ಪ್ರವೀಣ್ ಕೊಲೆ: ಮತ್ತಿಬ್ಬರ ಬಂಧನ, ಸುಳ್ಯ SDPI ಕಚೇರಿ ಮಹಜರು!
ಮಂಗಳೂರು, ಆಗಸ್ಟ್ 8: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಘಟ್ಟವನ್ನು ತಲುಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳ ಬಂಧನವಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳ ಸುಳಿವು ಸಿಕ್ಕಿದ್ದು ಆರೋಪಿಗಳು ಎಲ್ಲಿದ್ದಾರೆ? ಎಂಬುದು ಮಾತ್ರ ಇನ್ನೂ ಗೌಪ್ಯವಾಗಿದೆ.
ಜುಲೈ 26ಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಪ್ರಕರಣ ನಡೆದು 13 ದಿನ ಕಳೆದಿದೆ, ಆದರೆ ಈವರೆಗೆ ಹತ್ಯೆಗೈದ ಪ್ರಮುಖ ಆರೋಪಿಯ ಬಂಧನ ಆಗಿಲ್ಲ.
ಪ್ರವೀಣ್ ಹತ್ಯೆ ಹಂತಕರೂ ಸ್ಥಳೀಯರೇ, ಮತ್ತಷ್ಟು ಹತ್ಯೆಗೂ ಸಂಚು: ಆರಗ ಜ್ಞಾನೇಂದ್ರ
ಈ ನಡುವೆ ಕೊಲೆಗೆ ಸಹಕರಿಸಿದ ಮತ್ತಿಬ್ಬರು ಆರೋಪಿಗಳ ಬಂಧನವಾಗಿದೆ. ಸುಳ್ಯದ ನಾವೂರು ನಿವಾಸಿ ಅಬಿದ್ ಮತ್ತು ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್ ಎಂಬ ಇಬ್ಬರನ್ನು ಪೊಲೀಸರ ವಿಶೇಷ ತಂಡ ಬಂಧಿಸಿದೆ. ಬಂಧಿತರನ್ನು ಗೌಪ್ಯ ಸ್ಥಳದಲ್ಲಿಟ್ಟು ವಿಚಾರಣೆ ನಡೆಸಲಾಗುತ್ತಿದೆ. ಈ ಮೂಲಕ ಪ್ರಕರಣದ ಸಂಬಂಧ ಒಟ್ಟು ಆರು ಜನ ಆರೋಪಿಗಳ ಬಂಧನವಾಗಿದೆ.
ಪ್ರಕರಣದ ಸಂಬಂಧ ಸವಣೂರಿನ ಜಾಕಿರ್ ಮತ್ತು ಬೆಳ್ಳಾರೆಯ ಶಫೀಕ್ನನ್ನು ಘಟನೆ ನಡೆದ ಒಂದೆರಡು ದಿನಗಳಲ್ಲಿ ಪೊಲೀಸರು ಬಂಧಿಸಿದ್ದರು. ಇಬ್ಬರನ್ನು ತೀವ್ರ ವಿಚಾರಣೆ ನಡೆಸಿದಾಗ, ಬೆಳ್ಳಾರೆ ಪಲ್ಲಮಜಲು ನಿವಾಸಿಗಳಾದ ಸದ್ದಾಂ ಮತ್ತು ಹ್ಯಾರೀಸ್ ಎಂಬ ಇಬ್ಬರ ಹೆಸರನ್ನು ಅವರು ಹೇಳಿದ್ದು ಅವರನ್ನು ಬಂಧಿಸಲಾಗಿತ್ತು. ಈ ನಾಲ್ವರು ಆರೋಪಿಗಳನ್ನು ಪೊಲೀಸರು ಮತ್ತಷ್ಟು ತೀವ್ರ ವಿಚಾರಣೆ ನಡೆಸಿದಾಗ ಮತ್ತಿಬ್ಬರು ಆರೋಪಿಗಳ ಹೆಸರು ಬಯಲಾಗಿದೆ ಎಂದು ಎಸ್ಪಿ ಋಷಿಕೇಶ್ ಸೋನಾವಣೆ ಮಾಹಿತಿ ನೀಡಿದರು.
ಸುಳ್ಯದ ಎಸ್ಡಿಪಿಐ ಕಚೇರಿ ಮಹಜರು
ಪ್ರವೀಣ್ ಹತ್ಯೆ ಮಾಡಿದ ಪ್ರಮುಖ ಆರೋಪಿಗಳಿಗೆ ಪೊಲೀಸರ ವಿಶೇಷ ತಂಡ ಬಲೆ ಬೀಸಿದೆ. ಶೀಘ್ರ ಉಳಿದ ಆರೋಪಿಗಳ ಬಂಧನ ಆಗುತ್ತದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಈ ನಡುವೆ NIA ತಂಡ ಪ್ರಕರಣದ ಹಿಂದಿರುವ ಜಾಲ ಮತ್ತು ಇದಕ್ಕೆ ಬೆಂಬಲ ಕೊಟ್ಟಿರುವ ಸಂಘಟನೆಗಳ ಪ್ರಮುಖರ ಹಿಂದೆ ಬಿದ್ದಿದೆ. ತನಿಖೆ ತಡವಾದರೂ ನೈಜ್ಯ ಆರೋಪಿಗಳನ್ನು ನ್ಯಾಯಾಲಯದ ಮುಂದೆ ನಿಲ್ಲಿಸಬೇಕೆಂದು ಪೊಲೀಸರು ಪಣತೊಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಬಂಧಿತ ಆರೋಪಿಗಳನ್ನು ಸುಳ್ಯದ ಎಸ್ಡಿಪಿಐ ಕಚೇರಿಗೆ ಕರೆದೊಯ್ದ ಪೊಲೀಸರು ಮಹಜರು ನಡೆಸಿದ್ದಾರೆ. ಇತ್ತ ದೆಹಲಿಯಲ್ಲಿ ಎನ್ಐಎ ಈ ಹತ್ಯೆ ಪ್ರಕರಣದ ಎಫ್ಐಆರ್ ದಾಖಲಿಸಿ ನಾಪತ್ತೆಯಾಗಿರುವ ಪ್ರಮುಖ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಸಹಜ ಸ್ಥಿತಿಗೆ ಮರಳಿದ ದಕ್ಷಿಣ ಕನ್ನಡ ಜಿಲ್ಲೆ, ಎಲ್ಲಾ ನಿರ್ಬಂಧಗಳ ತೆರವು
ಸುಳ್ಯದ ಎಸ್ಡಿಪಿಐ ಕಚೇರಿಯಲ್ಲಿಯೇ ಸ್ಕೆಚ್
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಭಾನುವಾರ ಇಬ್ಬರು ಆರೋಪಿಗಳನ್ನು ತನಿಖಾ ತಂಡ ಬಂಧಿಸಿದೆ. ಸುಳ್ಯದ ನಾವೂರು ನಿವಾಸಿ 22 ವರ್ಷದ ಅಬಿದ್ ಹಾಗೂ ಬೆಳ್ಳಾರೆ ಗೌರಿಹೊಳೆ ನಿವಾಸಿ 28 ವರ್ಷದ ನೌಫಾಲ್ನನ್ನು ಬಂಧಿಸಲಾಗಿದೆ. ಇವರಿಬ್ಬರೂ ಈ ಹತ್ಯೆ ಸಂದರ್ಭ ಪ್ರಮುಖ ಕೊಲೆಗಡುಕರಿಗೆ ಸಹಕರಿಸಿದವರಾಗಿದ್ದು, ಇವರಂತೆ ಸಹಕರಿಸಿದ ನಾಲ್ವರನ್ನು ಈ ಮೊದಲೇ ಬಂಧಿಸಲಾಗಿತ್ತು. ಹೀಗಾಗಿ ಈ ಪ್ರಕರಣದಲ್ಲಿ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದ್ದರೂ ಹತ್ಯೆ ನಡೆಸಿದ ಪ್ರಮುಖ ಆರೋಪಿಗಳು ಇನ್ನೂ ಸಿಕ್ಕಿಬಿದ್ದಿಲ್ಲ.
ಆದರೆ ಈ ಎಲ್ಲಾ ಆರೋಪಿಗಳಿಗೆ ಎಸ್ಡಿಪಿಐಯ ನಿಕಟ ಸಂಪರ್ಕ ಇದೆ ಎಂದು ಭಾನುವಾರ ಬಂಧನಕ್ಕೊಳಗಾದ ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಸೋಮವಾರ ಈ ಇಬ್ಬರು ಆರೋಪಿಗಳನ್ನು ಸುಳ್ಯದ ಎಸ್ಡಿಪಿಐ ಕಚೇರಿಗೆ ಕರೆತಂದ ಪೊಲೀಸರು ಅಲ್ಲಿ ಮಹಜರು ನಡೆಸಿದ್ದಾರೆ.
ಪ್ರಮುಖ ಆರೋಪಿಗಳ ಮೇಲೆ ಎಫ್ಐಆರ್
ಈ ಹತ್ಯೆಯಲ್ಲಿ ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆಯ ಕೈವಾಡ ಇದೆ ಅನ್ನೋ ಅನುಮಾನ ಹತ್ಯೆಯ ದಿನದಂದೇ ಹುಟ್ಟಿತ್ತು. ಹೀಗಾಗಿಯೇ ಪ್ರಕರಣವನ್ನು ಎನ್ಐಎಗೆ ರಾಜ್ಯ ಸರಕಾರ ತಕ್ಷಣ ಹಸ್ತಾಂತರಿಸಿತ್ತು. ಬಳಿಕ ಎನ್ಐಎ ಅಧಿಕಾರಿಗಳು ಸುಳ್ಯಕ್ಕೆ ಆಗಮಿಸಿದ್ದು, ಪೊಲೀಸ್ ಠಾಣೆ, ಘಟನಾ ಸ್ಥಳವಾದ ಬೆಳ್ಳಾರೆಯಲ್ಲಿರುವ ಪ್ರವೀಣ್ ನೆಟ್ಟಾರ್ ಅವರ ಕೋಳಿ ಅಂಗಡಿ, ಅವರ ಮನೆ, ಕುಟುಂಬ ಸದಸ್ಯರು ಸೇರಿದಂತೆ ಹಲವೆಡೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಇದೀಗ ದೆಹಲಿಯ ಎನ್ಐಎ ಕಚೇರಿಯಲ್ಲಿ ಈ ಪ್ರಕರಣದ ಎಫ್ ಐಆರ್ ದಾಖಲಿಸಿಕೊಂಡ ಅಧಿಕಾರಿಗಳು ಅಧಿಕೃತವಾಗಿ ತನಿಖೆ ಆರಂಭಿಸಿದ್ದಾರೆ. ಈವರೆಗೆ ಬಂಧನಕ್ಕೀಡಾದ ಆರು ಆರೋಪಿಗಳು ಸೇರಿ ನಾಪತ್ತೆಯಾಗಿರುವ ಪ್ರಮುಖ ಆರೋಪಿಗಳ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಎಫ್ಐಆರ್ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಈ ಮೂಲಕ ಪ್ರಮುಖ ಆರೋಪಿಗಳ ಮಾಹಿತಿ ಹಾಗೂ ಸುಳಿವು ಸಿಕ್ಕಿರೋದು ಗ್ಯಾರಂಟಿಯಾಗಿದೆ.
ಆರೋಪಿಗಳ ಪತ್ತೆಗೆ 5 ತಂಡ
ಈ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯದ ಪೊಲೀಸರು ಒಟ್ಟು ಐದು ತಂಡಗಳಾಗಿ ಆರೋಪಿಗಳ ಪತ್ತೆಗೆ ಬಲೆ ಬೀಸಿ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಪ್ರಕರಣದ ಗಂಭೀರತೆ ಅರಿತ ಎನ್ಐಎ ಈ ಕೊಲೆಯ ಹಿಂದೆ ಇರುವ ಮಾಸ್ಟರ್ ಮೈಂಡ್ ಹಾಗೂ ಇದಕ್ಕೆ ಯಾವುದಾದರೂ ಬೇರೆ ರೀತಿಯ ಲಿಂಕ್ ಇದಿಯಾ ಎನ್ನುವ ಬಗ್ಗೆಯೂ ತನಿಖೆ ನಡೆಸುತ್ತಿದೆ. ಒಟ್ಟಿನಲ್ಲಿ ಪ್ರವೀಣ್ ಹತ್ಯೆಯ ಹಿಂದೆ ದೊಡ್ಡ ಜಾಲ ಇದೆ ಅನ್ನೋದು ಇದೀಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.