ಸುರತ್ಕಲ್ ಟೋಲ್ ಗೇಟ್ ವಿರುದ್ಧ ಮತ್ತೊಂದು ಹೋರಾಟಕ್ಕೆ ವೇದಿಕೆ ಸಜ್ಜು
ಮಂಗಳೂರು ಫೆಬ್ರವರಿ 20 : ಮಂಗಳೂರು ಹೊರವಲಯದ ಸುರತ್ಕಲ್ ಟೋಲ್ಗೇಟನ್ನು ಮುಚ್ಚಬೇಕು ಎಂದು ಒತ್ತಾಯಿಸಿ ಮತ್ತೊಮ್ಮೆ ಹೋರಾಟ ಆರಂಭಿಸಲು ನಾಗರಿಕ ಹೋರಾಟ ಸಮಿತಿ ನಿರ್ಧರಿಸಿದೆ. ಸ್ಥಳೀಯ ವಾಹನಗಳಿಂದ ಸುಂಕ ವಸೂಲಿ ತೀರ್ಮಾನ ಕೈ ಬಿಡಬೇಕು ಮತ್ತು ಕೂಳೂರು ನೂತನ ಸೇತುವೆ ನಿರ್ಮಾಣವನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿ ಇದೇ ಬರುವ ಫೆಬ್ವರಿ 28 ಸುರತ್ಕಲ್ ನ ಎನ್ಐಟಿಕೆ ಬಳಿಯ ಟೋಲ್ಗೇಟ್ ಮುಂಭಾಗ ಪ್ರತಿಭಟನೆ ನಡೆಸಲು ಸಮಿತಿ ತೀರ್ಮಾನಿಸಿದೆ.
ಪ್ರತಿಭಟನೆ ಹಿಂಪಡೆದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ
2016ರಲ್ಲಿ ಎನ್ಐಟಿಕೆ ಸಮೀಪ ಟೋಲ್ ಕೇಂದ್ರ ಆರಂಭಿಸಲಾಯಿತು. ಆದರೆ 9 ಕಿ.ಮೀ. ದೂರದ ಹೆಜಮಾಡಿಯಲ್ಲಿ ಮತ್ತೊಂದು ಟೋಲ್ ಕೇಂದ್ರ ಆರಂಭಗೊಂಡಿದೆ. ತಿಂಗಳುಗಳು ಉರುಳಿದರೂ ನಿಯಮದಂತೆ ಸುರತ್ಕಲ್ ಕೇಂದ್ರವನ್ನು ಮುಚ್ಚದೇ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಹೋರಾಟ ಸಮಿತಿ ಆರೋಪಿಸಿದೆ.
ಹಗಲು ರಾತ್ರಿ ಧರಣಿ ನಡೆಸಲಾಯಿತು. ಈ ಸಂದರ್ಭ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವ ಯು.ಟಿ. ಖಾದರ್ ರಾಜ್ಯ ಸರಕಾರದ ಮಟ್ಟದಲ್ಲಿ ಹೆದ್ದಾರಿ ಪ್ರಾಧಿಕಾರದ ಸಭೆ ಕರೆದು ಟೋಲ್ಗೇಟ್ ಸಮಸ್ಯೆ ಇತ್ಯರ್ಥಗೊಳಿಸುವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಹೋರಾಟವನ್ನು ಕೈಬಿಡಲಾಗಿತ್ತು. ಸಂಸದ ನಳಿನ್ಕುಮಾರ್ ಕಟೀಲು ವಿಲೀನದ ಬದಲಿಗೆ ಸುರತ್ಕಲ್ ಟೋಲ್ ಕೇಂದ್ರವನ್ನೇ ರದ್ದುಗೊಳಿಸಲಾಗುವುದು ಎಂದು ಸಾರ್ವಜನಿಕ ಹೇಳಿಕೆ ನೀಡಿದ್ದರು. ಆದರೆ ಈ ವರೆಗೆ ಯಾವುದೇ ಕ್ರಮಗಳು ಆಗಿಲ್ಲ ಎಂದು ಹೋರಾಟ ಸಮಿತಿಯ ಮುಖಂಡರು ಕಿಡಿಕಾರಿದ್ದಾರೆ.