ಕೇಂದ್ರ ಸರ್ಕಾರದ ವಿರುದ್ಧ ಜನ ದಂಗೆ ಏಳುತ್ತಾರೆ: ಯು.ಟಿ. ಖಾದರ್
ಮಂಗಳೂರು, ಸೆಪ್ಟೆಂಬರ್ 2: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷ ಕೂಡಾ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿದೆ.
ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಯು.ಟಿ. ಖಾದರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದುಬಾರಿ ಸರಕಾರ ಅಂತಾ ಟೀಕಿಸಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಯು.ಟಿ. ಖಾದರ್, "ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ದುಬಾರಿ ಸರ್ಕಾರಗಳಾಗಿವೆ. ಅವು ದುಬಾರಿ ಆಡಳಿತ ನೀಡುತ್ತಿದೆ. ಜನರ ಬೆವರು ಹಣದಿಂದ ಸರ್ಕಾರ ನಡೆಸಲಾಗುತ್ತಿದೆ," ಎಂದು ಟೀಕಿಸಿದರು.
"ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಏಳು ವರ್ಷಗಳಾಗಿವೆ. ಆದರೆ ಅಚ್ಛೇ ದಿನ್ ಇನ್ನೂ ಬಂದಿಲ್ಲ. ಅಚ್ಛೇ ದಿನ್ ಬರಬೇಕಾದರೆ ಜನ ಕಿಸೆಯಿಂದ ಎಷ್ಟು ಖರ್ಚು ಮಾಡಬೇಕು. ಏಳು ವರ್ಷದಿಂದ ಸುಲಿಗೆ ಮಾಡೋದು ಸಾಕಾಗಿಲ್ವಾ. ಎಷ್ಟು ಖರ್ಚು ಮಾಡಬೇಕು ಅಂತಾ ಹೇಳಿ. ಅಗತ್ಯ ವಸ್ತುಗಳ ಬೆಲೆ ಮಾಡಿದ ಸರ್ಕಾರ ಜೇಬುಗಳ್ಳ ಸರ್ಕಾರ," ಎಂದು ಯು.ಟಿ. ಖಾದರ್ ಹರಿಹಾಯ್ದರು.
"ರಾಜ್ಯ ಮತ್ತು ದೇಶದಲ್ಲಿ ಜನರು ಅನಿಶ್ಚಿತತೆಯಿಂದ ಜೀವನ ನಡೆಸುತ್ತಿದ್ದಾರೆ. ಒಂದು ಬಿಸ್ಕಟ್ ತೆಗೆದುಕೊಳ್ಳಲೂ ಯೋಚನೆ ಮಾಡಬೇಕು. ನೂರು ರೂಪಾಯಿ ಖರ್ಚು ಮಾಡಿದರೆ ಮತ್ತೆ ನೂರು ರೂಪಾಯಿ ಹೇಗೆ ಸಂಪಾದನೆ ಮಾಡೋದು ಎಂಬ ಭಯ ಜನರಲ್ಲಿದೆ," ಅಂತಾ ಯು.ಟಿ. ಖಾದರ್ ಹೇಳಿದ್ದಾರೆ.
"ದೇಶದ ಆರ್ಥಿಕ ಮಂತ್ರಿಗೆ ಜನರ ಭಾವನೆ ಅರ್ಥ ಆಗಲ್ಲ. ಜನರ ಕಾಳಜಿ ಇಲ್ಲದ ಜನಪ್ರತಿನಿಧಿಗಳ ಸರ್ಕಾರ ಇದಾಗಿದೆ. ಪೆಟ್ರೋಲಿಯಂ ಆರ್ಥಿಕತೆಯ ಬೆನ್ನೆಲುಬು ಹೌದು. ಆದರೆ ಪೆಟ್ರೋಲ್ ರೇಟ್ ಜಾಸ್ತಿ ಮಾಡಿ ನಾಳೆ ಕಡಿಮೆಯಾದರೆ ಯಾವುದೂ ಪ್ರಯೋಜನ ಇಲ್ಲ. ಪೆಟ್ರೋಲ್ ರೇಟ್ ಜಾಸ್ತಿಯಾದರೆ ಅಗತ್ಯ ವಸ್ತುಗಳ ದರ ಹೆಚ್ಚಳವಾಗುತ್ತದೆ."
"ಪೆಟ್ರೋಲ್ ರೇಟ್ ಕಡಿಮೆಯಾದರೆ ಅಗತ್ಯ ವಸ್ತುಗಳ ದರ ಕಡಿಮೆಯಾಗಲ್ಲ. ಏಳು ವರ್ಷದಿಂದ ದೇಶದ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಆದರೆ ಏಳು ವರ್ಷದ ಹಿಂದೆ ದೇಶದ ಶ್ರೀಮಂತ ಪಟ್ಟಿಯಲ್ಲಿ 20 ಸ್ಥಾನದಲ್ಲಿದ್ದವರು ಈಗ ಒಂದನೇ ಸ್ಥಾನದಲ್ಲಿದ್ದಾರೆ. ಏಳು ವರ್ಷದಲ್ಲಿ ಒಂದನೇ ಸ್ಥಾನ ಬರುವುದಕ್ಕೆ ಕೇಂದ್ರ ಸರ್ಕಾರ ನೀಡಿದ ಸಹಕಾರ ಏನು?," ಎಂದು ಖಾದರ್ ಪ್ರಶ್ನಿಸಿದ್ದಾರೆ.
"ಎಲ್ಲಾ ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಗಿ ಮಧ್ಯಮ ವರ್ಗದ ಜನ ಜೀವನ ಮಾಡುವುದಕ್ಕೆ ಅಸಾಧ್ಯವಾಗಿದೆ. ಹೀಗೇಯೇ ಆದರೆ ಜನ ದಂಗೆ ಏಳುವ ಪರಿಸ್ಥಿತಿ ಬರುತ್ತದೆ. ಜನರ ತಾಳ್ಮೆ ಪರೀಕ್ಷೆಯಾಗುತ್ತಿದೆ. ಜನ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ಮಧ್ಯಮ ವರ್ಗದ ಕುಟುಂಬದ ಮಕ್ಕಳು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಸೇರುತ್ತಿದ್ದಾರೆ," ಎಂದು ಕಿಡಿಕಾರಿದರು.
"ಸರ್ಕಾರಿ ಶಾಲೆ ಕಲಿತವರು ಪಿಯುಸಿ ಶಿಕ್ಷಣಕ್ಕೆ ಹೋಗದೆ ಕೆಲಸಕ್ಕೆ ಹೋಗುತ್ತಿದ್ದಾರೆ. ದೇಶದ ಸಂಪತ್ತು ಮಾರುವ ಪರಿಸ್ಥಿತಿ ಬಂದಿದೆ. ರೈಲ್ವೇ ಲಾಭ ಬರುವ ಕಂಪೆನಿಯಾಗಿದ್ದು, ಖಾಸಗಿ ಕಂಪೆನಿಗೆ ಮಾರುವ ಪರಿಸ್ಥಿತಿ ಬಂದಿದೆ," ಎಂದು ಮಾಜಿ ಸಚಿವ ಯು.ಟಿ. ಖಾದರ್ ಬಿಜೆಪಿ ಸರ್ಕಾರದ ವಿರುದ್ಧ ಆರೋಪಿಸಿದರು.