ಮತದಾನಕ್ಕಾಗಿ ಊರಿಗೆ ಹೊರಟವರು ಬಸ್ ದರ ಕೇಳಿಯೇ ಸುಸ್ತಾದ್ರು!
ಮಂಗಳೂರು, ಮೇ 11 : ಕರ್ನಾಟಕ ವಿಧಾನಸಭಾ ಚುನಾವಣೆ ಪರಿಣಾಮ ಖಾಸಗಿ ಬಸ್ ದರಗಳು ಗಗನಕ್ಕೇರಿದೆ. ಸಾಮಾನ್ಯ ದಿನಗಳಲ್ಲಿನ ಪ್ರಯಾಣ ದರ ಈಗ ದುಪ್ಪಟ್ಟು ಆಗಿದ್ದು, ಮತದಾನ ಮಾಡಲು ಊರಿಗೆ ಹೊರಟ ಮಂದಿ ಈಗ ಬಸ್ ಪ್ರಯಾಣಕ್ಕೆ ಹೆಚ್ಚಿನ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಅನೇಕ ಮಂದಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಕೆಲವು ಮಂದಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರೆಲ್ಲರೂ ಮತದಾನದ ಕೇಂದ್ರಗಳಿರುವ ತಮ್ಮ ಹುಟ್ಟೂರಿನಲ್ಲಿ, ಮತದಾನಕ್ಕೋಸ್ಕರವಾಗಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಬೇಕಾದ ಅನಿವಾರ್ಯತೆ ಇದೆ.
ಚುನಾವಣೆ ದಿನ ಬಿಎಂಟಿಸಿ ಬಸ್ ಸೇವೆಯಲ್ಲಿ ವ್ಯತ್ಯಯ
ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮೇ 12 ರಂದು ನಡೆಯಲಿರುವುದರಿಂದ ಶುಕ್ರವಾರ ಉರಿಗೆ ಆಗಮಿಸಲು ಅನೇಕ ಮಂದಿ ಬಸ್ ಟಿಕೆಟ್ ಗಾಗಿ ಪರದಾಡುತ್ತಿದ್ದಾರೆ. ಖಾಸಗಿ, ಸರ್ಕಾರಿ ಬಸ್ ಗಳಲ್ಲಿ ಈಗಾಗಲೇ ಟಿಕೆಟ್ ಮಾರಾಟವಾಗಿದ್ದು, ಒಂದೆರಡು ಹೆಚ್ಚುವರಿ ಬಸ್ ಗಳು ಮಾತ್ರ ಬುಕ್ಕಿಂಗ್ ವೆಬ್ ಸೈಟ್ ನಲ್ಲಿ ನಮೂದಾಗಿದೆ. ಉಳಿದ ಹೆಚ್ಚುವರಿ ಬಸ್ ಗಳ ಮಾಹಿತಿ ಇಲ್ಲ.
ಸ್ಲೀಪರ್ ಬಸ್ ಗಳ ಬೆಲೆ ಎಷ್ಟು ಗೊತ್ತಾ?
ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವ ಖಾಸಗಿ ಸ್ಲೀಪರ್ ಬಸ್ ನಲ್ಲಿ ಒಬ್ಬರಿಗೆ ಟಿಕೆಟ್ ದರ 600 ರಿಂದ 700 ರವರೆಗೆ ಇರುತ್ತದೆ. ಆದರೆ ಚುನಾವಣೆ ಸಂಬಂಧ ಸೀಟುಗಳ ಬೇಡಿಕೆ ಹೆಚ್ಚಿರುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಊರಿಗೆ ಆಗಮಿಸುವುದರಿಂದ ಖಾಸಗಿ ಬಸ್ ಪ್ರಯಾಣ ದರ ದುಪ್ಪಟ್ಟು ಆಗಿದೆ.
ಕೆಲ ಖಾಸಗಿ ಸ್ವೀಪರ್ ಬಸ್ ಗಳಲ್ಲಿ ಒಬ್ಬ ಪ್ರಯಾಣಿಕನಿಗೆ ಈಗ 2,000 ರೂಪಾಯಿ ನಿಗದಿಯಾಗಿದೆ. ಕರಾವಳಿಗೆ ಬರುವ ಬಹುತೇಕ ಸ್ಲೀಪರ್ ಖಾಸಗಿ ಬಸ್ ಗಳಲ್ಲಿ ಸ್ಲೀಪರ್ ಸೀಟು ಗಳು ಈಗಾಗಲೇ ಬುಕ್ ಆಗಿವೆ.
ರಾಜ್ಯ ಸಾರಿಗೆಯಲ್ಲೂ ದರ ಏರಿಕೆ
ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಕೂಡ ಬಹುತೇಕ ಸೀಟುಗಳು ಬುಕ್ ಆಗಿವೆ. ಅಲ್ಲದೆ ಬಸ್ ದರದಲ್ಲೂ ಏರಿಕೆಯಾಗಿದ್ದು, ಸಾಮಾನ್ಯ ದಿನಗಳಲ್ಲಿ ಐರಾವತ್ ಬಸ್ ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಲು ಒಬ್ಬರಿಗೆ 753 ರೂಪಾಯಿ ಇತ್ತು. ಆದರೆ ಈಗ 819 ರೂಪಾಯಿಗೆ ಏರಿಕೆ ಆಗಿದೆ.
ಅದೇ ರೀತಿ ಎಸಿ ಸ್ಲೀಪರ್ ಬಸ್ ನಲ್ಲಿ ಒಬ್ಬರಿಗೆ 902 ರೂಪಾಯಿ ಇತ್ತು. ಈಗ ಅದು 982 ರೂಪಾಯಿಗೆ ಏರಿಕೆಯಾಗಿದೆ.
ಕೆಎಸ್ ಆರ್ ಟಿಸಿ ಯಿಂದ ಹೆಚ್ಚುವರಿ ಬಸ್
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಿಂದ ಚುನಾವಣೆ ಹಿನ್ನಲೆಯಲ್ಲಿ ಹೆಚ್ಚುವರಿ ಬಸ್ ಓಡಿಸಲು ನಿರ್ಧರಿಸಿದೆ. ಚುನಾವಣೆ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಡುವ ಹೆಚ್ಚುವರಿ ಬಸ್ ಗಳಲ್ಲಿ ಹೆಚ್ಚಿನ ಬಸ್ ಗಳು ಭಾನುವಾರ ಪುನಃ ಬೆಂಗಳೂರಿಗೆ ತೆರಳಲಿವೆ.
ಬೇಸಿಗೆ ರಜೆ ಪರಿಣಾಮ
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಇರುವುದರಿಂದ ಅನೇಕ ಮಂದಿ ದೂರ ಊರುಗಳಿಂದ ಪ್ರವಾಸಕ್ಕೆಂದು ತೆರಳುತ್ತಾರೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಬಸ್ ಯಾವಾಗಲೂ ರಶ್ ಇರುತ್ತದೆ. ಅಲ್ಲದೆ ಈ ಬಾರಿ ಚುನಾವಣೆ ಶನಿವಾರ ಬಂದಿರುವುದರಿಂದ ಭಾನುವಾರ ವಾರದ ರಜೆ ಆಗಿರುವುದರಿಂದ ದೂರದ ಊರಿನಲ್ಲಿರುವ ಜನರು ಮತದಾನಕ್ಕೆಂದು ಆಗಮಿಸುತ್ತಿದ್ದಾರೆ. ಇದರಿಂದಾಗಿ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.