ರಾಹುಲ್ ಹೀರೊ.. ಮೋದಿ ಝೀರೊ: ಪೂಜಾರಿ ಲೇವಡಿ
ಮಂಗಳೂರು, ಡಿಸೆಂಬರ್ 28: ಈವರೆಗೆ ಸ್ವ ಪಕ್ಷದ ಸಿಎಂ ಹಾಗೂ ಸಚಿವರ ವಿರುದ್ಧ ಕಿಡಿಕಾರುತ್ತಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ನೋಟ್ ಬ್ಯಾನ್ ಆದ ಬಳಿಕ ದೇಶದ ಜನ ಕಂಗಾಲಾಗಿದ್ದಾರೆ. ಬ್ಯಾಂಕ್, ಎಟಿಎಂನಲ್ಲಿ ಹಣ ಇಲ್ಲದೆ ಜನ ಪರದಾಡುತ್ತಿದ್ದಾರೆ. ಹೇ, ಮೋದಿಯವರೇ ನಿಮ್ಮ ಅಚ್ಛೇ ದಿನ್ ಎಲ್ಲಿ ಹೋಯ್ತು? ಎಂದು ಪ್ರಶ್ನಿಸಿದರು. [ಸಿದ್ದರಾಮಯ್ಯ ಅವರಿಗೆ ಜನಾರ್ದನ ಪೂಜಾರಿ ಮಂಗಳಾರತಿ!]
ನೀವು ರಾಹುಲ್ ಗಾಂಧಿಯನ್ನು ಹೀಯಾಳಿಸುತ್ತಿದ್ದೀರಿ ಅಲ್ವಾ. ಈಗ ರಾಹುಲ್ ಹೀರೊ. ಮೋದಿ ಝೀರೊ ಆಗಿದ್ದಾರೆ ಎಂದು ವ್ಯಂಗ್ಯವಾಡಿ ಕ್ಯಾಷ್ ಲೆಸ್ ಸೊಸೈಟಿ ಈ ದೇಶದಲ್ಲಿ ಸಾಧ್ಯವಿದೆಯೇ? ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಪಕ್ಷಕ್ಕೆ ಕೋಟ್ಯಂತರ ರೂಪಾಯಿ ಸಂದಾಯವಾಗಿರೋ ಆರೋಪ ಇದೆ. ಕಾಂಗ್ರೆಸ್ ಸಹಿತ ಯಾರಿಗೆಲ್ಲ ಹಣ ಸಂದಾಯ ಆಗಿದ್ಯೋ ತನಿಖೆಯಾಗಲಿ ಎಂದು ಪ್ರಧಾನಿ ಮೋದಿಗೆ ಪೂಜಾರಿ ಸವಾಲು ಹಾಕಿದರು.
ಡಿವಿಎಸ್ ವಿರುದ್ಧವೂ ಕಿಡಿ: ಇದೇ ವೇಳೆ ವಿವಾದಿತ ಎತ್ತಿನಹೊಳೆ ಯೋಜನೆ ವಿಚಾರದ ಕುರಿತು ಮಾತನಾಡಿದ ಜನಾರ್ಧನ ಪೂಜಾರಿ, ಮಾಜಿ ಸಿಎಂ ಸದಾನಂದ ಗೌಡ 2 ಸಾವಿರ ಟಿಎಂಸಿ ನೀರು ಸಮುದ್ರಕ್ಕೆ ಹೋಗುತ್ತೆ ಎಂದರೆ ಇವರು ಯಾವ ಆಧಾರದಲ್ಲಿ ಈ ಅಂಕಿಅಂಶ ನೀಡಿದ್ದಾರೆಂಬುದನ್ನು ಜನರಿಗೆ ತಿಳಿಸಬೇಕು ಎಂದು ಸವಾಲ್ ಹಾಕಿದರು.
ಅಧಿಕಾರಕ್ಕಾಗಿ ಓಡಿಹೋದವರು ಕರಾವಳಿ ಜನರಿಗೆ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ಅವರಿಗೆ ಟಾಂಗ್ ಕೊಟ್ಟರು. ಓಟಿಗಾಗಿ ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಡಿವಿಎಸ್ ಗೆ ಪೂಜಾರಿ ಸಲಹೆ ನೀಡಿದರು.