ಪ್ರವೀಣ್ ಹತ್ಯೆ: ಪರಾರಿಯಾಗಿರುವ ಆರೋಪಿಗಳ ಆಸ್ತಿ ಮುಟ್ಟುಗೋಲು
ಮಂಗಳೂರು, ಆಗಸ್ಟ್ 10: "ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಸೆರೆ ಸಿಕ್ಕಿರುವವರೆಲ್ಲಾ ದಕ್ಷಿಣ ಕನ್ನಡ ಜಿಲ್ಲೆಯವರೇ, ಕೆಲವರು ಸ್ಥಳೀಯರಿದ್ದಾರೆ. ಪ್ರಮುಖ ಆರೋಪಿಗಳು ಪರಾರಿಯಾಗಿದ್ದು, ಪತ್ತೆಗಾಗಿ ಎನ್ಐಎ ಮತ್ತು ಕರ್ನಾಟಕ ಪೊಲೀಸ್ ಜಂಟಿಯಾಗಿ ತನಿಖೆ ನಡೆಸುತ್ತಿದೆ" ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, " ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಈಗಾಗಲೇ ಏಳು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಇನ್ನೂ ಮೂವರು ಪ್ರಮುಖ ಹಂತಕರು ಪತ್ತೆಯಾಗಬೇಗಿದೆ. ಸೆರೆ ಸಿಕ್ಕ ಆರೋಪಿಗಳೆಲ್ಲಾ ಕರ್ನಾಟಕದವರು, ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ಅದರಲ್ಲಿ ಕೆಲವರು ಸ್ಥಳೀಯರು ಇದ್ದಾರೆ. ಅವರ ಬಂಧನಕ್ಕಾಗಿ ಇಂದು ಬೆಳ್ಳಾರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಇನ್ನಿತರ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದೇವೆ" ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಪ್ರವೀಣ್ ಕೊಲೆ: ಮತ್ತಿಬ್ಬರ ಬಂಧನ, ಸುಳ್ಯ SDPI ಕಚೇರಿ ಮಹಜರು!
"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇನ್ನೂ 144 ಸೆಕ್ಷನ್ ಚಾಲನೆಯಲ್ಲಿ ಇದೆ. ಆದ್ದರಿಂದ ಮುಂದೆ ಜಿಲ್ಲೆಯಲ್ಲಿ ಯಾವ ರೀತಿ ಕಾನೂನು ಸುವ್ಯವಸ್ಥೆ ಕಾಪಾಡಬೇಕೆನ್ನುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದೇನೆ. ಅಧಿಕಾರಿಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಚನೆ ನೀಡಲಿದ್ದೇನೆ" ಎಂದರು.
"ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಯಾರು ಸಹಕರಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಎನ್ಐಎ ತಂಡ ನಮ್ಮೊಂದಿಗೆ ಇದೆ. ಎನ್ಐಎ ಹಾಗೂ ಕರ್ನಾಟಕ ಪೊಲೀಸ್ ಜಂಟಿಯಾಗಿ ಪ್ರಕರಣದ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಇರುವ ಆರೋಪಿಗಳಲ್ಲಿ ಕೆಲವರು ಭೂಗತರಾಗಿದ್ದಾರೆ. ಕೋರ್ಟ್ ಮೂಲಕ ವಾರೆಂಟ್ ಪಡೆದು, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ" ಎಂದು ಅಲೋಕ್ ಕುಮಾರ್ ಎಚ್ಚರಿಸಿದರು.
"ಈ ಪ್ರಕರಣದ ಪ್ರಮುಖ ಮೂವರು ಆರೋಪಿಗಳ ಗುರುತು ಪತ್ತೆಯಾಗಿದೆ. ಅವರ ಮನೆಯ ವಿಳಾಸ, ತಂದೆ, ತಾಯಿ, ಪತ್ನಿಯ ಬಗ್ಗೆಯೂ ತಿಳಿದಿದೆ. ಆದರೆ ಆರೋಪಿಗಳನ್ನು ಬಚ್ಚಿಡುವ ಕಾರ್ಯ ಆಗುತ್ತಿದೆ, ಬೇರೆ ಬೇರೆ ಕಡೆಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಆವಾಗವಾಗ ಅವರ ಸ್ಥಳ ಬದಲಾವಣೆ ಮಾಡುತ್ತಿದ್ದಾರೆ. ಇಂದೊಂದು ಪೂರ್ವ ಯೋಜಿತ ಕೃತ್ಯವಾಗಿದ್ದು, ದಾಳಿ ಮಾಡಿರುವ ಪ್ರಮುಖ ಆರೋಪಿಗಳು ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಬಲೆ ಬೀಸಲಾಗಿದೆ" ಎಂದು ಅಲೋಕ್ ಕುಮಾರ್ ಹೇಳಿದರು.
"ಆರೋಪಿಗಳಿಗೆ ಆಶ್ರಯ ನೀಡಿದವರ ಆಸ್ತಿಯನ್ನೂ ಮುಟ್ಟುಗೋಲು ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ. ಬೆಳ್ಳಾರೆಯಲ್ಲಿ ಈ ಎಲ್ಲಾ ವಿಚಾರದ ಬಗ್ಗೆ ಸಭೆಯನ್ನು ಮಾಡುತ್ತೇವೆ. ಎನ್ಐಎ ಅಧಿಕಾರಿಗಳು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಎಸ್ಪಿಗಳ ಜೊತೆ ಸಭೆ ಮಾಡುತ್ತಾರೆ" ಎಂದು ಅಲೋಕ್ ಕುಮಾರ್ ತಿಳಿಸಿದರು.
Recommended Video