ಉಜಿರೆ ಮತಎಣಿಕೆ ಕೇಂದ್ರದಲ್ಲಿ ಪಾಕ್ ಪರ ಘೋಷಣೆಯ ಹಿಂದಿನ ಕಾರಣ ಬಿಚ್ಚಿಟ್ಟ ಪ್ರಮೋದ್ ಮುತಾಲಿಕ್
ಮಂಗಳೂರು, ಡಿ 30: ದಕ್ಷಿಣಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥಸ್ವಾಮಿ (SDM) ಕಾಲೇಜಿನ ಮತಎಣಿಕೆ ಕೇಂದ್ರದಲ್ಲಿ ಎಸ್ಡಿಪಿಐ ಕಾರ್ಯಕರ್ತರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ವ್ಯಾಪಕ ಆಕ್ರೋಶಕ್ಕೆ ಒಳಗಾಗಿದೆ.
ಜಿಲ್ಲೆಯ ಕೆಲವೊಂದು ಪಂಚಾಯಿತಿಯಲ್ಲಿ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದರು. ಈ ವೇಳೆ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ 'ಜಿಂದಾಬಾದ್..ಜಿಂದಾಬಾದ್..ಪಾಕಿಸ್ತಾನ್ ಜಿಂದಾಬಾದ್' ಎನ್ನುವ ಘೋಷಣೆ ಕೇಳಿ ಬಂದಿದೆ.
ಉಜಿರೆ; ಮತ ಎಣಿಕೆ ಕೇಂದ್ರದ ಮುಂದೆ ಪಾಕಿಸ್ತಾನ ಪರ ಘೋಷಣೆ
ಈ ಬಗ್ಗೆ ಮಾತನಾಡಿರುವ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, "ಇದೊಂದು ಗಂಭೀರವಾದ ದೇಶದ್ರೋಹ ಪ್ರಕರಣ. ಅವರನ್ನೆಲ್ಲರನ್ನೂ ಒದ್ದು ಒಳಗೆ ಹಾಕಬೇಕು, ಹಾಗೂ ಅವರ ಬೆಂಬಲಿಗರ ಜಯವನ್ನು ಅಸಿಂಧು ಮಾಡಬೇಕು" ಎನ್ನುವ ಅಭಿಪ್ರಾಯವನ್ನು ಪಟ್ಟರು.
"ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂತಹ ದೇಶ ವಿರೋಧಿ ಪ್ರಕರಣ ಹೆಚ್ಚಾಗುತ್ತಿರುವುದಕ್ಕೆ ಕಾರಣ ಎಂದರೆ, ಅದು ಕೇರಳದಿಂದ ಟ್ರೈನಿಂಗ್ ಪಡೆದು ನಮ್ಮ ಭಾಗದಲ್ಲಿ ವಿಷಬೀಜವನ್ನು ಬಿತ್ತುತ್ತಿದ್ದಾರೆ. ಇವರಿಗೆಲ್ಲಾ ಯಾವುದೇ ಮುಲಾಜು ತೋರಬಾರದು"ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
"ಇತ್ತೀಚೆಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಪಿಎಫ್ಐ ಸಂಘಟನೆಯ ಬಗ್ಗೆ ಒಂದು ಮಾತನ್ನು ಹೇಳಿದ್ದರು. ಅವರ ಬಾಲವನ್ನು ಕಟ್ಟು ಮಾಡುತ್ತೇವೆ ಎಂದು. ಈಗ ಇಂತಹ ಸಂಘಟನೆಯ ದುರ್ಬುದ್ದಿ ಹೊರಬಿದ್ದಿದೆ"ಎಂದು ಮುತಾಲಿಕ್ ಹೇಳಿದರು.
"ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿರುವುದು ಜಗಜ್ಜಾಹೀರಾಗಿದೆಯಲ್ಲ, ಇಂತಹವರನ್ನು ಸುಮ್ಮನೆ ಬಿಟ್ಟರೆ, ಮತ್ತೆ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಹಾಗಾಗಿ, ಈಗ ಅವರ ಬಾಲವನ್ನು ಕಟ್ಟು ಮಾಡಿ"ಎಂದು ಪ್ರಮೋದ್ ಮುತಾಲಿಕ್ ಸರಕಾರವನ್ನು ಒತ್ತಾಯಿಸಿದ್ದಾರೆ.