ಕರಾವಳಿಯಲ್ಲಿ ಕೈ ಕೊಟ್ಟ ಮುಂಗಾರು ಮಳೆ
ಮಂಗಳೂರು, ಜೂನ್ 29: ಕರಾವಳಿಯಲ್ಲಿ ಮಳೆ ಕೈಕೊಟ್ಟಿದೆಯೇ? ಜೂನ್ ಮುಗಿಯುತ್ತ ಬಂದರೂ ಕರಾವಳಿ ಜಿಲ್ಲೆಗಳಲ್ಲಿ ಸರಿಯಾಗಿ ಮಳೆ ಸುರಿಯುತ್ತಿಲ್ಲ. ಇನ್ನೂ ಮೋಡವಿಲ್ಲದ ಶುಭ್ರ ಬಾನು, ಉರಿ ಬಿಸಿಲು, ಸೆಕೆ ಜನರಲ್ಲಿ ದಿಗಿಲು ಹುಟ್ಟಿಸಿದೆ.
ಮಳೆಗಾಲ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಕರಾವಳಿಯಲ್ಲೆಲ್ಲೂ ವರುಣನ ಕೃಪೆ ಕಾಣಿಸುತ್ತಿಲ್ಲ. ದಿನದಲ್ಲಿ ಒಂದೆರಡು ಬಾರಿ ಸಣ್ಣ ಪ್ರಮಾಣದ ಮಳೆ ಬಂದು ಕಣ್ಮರೆಯಾಗುತ್ತಿದೆ. ಉಕ್ಕಿ ಹರಿಯಬೇಕಿದ್ದ ನದಿ ತೊರೆಗಳು ಇನ್ನೂ ತಣ್ಣಗಿವೆ.
ದಕ್ಷಿಣ ಕನ್ನಡದಲ್ಲಿ ಮಳೆ ಅಭಾವದ ನಡುವೆಯೂ ನಾಟಿ ಕಾರ್ಯ ಆರಂಭ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯೂ ಮುಂಗಾರು ತಲ್ಲಣ ಸೃಷ್ಟಿಸಿದೆ. ಹವಾಮಾನ ಇಲಾಖೆಯ ಅಂಕಿ ಅಂಶದ ಪ್ರಕಾರ ಜೂನ್ 1ರಿಂದ ಜೂ.25ರವರೆಗೆ ವಾಡಿಕೆ ಮಳೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.55 ಮತ್ತು ಉಡುಪಿಯಲ್ಲಿ ಶೇ. 47 ಮಳೆ ಕೊರತೆ ಆಗಿದೆ. ಆದರೆ ಕಳೆದ ವರ್ಷ ಇದೇ ಹೊತ್ತಿಗೆ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದವು.
ಮಳೆಯಿಲ್ಲದೆ ಕೃಷಿಕರು, ಜನ ಆಕಾಶದತ್ತ ನೋಡುತ್ತಿದ್ದಾರೆ. ಕರಾವಳಿಯಲ್ಲಿ ಈಗ ಎಲ್ಲೆಡೆ ಮಳೆ ಕೈಕೊಟ್ಟಿರುವುದೇ ಚರ್ಚೆಯಾಗುತ್ತಿದೆ. ದಕ್ಷಿಣ ಕನ್ನಡದ ಜೀವ ನದಿ ನೇತ್ರಾವತಿ ಇನ್ನೂ ತುಂಬಿಲ್ಲ. ಕಳೆದ ವರ್ಷ ಈ ಹೊತ್ತಿಗೆ ನೇತ್ರಾವತಿಯಲ್ಲಿ ನೀರಿನ ಮಟ್ಟ 5.2 ಮೀ. ಇತ್ತು. ಆದರೆ ಈ ಬಾರಿ 3 ಮೀ. ಮಾತ್ರ ಇದೆ. ಇದೇ ಸ್ಥಿತಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಇತರ ನದಿಗಳಲ್ಲೂ ಕಂಡು ಬಂದಿದೆ.
ಮಂಗಳೂರಿನಲ್ಲಿ ಮೀನಿನ ಅಭಾವ, ಗಗನಕ್ಕೇರಿದ ಮೀನಿನ ಬೆಲೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 1ರಿಂದ ಜೂನ್ 25ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಕನಿಷ್ಠ ಮಳೆಯಾಗಿದ್ದು, ಇದು 6 ವರ್ಷಗಳಲ್ಲಿ ಕನಿಷ್ಠ ಮಳೆ ಎಂದು ಹೇಳಲಾಗುತ್ತಿದೆ. 2014ರಲ್ಲಿ ಜೂನ್ನಲ್ಲಿ 567 ಮಿ.ಮೀ., 2015ರಲ್ಲಿ 671 ಮಿ.ಮೀ., 2016ರಲ್ಲಿ 940.7 ಮಿ.ಮೀ., 2017ರಲ್ಲಿ 865 ಮಿ.ಮೀ. ಮತ್ತು 2018ರಲ್ಲಿ 1,223.6 ಮಿ.ಮೀ. ಮಳೆಯಾಗಿತ್ತು. 2018ರ ಜನವರಿಯಿಂದ ಜೂನ್ ವರೆಗೆ ಬಂದಿರುವ ಮಳೆಗೆ ಹೋಲಿಸಿದರೂ ಈ ಬಾರಿ ಕನಿಷ್ಠವಾಗಿದೆ. 2014ರಲ್ಲಿ ಜನವರಿಯಿಂದ ಜೂನ್ ಅಂತ್ಯದವರೆಗೆ 990 ಮಿ.ಮೀ., 2015ರಲ್ಲಿ 990 ಮಿ.ಮೀ., 2016ರಲ್ಲಿ 1092 ಮಿ.ಮೀ., 2017ರಲ್ಲಿ 1,044 ಮಿ.ಮೀ., 2018 ರಲ್ಲಿ 1723 ಮಿ.ಮೀ. ಮಳೆಯಾಗಿತ್ತು.
ಕರಾವಳಿಯಲ್ಲಿ ಇನ್ನೂ ಕಡಲಿಗಿಳಿಯದ ನಾಡದೋಣಿಗಳು
ಮುಂಗಾರು ಮಳೆ ಕೈ ಕೊಟ್ಟಿರುವ ಕಾರಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಮತ್ತು ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಜೂನ್. 21ರವರೆಗೆ ಬಿತ್ತನೆ ಆಗಿರುವುದು ಕೇವಲ 60 ಹೆಕ್ಟೇರ್ ಪ್ರದೇಶದಲ್ಲಿ. ಕಳೆದ ವರ್ಷ ಇದೇ ಅವಧಿಯಲ್ಲಿ 2,724 ಹೆಕ್ಟೇರ್ನಲ್ಲಿ ಬಿತ್ತನೆ ಮತ್ತು ನಾಟಿ ಆಗಿತ್ತು.
ಜೂನ್ ತಿಂಗಳಿನಲ್ಲಿ ಮುಂಗಾರು ದುರ್ಬಲವಾಗಿದ್ದು, ಲಭ್ಯ ಹವಾಮಾನ ಮುನ್ಸೂಚನೆ ಪ್ರಕಾರ ಜುಲೈ ಮೊದಲ ವಾರದಲ್ಲಿ ಮುಂಗಾರು ಚುರುಕುಗೊಳ್ಳುವ ನಿರೀಕ್ಷೆ ಇದೆ.