ಕುಕ್ಕೆ ಸುಬ್ರಹ್ಮಣ್ಯಕ್ಕೆ ಇನ್ಮುಂದೆ ನಿರಂತರ ವಿದ್ಯುತ್ ಪೂರೈಕೆ
ಮಂಗಳೂರು, ಏಪ್ರಿಲ್ 19: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಅಂತಿಮ ಹಂತದಲ್ಲಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಸುಬ್ರಹ್ಮಣ್ಯ ಪರಿಸರದಲ್ಲಿ ಅಡಚಣೆ ರಹಿತವಾಗಿ ನಿರಂತರ ವಿದ್ಯುತ್ ಪೂರೈಕೆ ಮಾಡಲು ಭೂಗತ ವಿದ್ಯುತ್ ಮಾರ್ಗ ಮಾಡಲಾಗುತ್ತಿದ್ದು, ಯೋಜನೆ ಅಂತಿಮ ಹಂತದಲ್ಲಿದೆ.
ಲಾಕ್ಡೌನ್ ಎಫೆಕ್ಟ್; ಕುಕ್ಕೆ ಸುಬ್ರಹ್ಮಣ್ಯದ ವಾರ್ಷಿಕ ಆದಾಯದಲ್ಲಿ ಭಾರೀ ಇಳಿಕೆ
ಭೂಗತ ವಿದ್ಯುತ್ ತಂತಿ ಅಳವಡಿಕೆ ಗುತ್ತಿಗಾರಿನಿಂದ ಸುಬ್ರಹ್ಮಣ್ಯದ ಇಂಜಾಡಿಯವರೆಗೆ ನಡೆಯಲಿದ್ದು, ಕುಮಾರಾಧಾರಾಲ್ಲಿರುವ ವಿದ್ಯುತ್ ಉಪವಿಭಾಗದ ತನಕ ಕೆಲಸ ನಡೆಯಲಿದೆ. ಯೋಜನೆ ಪೂರ್ಣಗೊಂಡ ಬಳಿಕ ಸುಬ್ರಹ್ಮಣ್ಯ ಪರಿಸರಕ್ಕೆ ನಿರಂತರ ವಿದ್ಯುತ್ ಪೂರೈಕೆಯಾಗಲಿದೆ.
ಸುಬ್ರಹ್ಮಣ್ಯದ ಪರಿಸರ ಕಾಡಿನಿಂದ ಆವೃತ್ತಿಯಾಗಿದ್ದು, ಪ್ರತಿ ಮಳೆಗಾಲದಲ್ಲಿ ವಿದ್ಯುತ್ ಕಂಬ ತುಂಡಾಗಿ ಮತ್ತು ವಿದ್ಯುತ್ ತಂತಿ ಮೇಲೆ ಮರದ ರೆಂಬೆಗಳು ಬಿದ್ದು ವಿದ್ಯುತ್ ಸಂಪರ್ಕಕ್ಕೆ ಅಡಚಣೆಯಾಗುತಿತ್ತು. ಇದರಿಂದ ಇಲಾಖೆಯ ಬೊಕ್ಕಸಕ್ಕೂ ಭಾರೀ ನಷ್ಟವುಂಟಾಗುತ್ತಿತ್ತು. ಈ ಸಮಸ್ಯೆಯನ್ನು ಹೋಗಲಾಡಿಸಲು ಕುಕ್ಕೆ ಸುಬ್ರಹ್ಮಣ್ಯದ ಮಾಸ್ಟರ್ ಪ್ಲಾನ್ ಯೋಜನೆಯಡಿ 17 ಕಿಮೀ ದೂರದ ಭೂಗತ ವಿದ್ಯುತ್ ಮಾರ್ಗ ಯೋಜನೆ ಮಾಡಲಾಗಿದೆ.
ಗುತ್ತಿಗಾರಿನಿಂದ ಸುಬ್ರಹ್ಮಣ್ಯದ ತನಕ 17 ಕಿಮೀ ದೂರದ ಯೋಜನೆ ಇದಾಗಿದ್ದು, ಇದರಿಂದ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ಸುಬ್ರಹ್ಮಣ್ಯ ಪರಿಸರದ ಜನರಿಗೂ ಸಹಕಾರಿಯಾಗಲಿದೆ. ಗ್ರಾಮೀಣ ರೈತರಿಗೂ ಈ ಯೋಜನೆ ನೆರವಾಗಲಿದ್ದು, ದಿನದ 12 ಗಂಟೆ ನಿರಂತರವಾಗಿ ಕೃಷಿಗೆ ತ್ರಿ-ಫೇಸ್ ವಿದ್ಯುತ್ ಸಿಗಲಿದೆ. ಪುತ್ತೂರು-ಕಡಬ, ಮಾಡಾವು-ಬೆಳ್ಳಾರೆ, ಗುತ್ತಿಗಾರು-ಸುಬ್ರಹ್ಮಣ್ಯ ಉಪಕೇಂದ್ರಕ್ಕೆ ವಿದ್ಯುತ್ ಒದಗಿಸಲು ಈ ಯೋಜನೆ ಮಾಡಲಾಗಿದೆ.
ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ವೀಕ್ಷಣೆ ಮಾಡಿದ್ದು, ರೈತರಿಗೆ ಇದರಿಂದ ನೆರವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.