ರಾತ್ರೋರಾತ್ರಿ ಬಸ್ ತುಂಬಾ ಮಹಿಳೆಯರನ್ನು ಸಾಗಿಸಿದ ಮಂಗಳೂರಿನ ಆಸ್ಪತ್ರೆ
ಮಂಗಳೂರು, ಜೂನ್ 30: ಕೊರೊನಾ ಲಸಿಕೆ ನೆಪಹೇಳಿ ರಾತ್ರೋರಾತ್ರಿ 50ಕ್ಕೂ ಹೆಚ್ಚು ಮಹಿಳೆಯರನ್ನು ಸಾಗಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ತಾಲೂಕಿನ ಮುಲ್ಕಿಯ ಲಿಂಗಪ್ಪಯ್ಯ ಕಾಡು ಎಂಬಲ್ಲಿ ನಡೆದಿದೆ.
ಒಂದೇ ಗ್ರಾಮದಿಂದ ಬಸ್ನಲ್ಲಿ 50ಕ್ಕೂ ಹೆಚ್ಚು ಮಹಿಳೆಯರ ಸಾಗಾಟವಾಗಿದ್ದು, ಸ್ಥಳೀಯರು ಅನುಮಾನ ಬಂದು ಪ್ರಶ್ನಿಸಿದ ಸಂಧರ್ಭದಲ್ಲಿ, ಮಂಗಳೂರು ಹೊರವಲಯದ ಖಾಸಗಿ ಆಸ್ಪತ್ರೆಗೆ ಸಾಗಾಟ ಮಾಡುತ್ತಿರುವ ಬಗ್ಗೆ ಬೆಳಕಿಗೆ ಬಂದಿದೆ.
ಭೂಗತವಾಗಿ ಆಯಿಲ್ ಸಂಗ್ರಹಿಸಿದ ಖದೀಮರು; ದಕ್ಷಿಣ ಕನ್ನಡ ಪೊಲೀಸರ ಭಾರೀ ಕಾರ್ಯಾಚರಣೆ
ದೇರಳಕಟ್ಟೆಯ ಕಣಚೂರು ಕಾಲೇಜಿನ ಬಸ್ನಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಮಹಿಳೆಯರನ್ನು ಸಾಗಾಟ ಮಾಡಿದ್ದು, ಬೇರೆ ಗ್ರಾಮಸ್ಥರು ಬಸ್ ತಡೆದು ಪ್ರಶ್ನೆ ಮಾಡಿದಾಗ ಸಿಬ್ಬಂದಿಗಳು ತಬ್ಬಿಬ್ಬಾಗಿದ್ದಾರೆ.
ಮೊದಲು ವಾಕ್ಸಿನೇಷನ್ ಅಂತಾ ಕಾರಣ ಕೊಟ್ಟ ಸಿಬ್ಬಂದಿಗಳು, ಆನಂತರ ತಡರಾತ್ರಿ ಯಾವ ವ್ಯಾಕ್ಸಿನ್ ಕೊಡುತ್ತೀರಿ ಅಂತಾ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಇದಕ್ಕೆ ಆಸ್ಪತ್ರೆಯ ಮ್ಯಾನೇಜರ್ ಸೂಚನೆಯಂತೆ ಮಹಿಳೆಯರನ್ನು ಕರೆದುಕೊಂಡು ಹೋಗಿ, ನಾಳೆ ಬೆಳಗ್ಗೆ ಲಸಿಕೆ ಹಾಕುವುದಾಗಿ ಸಮಾಜಾಯಿಷಿ ನೀಡಿದ್ದಾರೆ. ಬಸ್ನಲ್ಲಿದ್ದ ಚಾಲಕ ಪ್ರವೀಣ್, ಆಸ್ಪತ್ರೆ ಮ್ಯಾನೇಜರ್ ನವಾಜ್ಗೆ ಸ್ಥಳೀಯರು ತೀವ್ರ ತರಾಟೆ ತೆಗೆದುಕೊಂಡು ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯವರು ಮಹಿಳೆಯರನ್ನು ಸಾಗಾಟ ಮಾಡಿರುವ ಕಾರಣ ಇನ್ನೂ ನಿಗೂಢವಾಗಿದ್ದು, ಅಧಿಕಾರಿಗಳು ಆಸ್ಪತ್ರೆಗೆ ಬರುವ ಸಂದರ್ಭದಲ್ಲಿ ಬೆಡ್ ಭರ್ತಿ ಇದೆ ಎಂಬುದನ್ನು ತೋರಿಸಲು ಮಹಿಳೆಯರನ್ನು ಕರೆದುಕೊಂಡು ಹೋಗಲಾಗಿದೆ ಎಂಬ ಅನುಮಾನವೂ ಸ್ಥಳೀಯರಲ್ಲಿದೆ. ಕಣಚೂರು ಆಸ್ಪತ್ರೆ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.