ಸಿಬ್ಬಂದಿಗಳಿಗೆ, ನಿರಾಶ್ರಿತ ಕೇಂದ್ರಗಳಿಗೆ , ಮಂಗಳೂರು ನಗರದ ಬಂದರು ಪ್ರದೇಶದ ಮದರಸಾ ಹಾಸ್ಟೆಲ್, ಪೌರಕಾರ್ಮಿಕರಿಗೆ ,ಮಕ್ಕಳ ವಸತಿ ನಿಲಯಗಳಿಗೆ, ರಸ್ತೆ ಬದಿ ಮಲಗುವವರಿಗೆ ಹಾಗೂ ಮನೆಗಳಿಗೆ ಸೊಳ್ಳೆ ಪರದೆ ವಿತರಿಸಲಾಗಿದೆ .
ಆಗಸ್ಟ್ 20 ರೊಳಗೆ ಉಳಿದ ಎಲ್ಲಾ ಸೊಳ್ಳೆ ಪರದೆ ವಿತರಣೆಯನ್ನು ಪೂರ್ಣಗೊಳಿಸುವ ಗುರಿಯನ್ನು ಮಂಗಳೂರು ಮಹಾನಗರ ಪಾಲಿಕೆ ಹೊಂದಿದೆ .