ಎತ್ತಿನಹೊಳೆಗೆ ಕೋರ್ಟ್ ತಡೆ ನೀಡಲೆಂದು ಮಂಗಳೂರಲ್ಲಿ ಪ್ರಾರ್ಥನೆ
ಮಂಗಳೂರು,ಸೆಪ್ಟೆಂಬರ್ 14: ಎತ್ತಿನಹೊಳೆ ಯೋಜನೆಯ ತೀರ್ಪಿಗಾಗಿ ಮಂಗಳೂರಿನಾದ್ಯಂತ ಧಾರ್ಮಿಕ ಕ್ಷೇತ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಸೆಪ್ಟೆಂಬರ್ 21ರಂದು ದೆಹಲಿಯಲ್ಲಿ ನಡೆಯಲಿರುವ ಎತ್ತಿನಹೊಳೆ ಯೋಜನೆಯ ತೀರ್ಪಿನ ಕುರಿತು ಮಂಗಳೂರಿನ ನೇತ್ರಾವತಿ ರಕ್ಷಣಾ ಸಮಿತಿಯಿಂದ ಎಲ್ಲ ದೇವಾಲಯ, ಚರ್ಚ್, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಬುಧವಾರ ಬೆಳಗ್ಗೆ 8.30ಕ್ಕೆ ಶ್ರೀಕ್ಷೇತ್ರ ಕದ್ರಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರೆ, ನಂತರ ಮಿಲಾಗ್ರಿಸ್ ಚರ್ಚ್, ಉಳ್ಳಾಲ ದರ್ಗಾ, ಮಂಗಳಾದೇವಿ ದೇವಸ್ಥಾನ, ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.[ಎತ್ತಿನಹೊಳೆ ಯೋಜನೆ ತೀರ್ಪು, ಮಂಗಳೂರಿನಲ್ಲಿ ಪ್ರಾರ್ಥನೆ]
ಮಾಧ್ಯಮದವರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡದ ಜನತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಈಗಾಗಲೇ ಎರಡು ಬಾರಿ ಎತ್ತಿನಹೊಳೆ ಯೋಜನೆ ವಿರುದ್ಧವಾಗಿ ಜಿಲ್ಲಾ ಬಂದ್ ನಡೆಸಲಾಗಿತ್ತು. ಆದರೆ ಏನೂ ಪ್ರತಿಫಲ ದೊರಕಲಿಲ್ಲ ಎಂದು ಹೇಳಿದರು.
ನೇತ್ರಾವತಿ ರಕ್ಷಣಾ ವೇದಿಕೆಯ ಸಂಯುಕ್ತ ಸಮಿತಿ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಇಡೀ ಜಿಲ್ಲೆಯಲ್ಲಿ ಜಾತಿ- ಮತ ಭೇದವಿಲ್ಲದೆ ಪ್ರಾರ್ಥನೆ ಸಲ್ಲಿಸಲಾಯಿತು. ಸೆಪ್ಟೆಂಬರ್ 21ರಿಂದ ಪ್ರತಿ ದಿನ ಹಸಿರು ಪೀಠದಲ್ಲಿ ಕಲಾಪ ಹಮ್ಮಿಕೊಂಡಿರುವುದರಿಂದ ಶೀಘ್ರವೇ ಫಲಿತಾಂಶ ಹೊರಬರುವ ಸಾಧ್ಯತೆಗಳಿವೆ ಎಂದರು.[ಎತ್ತಿನಹೊಳೆ: ಪಶ್ಚಿಮ ಘಟ್ಟದ ರಕ್ಷಣೆಗಾಗಿ ಯುನೆಸ್ಕೋಗೆ ಆಗ್ರಹ]
ನೇತ್ರಾವತಿ ರಕ್ಷಣಾ ವೇದಿಕೆ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಮಾತನಾಡಿ, ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಪ್ರಮಾಣ ಬಹಳಷ್ಟು ಕಡಿಮೆ ಆಗಿದೆ. ಈ ಯೋಜನೆ ಕೈಗೊಂಡಲ್ಲಿ ಮುಂದಿನ ಪೀಳಿಗೆ ಸಂಕಷ್ಟ ಅನುಭವಿಸಬೇಕಾಗುತ್ತದೆ. ಮಂಗಳೂರಿನ ಜನತೆ ಜೀವನಾಡಿಯಾಗಿರುವ ನೇತ್ರಾವತಿಯನ್ನು ಬೇರೆ ಕಡೆ ಹರಿಯ ಬಿಡದಂತೆ ತೀರ್ಪು ಹೊರಬರಲು ಪ್ರಾರ್ಥಿಸಿದೆವು ಎಂದು ಹೇಳಿದರು.