ರಾಹುಲ್ ಎಂದರೆ ಬೆಳಕು. ಮೋದಿ, ಶಾ ಎಂದರೆ ಕತ್ತಲು; ಇದೇ ನಮ್ಮ ಘೋಷವಾಕ್ಯ
ಮಂಗಳೂರು ಏಪ್ರಿಲ್ 16: ಮುಲ್ಕಿ - ಮೂಡಬಿದ್ರೆ ಕ್ಷೇತ್ರದಿಂದ ಶಾಸಕ ಅಭಯಚಂದ್ರ ಜೈನ್ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನನಗೆ ಟಿಕೆಟ್ ಕೈ ತಪ್ಪಿದೆ ಎಂದು ವಿಧಾನ ಪರಿಷತ್ ನ ಮುಖ್ಯ ಸಚೇತಕ ಐವನ್ ಡಿಸೋಜಾ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಶಾಸಕ ಅಭಯಚಂದ್ರ ಜೈನ್ ಚುನಾವಣೆಗೆ ಸ್ವರ್ಧಿಸುವುದಿಲ್ಲ. ಯುವಕರಿಗೆ ಅವಕಾಶ ಕೊಟ್ಟಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾನು ಹಾಗೂ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಟಿಕೆಟ್ ಗಾಗಿ ಅರ್ಜಿ ಹಾಕಿದ್ದೆವು ಎಂದು ಅವರು ಸ್ವಷ್ಟನೆ ನೀಡಿದರು.
ನೀತಿ ಸಂಹಿತೆ ಹೆಸರಲ್ಲಿ ಜನಸಾಮಾನ್ಯರ ಮೇಲೆ ತುರ್ತು ಪರಿಸ್ಥತಿ: ಐವನ್
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಅಭಯಚಂದ್ರ ಜೈನ್ ಅವರಿಗೆ ಟಿಕೆಟ್ ಬೇಡ ಅಂದರೆ ನನಗೆ ಟಿಕೆಟ್ ನೀಡುವುದಾಗಿ ತಿಳಿಸಿದ್ದರು. ಆದರೆ ಈಗ ಅಭಯಚಂದ್ರ ಜೈನ್ ಗೆ ಟಿಕೆಟ್ ನೀಡಿದ್ದಾರೆ. ಇದರಿಂದ ಯಾವುದೇ ಬೇಸರ ಇಲ್ಲ ಎಂದು ಹೇಳಿದ ಅವರು, ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸುತ್ತಿರುವ ಆಭಯಚಂದ್ರ ಜೈನ್ ಅವರಿಗೆ ಶುಭ ಹಾರೈಸುತ್ತೇನೆ ಎಂದರು.
ಮುಂಬರುವ ಚುನಾವಣೆ ಸುಲಭದಲ್ಲಿ ಗೆಲ್ಲಬಹುದಾದ ಚುನಾವಣೆಯಲ್ಲ. ಮುಂಬರುವ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಮುಂದಿನ ಚುನಾವಣೆ ಸತ್ಯ ಮತ್ತು ಅಸತ್ಯ, ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ನಡೆಯುವ ಚುನಾವಣೆಯಾಗಿದೆ ಎಂದು ಅವರು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದ ಅವರು, ರಾಜ್ಯದಲ್ಲಿ ಕನಿಷ್ಟ 140 ಸೀಟುಗಳನ್ನು ಪಡೆದು ಕಾಂಗ್ರೆಸ್ ಮತ್ತೆ ಆಧಿಕಾರಕ್ಕೆ ಬರಲಿದೆ . ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.
"ರಾಹುಲ್ ಗಾಂಧಿ ಎಂದರೆ ಬೆಳಕು. ಮೋದಿ, ಅಮಿತ್ ಶಾ ಅಂದರೆ ಕತ್ತಲು," ಎಂಬ ಘೋಷ ವಾಕ್ಯದೊಂದಿಗೆ ಮುಂದಿನ ಚುನಾವಣೆ ಎದುರಿಸಲಿದ್ದೇವೆ ಎಂದು ಅವರು ಹೇಳಿದರು.