ರಮಾನಾಥ್ ರೈ ಧರ್ಮಸ್ಥಳಕ್ಕೆ ಆಣೆ-ಪ್ರಮಾಣಕ್ಕೆ ಬರಲಿ: ಹರಿಕೃಷ್ಣ ಬಂಟ್ವಾಳ ಸವಾಲ್
ಮಂಗಳೂರು, ಜನವರಿ 1: ಜನಾರ್ದನ ಪೂಜಾರಿ ಅವರನ್ನು ರಮಾನಾಥ್ ರೈ ಅವಹೇಳನಕಾರಿಯಾಗಿ ನಿಂದಿಸಿರುವ ಬಗ್ಗೆ ಆಣೆ ಪ್ರಮಾಣಕ್ಕೆ ಸಿದ್ಧರಿರುವುದಾಗಿ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಜನಾರ್ದನ ಪೂಜಾರಿ ಅವರ ವಿಚಾರದಲ್ಲಿ ರಮಾನಾಥ ರೈ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಅರುಣ್ ಕುವೆಲ್ಲೋ ಮತ್ತು ನಾನು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ಧರಿರುವುದಾಗಿ ಅವರು ಸ್ಪಷ್ಟಪಡಿಸಿದರು. ಸಚಿವ ರಮಾನಾಥ ರೈ ಬೈದದ್ದು ಕಾಂಗ್ರೆಸ್ ಮುಖಂಡ ಅರುಣ್ ಕುವೆಲ್ಲೊ ಮುಂದೆ ಹೊರತು ಜನಾರ್ದನ ಪೂಜಾರಿ ಕುಟುಂಬದ ಮುಂದೆಯಲ್ಲ. ಧರ್ಮಸ್ಥಳಕ್ಕೆ ಆಣೆ ಪ್ರಮಾಣಕ್ಕೆ ಬಂದರೆ ಮುಂದೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ರೈ ಆಣೆ ಪ್ರಮಾಣಕ್ಕೆ ಬರುವುದಿಲ್ಲ ಎಂದು ಅವರು ಹೇಳಿದರು.
ಪೂಜಾರಿಯವರ ಕುಟುಂಬದವರು ಬರುವುದಿಲ್ಲವೆಂದು ಗೊತ್ತಿದ್ದೇ ರಮಾನಾಥ್ ರೈ , ಪೂಜಾರಿ ಅವರ ಕುಟುಂಬದವರನ್ನು ಆಣೆ ಪ್ರಮಾಣಕ್ಕೆ ಕರೆಯುತ್ತಿದ್ದಾರೆ. ಆಣೆ ಪ್ರಮಾಣದ ಸವಾಲನ್ನು ರಮಾನಾಥ ರೈ ಸ್ವೀಕರಿಸಿ ಯಾವುದೇ ದಿನಾಂಕ ನಿಗದಿಪಡಿಸಲಿ ನಾವು ಬರುತ್ತೇವೆ ಎಂದು ಅವರು ಹೇಳಿದರು.
ನಾನು ಕಾಂಗ್ರೆಸ್ ನಲ್ಲಿ ಇರುವ ಸಂಧರ್ಭದಲ್ಲಿ ರಮಾನಾಥ್ ರೈ 1985 ರಲ್ಲಿ ನನಗೆ ಜಿಲ್ಲಾ ಪಂಚಾಯತ್ ಟಿಕೆಟ್ ನೀಡುವುದಾಗಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಕಳೆದ ಬಾರಿ ರೈ ನನಗೆ ಎಂಎಲ್ಸಿ ಸೀಟು ಕೊಡುವುದಾಗಿ ಹೇಳಿ ಮುಖ್ಯಮಂತ್ರಿ ಅವರಲ್ಲಿ ಪ್ರತಾಪ್ ಚಂದ್ರ ಶೆಟ್ಟಿಯವರ ಹೆಸರು ಪ್ರಸ್ತಾಪಿಸಿ ಮೋಸ ಮಾಡಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ಆರೋಪಿಸಿದರು.