ದ.ಕ.ದಲ್ಲಿ ಬಿರುಸುಗೊಂಡ ಮಳೆ: ತಗ್ಗು ಪ್ರದೇಶಗಳು ಜಲಾವೃತ
ಮಂಗಳೂರು, ಜೂನ್ 29: ಕೆಲವು ದಿನಗಳಿಂದ ಕರಾವಳಿ ಸೇರಿದಂತೆ ಮಲೆನಾಡಿನ ಪ್ರದೇಶದಲ್ಲಿ ಧಾರಾಕಾರ ಮಳೆಗೆಯಾಗುತ್ತಿದೆ. ಕಳೆದ ರಾತ್ರಿ ಕೊಂಚ ವಿರಾಮ ಪಡೆದಿದ್ದ ಮಳೆ ಮುಂಜಾನೆಯಿಂದ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸುಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಎಲ್ಲಾ ತಾಲೂಕಿನ ನದಿ, ಕೊಳ್ಳಗಳು ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಮಳೆಗೆ ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿದ್ದು, ದೋಣಿ ಮೂಲಕ ಸಂಚಾರ ಮಾಡುವ ಸ್ಥಿತಿ ಎದುರಾಗಿದೆ.
ಕರ್ನಾಟಕ ಕರಾವಳಿಯಲ್ಲಿ ಮುಂದುವರಿಯಲಿದೆ ಧಾರಾಕಾರ ಮಳೆ
ಜಿಲ್ಲೆಯ ಬೆಳ್ತಂಗಡಿ, ಪುತ್ತೂರು , ಸುಳ್ಯ, ಬಂಟ್ವಾಳ ಭಾಗದ ಕೆಲ ಕೃಷಿ ಭೂಮಿಗಳು ಸಂಪೂರ್ಣ ಜಲಾವೃತವಾಗಿದೆ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿತ ಘಟನೆಗಳು ನಡೆದಿವೆ. ರಸ್ತೆಗಳು ಹದಗೆಟ್ಟಿದ್ದು, ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿದೆ.
ಕಡಲು ಪಕ್ಷುಬ್ದಗೊಂಡಿರುವ ಹಿನ್ನೆಲೆಯಲ್ಲಿ ನಾಡದೋಣಿ ಮೀನುಗಾರಿಕೆಗೆ ಮೀನುಗಾರರು ಸಮುದ್ರಕ್ಕೆ ಇಳಿಯುವುದು ಕಷ್ಟಸಾಧ್ಯವಾಗಿದೆ. ರಾತ್ರಿ ಸುರಿದ ಭಾರೀ ಮಳೆಗೆ ಮಂಗಳೂರು ಹೊರವಲಯದ ನಂದಿನಿ ನದಿ ತುಂಬಿ ಹರಿಯುತ್ತಿದೆ.
ಪಂಜ , ಕಿಲೆಂಜೂರು ಮಲ್ಲಿಗೆಯಂಗಡಿ, ಕೊಡೆತ್ತೂರು, ಕಟೀಲು ಮತ್ತಿತರ ಕಡೆಗಳಲ್ಲಿ ತಗ್ಗು ಪ್ರದೇಶ ಜಲಾವೃತ್ತಗೊಂಡಿದೆ. ಅತ್ತೂರುಬೈಲು ಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ.
ಪಕ್ಷಿಕೆರೆಯ ಪಂಜ, ಉಲ್ಯ ,ಕೊಯಿಕುಡೆಯಲ್ಲಿಯೂ ತಗ್ಗು ಪ್ರದೇಶ ಜಲಾವೃತ್ತಗೊಂಡಿದ್ದು, ಪಂಜ ನಂದಿನಿ ನದಿವರೆಗೆನ ರಸ್ತೆ ಮುಳುಗಡೆಯಾಗಿದೆ. ಬಳಕುಂಜೆಯಲ್ಲಿ ಮುಗೇರ ಬೈಲು ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತ್ತಗೊಂಡಿದೆ. ಈ ಪ್ರದೇಶದಲ್ಲಿ ಸುಮಾರು 15 ಮನೆಗಳಿದ್ದು ನೀರಿನ ಮಟ್ಟ ಹೆಚ್ಚಾದರೆ ಸಂಪರ್ಕ ಕಳೆದುಕೊಳ್ಳಲಿದೆ.
ಕಟೀಲಿನ ಸಮೀಪದ ಅಜಾರಿನಲ್ಲಿ ನಂದಿನಿ ನದಿಗೆ ಕಟ್ಟಲಾದ ಕಿಂಡಿ ಅಣೆಕಟ್ಟಿನಲ್ಲಿ ದೂಡ್ಡ ಮರವೊಂದು ಸಿಕ್ಕಿಹಾಕ್ಕಿಕೊಂಡಿದ್ದು, ಅಣೆಕಟ್ಟಿನ ಮೇಲ್ಭಾಗದ ಮೂಲಕ ನೀರು ಹರಿಯುತ್ತಿದೆ.
ಬಳಕುಂಜೆ ಹಾಗೂ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಶಾಂಭವಿ ನದಿ ಉಕ್ಕಿ ಹರಿದು ಪೆರ್ಗುಂಡಿ, ಕರಿಯತ್ತಲ ಗುಂಡಿ ಉಳೆಪಾಡಿ, ಪಟ್ಟೆ ಕ್ರಾಸ್ ಮತ್ತಿತರ ಪ್ರದೇಶದಲ್ಲಿ ತಗ್ಗು ಪ್ರದೇಶ ಜಲಾವೃತಗೊಂಡಿದ್ದು, ನೂರಾರು ಎಕರೆ ಕೃಷಿ ಭೂಮಿ ನಾಶವಾಗಿದೆ.