ಬಿಜೆಪಿ ನಾಯಕನ ಮುಖಕ್ಕೆ ಮಸಿ ಬಳಿದರೆ 1 ಲಕ್ಷ ರೂ. ಬಹುಮಾನ ಘೊಷಣೆ!
ಮಂಗಳೂರು, ಫೆ. 08: ಮೈಸೂರಿನಲ್ಲಿ ಹಿರಿಯ ಸಾಹಿತಿ ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ಬಳಿಕ ಅಂತಹ ಘಟನೆಗಳು ರಾಜ್ಯದಲ್ಲಿ ಮತ್ತೆ ಮರುಕಳಿಸುವ ಸಾಧ್ಯತೆ ಕಂಡು ಬಂದಿದೆ. ಬಿಜೆಪಿ ನಾಯಕರೊಬ್ಬರ ಮುಖಕ್ಕೆ ಮಸಿ ಬಳಿದರೆ ಒಂದು ಲಕ್ಷ ರೂ. ಬಹುಮಾನ ಕೊಡುವುದಾಗಿ ಕಾಂಗ್ರೆಸ್ ಮುಖಂಡರು ಘೋಷಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಬಿಲ್ಲವರ ಆರಾಧ್ಯ ವೀರ ಪುರುಷರಾದ ಕೋಟಿ-ಚೆನ್ನಯ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ, ಬಿಲ್ಲವ ಸಮುದಾಯದ ಜನಾರ್ದನ ಪೂಜಾರಿ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿರುವುದು ಈ ರೀತಿ ಘೋಷಣೆ ಮಾಡಲು ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಬಿಲ್ಲವರ ಆರಾಧ್ಯ ವೀರ ಪುರುಷರಾದ ಕೋಟಿ-ಚೆನ್ನಯ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿವುದಾಗಿ ದ.ಕ. ಜಿಲ್ಲೆಯ ಸ್ಥಳೀಯ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರು ಆರೋಪಿಸಿದ್ದಾರೆ. ಬಿಲ್ಲವ ಸಮುದಾಯಕ್ಕೆ ನೋವಾಗುವಂತೆ ಜಗದೀಶ್ ಅಧಿಕಾರಿ ಮಾತನಾಡಿರುವುದನ್ನು ಬಿಲ್ಲವ ಸಮಾಜ ಖಂಡಿಸುತ್ತೆ ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಸಾಹಿತಿ ಕೆ. ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ
ತಮ್ಮ ಫೇಸ್ಬುಕ್ ಪೇಜ್ ಲೈವ್ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ತುಳುನಾಡಿನ ಸಮಸ್ತ ಬಿಲ್ಲವರು ಮಾತ್ರವಲ್ಲದೆ ವಿವಿಧ ಜಾತಿ ಮತಗಳ ಜನರು ಆರಾಧಿಸಿಕೊಂಡು ಬಂದಿರುವ ವೀರ ಪುರುಷರು ಕೋಟಿ ಚೆನ್ನಯರು. ಕೋಟಿ ಚೆನ್ನಯರು ತುಳುನಾಡಿನ ಉದ್ದಗಲಕ್ಕೂ ಗರಡಿ ನಿರ್ಮಿಸಿದ್ದು ಜನಮಾನಸದಲ್ಲಿ ಅಚ್ಚಳಿಯದೆ ಇಂದಿಗೂ ನೆಲೆನಿಂತಿದ್ದಾರೆ. ಅನೇಕ ಪವಾಡಗಳು ಕಾರಣಿಕ ಶಕ್ತಿಗಳು ನೆಲೆನಿಂತ ಗರಡಿಯಲ್ಲಿ ಇಂದಿಗೂ ನಡೆಯುತ್ತಿದ್ದು ತುಳುವರು ಧನ್ಯತಾಭಾವ ಹೊಂದಿದ್ದಾರೆ. ಹೀಗಿರುವಾಗ ಇತಿಹಾಸ ಅರಿಯದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಅವರು ಕೋಟಿ ಚೆನ್ನಯರ ಬಗ್ಗೆ ತೀರಾ ಕೆಟ್ಟದಾಗಿ ಮಾತಾಡಿರುವುದು ಖಂಡನೀಯ ಎಂದಿದ್ದಾರೆ.
ಹಾಗಾಗಿ ನಾನು ಹೇಳುತ್ತಿದ್ದೇನೆ, ಜಗದೀಶ್ ಅದಿಕಾರಿಯವರ ಮುಖಕ್ಕೆ ಯಾರಾದರೂ ಬಿಲ್ಲವ ಯುವಕರು ಮಸಿ ಬಳಿದರೆ ಅವರಿಗೆ ಒಂದು ಲಕ್ಷ ಬಹುಮಾನ ನೀಡುವೆ. ನಾಲ್ಕು ದಿನಗಳ ಒಳಗೆ ಜಗದೀಶ್ ಅಧಿಕಾರಿ ಕ್ಷಮೆ ಯಾಚಿಸಬೇಕು. ಕ್ಷಮೆಯಾಚಿಸದೇ ಇದ್ದರೆ ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿಯುವ ಬಿಲ್ಲವ ಯುವಕರಿಗೆ ಒಂದು ಲಕ್ಷ ಬಹುಮಾನ ಕೊಡುತ್ತೇನೆ ಎಂದು ಪ್ರತಿಭಾ ಕುಳಾಯಿ ಘೋಷಣೆ ಮಾಡಿದ್ದಾರೆ.