ಹತಾಶ ರೇವಣ್ಣರಿಂದ ದೇವಸ್ಥಾನದೊಳಗೆ ಮಾಧ್ಯಮದವರ ಮೇಲೆ ಬೈಗುಳ
Recommended Video
ಮಂಗಳೂರು, ಜುಲೈ 14: ಕರ್ನಾಟಕ ರಾಜಕೀಯದ ಬಿಕ್ಕಟ್ಟಿನಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗಿಂತ ಹೆಚ್ಚು ಚಿಂತೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರಿಗೇ ಇದ್ದಂತಿದೆ. ಸರಕಾರ ಉಳಿಯಲಿ ಎಂದು ಗುಡಿ- ಗುಂಡಾರಗಳನ್ನು ಸುತ್ತುತ್ತಿರುವ ಸಚಿವರು ಕಟೀಲು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿದ ವೇಳೆ ಪತ್ರಕರ್ತರನ್ನು ನಿಂದಿಸಿದ್ದಾರೆ.
ದೇವಸ್ಥಾನದೊಳಗೇ ರೇವಣ್ಣ ಅವರು ಆಡಿದ ಮಾತುಗಳು ಆಕ್ರೋಶಕ್ಕೆ ಕಾರಣ ಆಗಿದೆ. "ಕಚಡಾ ನನ್ನ ಮಕ್ಳಾ, ನಾಚಿಕೆ ಆಗೊಲ್ಲವಾ?" ಎಂದು ಫೋಟೋ ತೆಗೆಯುತ್ತಿದ್ದ ಹಾಗೂ ವಿಡಿಯೋ ಮಾಡುತ್ತಿದ್ದ ಪತ್ರಕರ್ತರನ್ನು ನಿಂದಿಸಿದ್ದಾರೆ. ಇದರ ಜತೆಗೆ ಪೊಲೀಸರಿಗೆ ಸೂಚನೆ ನೀಡಿ, ಫೋಟೋ- ವಿಡಿಯೋ ಕೂಡ ಡಿಲೀಟ್ ಮಾಡಿಸಿದ್ದಾರೆ.
ಸರ್ಕಾರ ಉಳಿಸಿಕೊಳ್ಳಲು ದೇವಸ್ಥಾನಗಳ ಸುತ್ತು ಹಾಕಿದ ಎಚ್.ಡಿ.ರೇವಣ್ಣ
ಇಷ್ಟೆಲ್ಲ ಆದ ನಂತರ ತರಾತುರಿಯಲ್ಲಿ ಪ್ರಸಾದ ತೆಗೆದುಕೊಂಡು ಅಲ್ಲಿಂದ ರೇವಣ್ಣ ಹೊರಟುಬಿಟ್ಟಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದ ಅಸ್ಥಿರತೆ ಕಾಣಿಸಿಕೊಂಡ ದಿನದಿಂದ ಅಥವಾ ಅದಕ್ಕೂ ಮುನ್ನ, ಅಂದರೆ ಲೋಕಸಭಾ ಚುನಾವಣೆ ಘೋಷಣೆ ಆದಂದಿನಿಂದ ದೇವಸ್ಥಾನ- ಹೋಮ, ಹವನ ಎಂದು ಸುತ್ತಾಡುತ್ತಿರುವ ಸಚಿವ ರೇವಣ್ಣ ಅವರು ಹೋದ ಕಡೆಯೆಲ್ಲ ಮಾಧ್ಯಮದವರು ಹಿಂಬಾಲಿಸುತ್ತಾರೆ, ಸುದ್ದಿ ಮಾಡುತ್ತಾರೆ.
ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ರೇವಣ್ಣ ತೆರಳಿದಾಗಲೂ ಮಾಧ್ಯಮದವರು ಸುದ್ದಿಗಾಗಿ ತೆರಳಿದ್ದಾರೆ. ಆದರೆ ಮೈತ್ರಿ ಸರಕಾರದ ಸ್ಥಿತಿ ಮತ್ತಷ್ಟು ವಿಷಮಗೊಂಡಿರುವುದರಿಂದ ಹತಾಶೆಗೆ ಒಳಗಾದಂತೆ ಇರುವ, ಜತೆಗೆ ಕಡತ ವಿಲೇವಾರಿ, ಬಡ್ತಿ ಇತ್ಯಾದಿಗಳಲ್ಲಿ ಸಕ್ರಿಯರಾಗಿದ್ದಾರೆ ಎಂಬ ಮಾಧ್ಯಮಗಳ ವರದಿಯಿಂದ ಸಿಟ್ಟಾಗಿರಬಹುದಾದ ರೇವಣ್ಣ ಮಾಧ್ಯಮದವರನ್ನು ನಿಂದಿಸಿದ್ದಾರೆ.