ಬೆಳ್ತಂಗಡಿ: ಬ್ಯಾಂಕ್ ವಿರುದ್ಧ ಎಂಡೋಸಲ್ಫಾನ್ ಸಂತ್ರಸ್ತರ ಆಕ್ರೋಶ
ಮಂಗಳೂರು, ಜನವರಿ. 25 : ಎಂಡೋಸಲ್ಫಾನ್ ಪೀಡಿತ ಸಂತ್ರಸ್ತರಿಗೆ ಮಾಸಿಕ ವೇತನ ಜಮೆ ಮಾಡಲು ಬ್ಯಾಂಕ್ ಅಧಿಕಾರಿಯೊಬ್ಬರ ನಿರ್ಲಕ್ಷ್ಯ ಧೋರಣೆ ವಿರುದ್ಧ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಎಂಡೋ ಸಂತ್ರಸ್ಥರ ಕುಟುಂಬ ಸಿಡಿದೆದ್ದಿದೆ
ಬೆಳ್ತಂಗಡಿ ತಾಲೂಕಿನಲ್ಲಿ ಎಂಡೋಸಲ್ಫಾನ್ ಹಾಗೂ ವಿಕಲಚೇತನರಿಗೆ ಸರಿಯಾದ ಸಮಯಕ್ಕೆ ಮಾಸಿಕ ವೇತನ ಮುಟ್ಟುತ್ತಿಲ್ಲ. ಹಾಗೂ ಪುಂಜಾಲ ಕಟ್ಟೆಯ ಬ್ಯಾಂಕ್ ಅಧಿಕಾರಿಯೊಬ್ಬರು ಕಳೆದ ಹಲವು ತಿಂಗಳಿನಿಂದ ಸಂತ್ರಸ್ಥರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.[ಎಂಡೋಸಲ್ಫನ್ ಪೀಡಿತ ಒಂದೇ ಕುಟುಂಬದ ಐದು ಜನರು ಆತ್ಮಹತ್ಯೆ]
ಸಂತ್ರಸ್ಥರಿಗೆ ತಕ್ಷಣವೇ ಸ್ಪಂದಿಸುವ ಮೂಲಕ ಅವರ ನೆರವಿಗೆ ನಿಲ್ಲಬೇಕಾದ ಈ ಬ್ಯಾಂಕ್ ಅಧಿಕಾರಿ ಹಣ ಹಾಕದೇ ನಿರ್ಲಕ್ಷ್ಯ ತಾಳಿದ್ದಾರೆ ಎನ್ನಲಾಗಿದೆ. ಸುಮಾರು 7 ತಿಂಗಳ ಹಿಂದೆ ಹಾಗೂ ಇದೀಗ 2-3 ತಿಂಗಳಿನಿಂದ ಮಾಸಿಕ ವೇತನವನ್ನು ಸಂತ್ರಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡಲು ನಿರಾಕರಿಸುತ್ತಿದ್ದಾರೆ .
ಹೀಗಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗು ಎಂಡೋಸಲ್ಫಾನ್ ಸಂತ್ರಸ್ಥರಿಗೆ ತಕ್ಷಣವೇ ಸ್ಪಂದಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.[ಎಂಡೋಸಲ್ಫಾನ್ ಸಂತ್ರಸ್ತರಿಗೆ ಮಾಸಿಕ ಸ್ಟೈಪೆಂಡ್]
ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ 92 ಗ್ರಾಮದಲ್ಲಿ ಎಂಡೋ ಪೀಡಿತರಿದ್ದು , ಕೆಲ ದಿನಗಳ ಹಿಂದೆಯಷ್ಟೇ ಮಾನಸಿಕವಾಗಿ ನೊಂದ ಕುಟುಂಬದ ನಾಲ್ವರು ಆತ್ಮಹತ್ಯೆ ಕೂಡಾ ಮಾಡಿಕೊಂಡಿದ್ದರು.
ಇಷ್ಟೆಲ್ಲಾ ಆದರೂ ಎಂಡೋ ಪೀಡಿತರನ್ನು ನಿರ್ಲಕ್ಷ್ಯದಿಂದ ಕಾಣಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಮತ್ತು ರಾಜಕಾರಣಿಗಳು ಸ್ಪಂಧಿಸಿ ಸಂತ್ರಸ್ತರಿಗೆ ಆಸರೆಯಾಗಬೇಕಿದೆ.