ಪತ್ತೆಯಾಗದ ನಾಲ್ವರು; ಮಂಗಳೂರಿನಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸುವಂತೆ ಪ್ರತಿಭಟನೆ
ಮಂಗಳೂರು, ಡಿಸೆಂಬರ್ 2: ಮಂಗಳೂರಿನಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಬೋಟ್ ಮುಳುಗಡೆಯಾಗಿದ್ದು, ನಾಪತ್ತೆಯಾಗಿದ್ದ ಆರು ಮಂದಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ನಾಲ್ವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಮೀನುಗಾರಿಕೆಗೆ ಸೋಮವಾರ ಮುಂಜಾನೆ ಬೋಳಾರದ ಶ್ರೀರಕ್ಷಾ ಹೆಸರಿನ ಬೋಟ್ ತೆರಳಿತ್ತು. ಈ ಸಂದರ್ಭ ಬೋಟ್ ಮುಳುಗಡೆಯಾಗಿ, ಬೋಟ್ ನಲ್ಲಿದ್ದ 22 ಮಂದಿಯ ಪೈಕಿ ಆರು ಮೀನುಗಾರರು ನಾಪತ್ತೆಯಾಗಿದ್ದರು. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿತ್ತು. ಮಂಗಳವಾರ ಸಂಜೆ ವೇಳೆಗೆ ಇಬ್ಬರ ಮೃತದೇಹ ಪತ್ತೆಯಾಗಿದೆ.
ಮೀನುಗಾರಿಕೆಗೆ ತೆರಳಿದ್ದ ದೋಣಿ ಅವಘಡ; ಆರು ಮಂದಿ ನಾಪತ್ತೆ
ಮೃತಪಟ್ಟವರನ್ನು ಬೊಕ್ಕಪಟ್ಟ ನಿವಾಸಿಗಳಾದ ಸುವರ್ಣ, ಪ್ರೀತಂ ಎನ್ನಲಾಗಿದ್ದು, ಚಿಂತನ್, ಮೊಹಮ್ಮದ್ ಹಸೈನಾರ್, ಮೊಹಮದ್ ಅನ್ಸಾರ್, ಜಿಯಾವುಲ್ಲಾ ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಈ ನಡುವೆ ನಾಪತ್ತೆಯಾಗಿರುವ ನಾಲ್ಕು ಮಂದಿ ಶೋಧ ಕಾರ್ಯಕ್ಕೆ ಒತ್ತಾಯಿಸಿ, ಅವರು ಪತ್ತೆಯಾಗದೇ ಇದ್ದರೆ ಯಾವುದೇ ಮೀನುಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಬೆಂಗರೆ ನಾಗರಿಕರು ಮಂಗಳವಾರ ಮಧ್ಯರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ಮೀನುಗಾರಿಕೆಗೆ ತೆರಳಿ ಅನಾಹುತ ಸಂಭವಿಸಿದ ಸಂದರ್ಭ ಕರಾವಳಿ ರಕ್ಷಣಾ ಪಡೆ ಯಾವುದೇ ರೀತಿಯ ಕಾರ್ಯಾಚರಣೆ ನಡೆಸದೇ ಸ್ಥಳೀಯ ಮೀನುಗಾರರು, ಮುಳುಗುತಜ್ಞರು ಮಾಡಿದ ಕೆಲಸವನ್ನು ನಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಮೀನುಗಾರರಿಗೆ ಯಾವುದೇ ಸೌಲಭ್ಯ ಒದಗಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ಇಂಥ ದುರಂತಗಳು ಸಂಭವಿಸಿದ ಸಂದರ್ಭ ಮೀನುಗಾರಿಕೆ ಇಲಾಖೆ ಹಾಗೂ ಮೀನುಗಾರಿಕೆ ಸಂಘದ ವತಿಯಿಂದ ಸಹಕಾರ ದೊರೆಯುವುದಿಲ್ಲ ಎಂದು ಆರೋಪಿಸಿದ್ದಾರೆ.
Recommended Video
ಇದೇ ಸಂದರ್ಭ ಮೀನುಗಾರಿಕಾ ದೋಣಿ ದುರಂತದಿಂದ ಮೃತಪಟ್ಟ ಮೀನುಗಾರರಿಗೆ ಸರ್ಕಾರದಿಂದ ಪರಿಹಾರ ಘೋಷಿಸುವ ಕುರಿತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.