ಗದ್ದೆಯಲ್ಲಿ ಉಳುಮೆ ಮಾಡಿದ ಸುಪ್ರೀಂ ಕೋರ್ಟ್ ಹೆಚ್ಚುವರಿ ಸಾಲಿಟರ್ ಜನರಲ್
ಪುತ್ತೂರು, ಜೂನ್ 11: ಮರ ಎಷ್ಟೇ ಎತ್ತರ ಬೆಳೆದರೂ ಅದರ ಕಾಂಡ ಇರೋದು ಮಾತ್ರ ಭೂಮಿಯಲ್ಲಿಯೇ..ಈ ಮಾತು ದೇಶದ ಉನ್ನತ ಹುದ್ದೆಯ ಈ ಅಧಿಕಾರಿಯ ಪಾಲಿಗೆ ನೂರಕ್ಕೆ ನೂರು ಸತ್ಯವಾಗಿದೆ..ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಸುಪ್ರೀಂಕೋರ್ಟ್ ನ ಹೆಚ್ಚುವರಿ ಸಾಲಿಟರ್ ಜನರಲ್ ಕೆ.ಎಂ ನಟರಾಜ್ ತನ್ನ ಮನೆಯ ಗದ್ದೆಯಲ್ಲಿ ಉಳುಮೆ ಮಾಡುವ ಮೂಲಕ ಸರ್ವರಿಗೂ ಮಾದರಿಯಾಗಿದ್ದಾರೆ.
ಲಾಕ್ ಡೌನ್ ಕಾರಣದಿಂದ ತಮ್ಮ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದ ಊರಿಗೆ ಬಂದಿರುವ ದೇಶದ ಉನ್ನತ ಹಾಗೂ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿರುವ ಸುಪ್ರೀಂಕೋರ್ಟ್ ನ ಹೆಚ್ಚುವರಿ ಸಾಲಿಟರ್ ಜನರಲ್ ಕೆ.ಎಂ.ನಟರಾಜ್ ಇದೀಗ ಮನೆಯಿಂದಲೇ ಕಛೇರಿ ಕೆಲಸವನ್ನು ನಿರ್ವಹಿಸುವುದರ ಜೊತೆಗೆ ತನ್ನನ್ನು ಬೆಳೆಸಿದ ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ.
ಕೃಷಿ ಕುಟುಂಬದಿಂದ ಬಂದಿರುವ ಕೆ.ಎಂ ನಟರಾಜ್ ರವರ ಇಡೀ ಕುಟುಂಬವೇ ಕೃಷಿಯನ್ನೇ ಮಾಡಿ ಜೀವನ ನಡೆಸಿದೆ..ಬಾಲ್ಯದಲ್ಲಿ ಅನ್ನ ನೀಡಿದ ಕೃಷಿಯನ್ನು,ಇದೀಗ ಅತ್ಯುನ್ನತ ಹುದ್ದೆಯಲ್ಲಿದ್ದರೂ ನಟರಾಜ್ ರವರು ಮರೆತಿಲ್ಲ..
ದೆಹಲಿಯಲ್ಲಿ ಸುಪ್ರೀಂಕೋರ್ಟ್ ನ ಕಲಾಪಗಳಲ್ಲಿ ವರ್ಷಪೂರ್ತಿ ಬ್ಯುಸಿಯಾಗಿರುವ ನಟರಾಜ್ ಕೆಲವು ದಿನಗಳ ಮಟ್ಟಿಗೆ ಊರಿಗೆ ಬಂದರೂ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಅವಕಾಶ ಅವರಿಗೆ ಸಿಗುತ್ತಿರಲಿಲ್ಲ.
ಆದರೆ ಈ ಬಾರಿ ಕೊರೊನಾ ಲಾಕ್ ಡೌನ್ ದೇಶದೆಲ್ಲೆಡೆ ಹೇರಿಕೆಯಾದ ಕಾರಣ, ನಟರಾಜ್ ದೆಹಲಿಯಿಂದ ನೇರವಾಗಿ ಊರಿಗೆ ಬಂದಿದ್ದಾರೆ. ಮನೆಯಿಂದಲೇ ಸುಪ್ರೀಂಕೋರ್ಟ್ ನಲ್ಲಿನ ತನ್ನ ಕೆಲಸವನ್ನು ನಿರ್ವಹಿಸುತ್ತಿರುವ ಇವರು ತನ್ನ ಬಿಡುವಿನ ವೇಳೆಯನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ನಟರಾಜ್ ರವರ ಮನೆಯಲ್ಲಿ ಅನಾದಿ ಕಾಲದಿಂದಲೂ ಭತ್ತದ ಬೇಸಾಯವನ್ನು ಮಾಡುತ್ತಿದ್ದು, ಈ ಬಾರಿ ಮುಂಗಾರು ಆರಂಭದ ಕಾರಣ ಕೆಲಸದಲ್ಲಿ ತೊಡಗಿಕೊಳ್ಳುವ ಅವಕಾಶ ಸಿಕ್ಕಿದೆ..ಖುಷಿಯಿಂದಲೇ ಕೆಸರಿನ ಗದ್ದೆಗೆ ಇಳಿದ ನಟರಾಜ್ ಟ್ಯಾಕ್ಟರ್ ಹಾಗೂ ಟಿಲ್ಲರ್ ಮೂಲಕ ಗದ್ದೆಯನ್ನು ಸಂಪೂರ್ಣ ಹದ ಮಾಡಿದ್ದಾರೆ..ಸಾಮಾನ್ಯ ರೈತನಂತೇ ಹಳೆಯ ಶರ್ಟು, ಲುಂಗಿ ಹಾಕಿಕೊಂಡು ಗದ್ದೆಯಲ್ಲಿ ಉಳುಮೆ ಮಾಡಿದ್ದಾರೆ..
ಕೃಷಿ ನನ್ನ ರಕ್ತದಿಂದಲೇ ಬಂದಿರುವ ಕಾರಣ, ಮಣ್ಣಿನ ಖುಣ ನನ್ನ ಮೇಲೆಯೂ ಇರುವ ಕಾರಣಕ್ಕಾಗಿ ಸಿಕ್ಕಿದ ಅವಕಾಶವನ್ನು ಬಳಸಿಕೊಂಡಿದ್ದೇನೆ ಎಂದು ಅಭಿಪ್ರಾಯ ಹಂಚಿಕೊಂಡಿರುವ ಕೆ.ಎಂ.ನಟರಾಜ್ ರವರು ಯುವಕರು ಕೃಷಿಯಲ್ಲಿ ತೊಡಗಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ..