Breaking: ಪ್ರವೀಣ್ ನೆಟ್ಟಾರು ಹತ್ಯೆ, ಮತ್ತಿಬ್ಬರು ಆರೋಪಿಗಳ ಬಂಧನ
ಮಂಗಳೂರು, ಆ.02: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ. ಆರೋಪಿಗಳನ್ನು ಸದ್ದಾಂ ಮತ್ತು ಹ್ಯಾರಿಸ್ ಎಂದು ಗುರುತಿಸಲಾಗಿದೆ.
ಬಂಧಿತ ಸದ್ದಾಂ ಮತ್ತು ಹಾರಿಸ್ ಬೆಳ್ಳಾರೆ ನಿವಾಸಿಗಳಾಗಿದ್ದಾರೆ. ಇದೇ ಪ್ರಕರಣದಲ್ಲಿ ಜುಲೈ 28 ರಂದು ಶಫೀಕ್ ಮತ್ತು ಜಾಕೀರ್ ಅವರನ್ನು ಬಂಧಿಸಲಾಗಿತ್ತು.
ಹತ್ಯೆಯ ಶಂಕಿತ ಸಂಚುಗಾರರನ್ನು ಮತ್ತು ಹತ್ಯೆ ಮಾಡಿದವರನ್ನು ಗುರುತಿಸಲಾಗಿದೆ, ಅವರಿಗಾಗಿ ಶೋಧ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಪೊಲೀಸರು ತಿಳಿಸಿದ್ದಾರೆ.
ಸುಳ್ಯದ ಬೆಳ್ಳಾರೆಯ ಯುವಕ ಪ್ರವೀಣ್ ನೆಟ್ಟಾರು ಅವರನ್ನು ಜುಲೈ 26 ರಂದು ಮಂಗಳವಾರ ರಾತ್ರಿ ಬೆಳ್ಳಾರೆಯಲ್ಲಿ ನಿಂತಿದ್ದ ವೇಳೆಯಲ್ಲಿ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಬರ್ಬರವಾಗಿ ಹತ್ಯೆ ನಡೆಸಿತ್ತು. ಈ ಹತ್ಯೆ ಬಗ್ಗೆ ದಕ್ಷಿಣ ಕನ್ನಡ ಮತ್ತು ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ನಾಯಕರ ದಂಡು ಪ್ರವೀಣ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದೆ. ಲಕ್ಷಾಂತರ ರೂಪಾಯಿ ಪರಿಹಾರ ನೀಡಿದೆ. ರಾಜ್ಯ ಬಿಜೆಪಿ ಸರಕಾರ ಹತ್ಯೆ ತನಿಖೆಯನ್ನು ಎನ್ಐಗೆ ವಹಿಸಿದೆ.
ಇನ್ನು ಪ್ರವೀಣ್ ಹತ್ಯೆ ಬೆನ್ನಲ್ಲೇ ಕೊಲೆಯಾದ ಸುರತ್ಕಲ್ ಯುವಕ ಮಹಮ್ಮದ್ ಫಾಜಿಲ್ ಮಂಗಲಪೇಟೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.
ಫಾಜಿಲ್ ಹತ್ಯೆ ಹಿಂದೆ ಸುಹಾಸ್ ಶೆಟ್ಟಿ ಗ್ಯಾಂಗ್ ಕೈವಾಡ ಇದೆಯೆಂದು ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳು ಶಂಕಿಸಿದ್ದರು. ಇದಕ್ಕೆ ಪೂರಕವೆಂಬಂತೆ ಈಗ ಬಂಧಿತ ಆರು ಮಂದಿಯೂ ಸುಹಾಸ್ ಶೆಟ್ಟಿ ಗ್ಯಾಂಗ್ಗೆ ಸೇರಿದವರಾಗಿದ್ದಾರೆ.
ಪ್ರವೀಣ್ ಹತ್ಯೆಗೂ ಮುನ್ನ ಕೊಲೆಯಾದ ಮಸೂದ್ ಪ್ರಕರಣದಲ್ಲಿ ಈವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ.
Recommended Video
'ಕೃತ್ಯ ನಡೆಸೋದು ಸುಲಭ. ಪ್ರಕರಣ ಬೇಧಿಸೋದು ಅಷ್ಟೊಂದು ಸುಲಭದ ಕಾರ್ಯವಲ್ಲ. ತನಿಖೆ ಸರಿಯಾಗಿ ನಡೆಸಿದ್ದಲ್ಲಿ ಯಾವುದೂ ಕಷ್ಟವಲ್ಲ. ಕಾನೂನು ರೀತ್ಯ ತನಿಖೆ ನಡೆಸಿ ಸಾಕ್ಷಿಯೊಂದಿಗೆ ಪ್ರಕರಣವನ್ನು ಬೇಧಿಸುತ್ತೇವೆ. ಪ್ರತಿಯೊಂದು ಪ್ರಕರಣಗಳೂ ಭಿನ್ನವಾಗಿರುತ್ತದೆ. ಆದರೆ ದ.ಕ.ಜಿಲ್ಲೆಯ ಮೂರೂ ಹತ್ಯೆ ಪ್ರಕರಣವನ್ನು ಸರಿಯಾಗಿ ತನಿಖೆ ನಡಿಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಲಾಗುತ್ತದೆ' ಎಂದು ಡಿಜಿ ಪ್ರವೀಣ್ ಸೂದ್ ಹೇಳಿದ್ದಾರೆ.