'ಪ್ರಿಯಾಂಕಾ ಸತ್ಯಾಸತ್ಯತೆಯ ಬಗ್ಗೆ ದೇಶದ ಜನರಿಗೆ ಅರಿವಿದೆ'
ಮಂಗಳೂರು, ಜನವರಿ 25: ದೇಶದಲ್ಲೇ ಅತ್ಯಂತ ದೊಡ್ಡ ಭೂ ಹಗರಣ ನಡೆಸಿರುವ ಗಾಂಧಿ ಕುಟುಂಬದ ಅಳಿಯ ರಾಬರ್ಟ್ ವಾಡ್ರಾ ಅವರ ಪತ್ನಿ ಪ್ರಿಯಾಂಕಾ ವಾಡ್ರಾ ಅವರನ್ನು ಈಗ ಕಾಂಗ್ರೆಸ್ ಸಕ್ರೀಯ ರಾಜಕಾರಣಕ್ಕೆ ತಂದಿದೆ. ಪ್ರಿಯಾಂಕಾ ಅವರ ಸತ್ಯಾಸತ್ಯತೆಯ ಬಗ್ಗೆ ದೇಶದ ಜನರಿಗೆ ಅರಿವಿದೆ ಎಂದು ಸಂಸದ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಲ್ಲಿ ನಡೆದ ಪ್ರಧಾನಮಂತ್ರಿ ಉಜ್ವಲ ಅಡಿಗೆ ಅನಿಲ ವಿತರಣೆ ಹಾಗೂ ಫಲಾನುಭವಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬಂದೊಡನೆ ಮೋದಿ ಅವರಿಗೆ ದಿಗಿಲು ಬಡಿದಂತಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮರೆತಿದ್ದಾರೆ. ಆದರೆ ಪ್ರಿಯಾಂಕಾ ಯಾರು? ಅವರ ಹಿನ್ನೆಲೆ ಏನು? ಅವರ ಪತಿಯ ಹಿನ್ನೆಲೆ ಏನು? ಎಂಬುದು ದೇಶದ ಜನರಿಗೆ ಈಗಾಗಲೇ ಅರಿವಾಗಿದೆ ಎಂದು ಕಿಡಿಕಾರಿದರು.
ದಕ್ಷಿಣ ಕನ್ನಡದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿ:ಐವನ್ ಡಿಸೋಜಾ
ಎಸಿ ರೂಂನಲ್ಲಿ ಕುಳಿತು ಅಧ್ಯಯನ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಬಡತನದ ಅರಿವಿಲ್ಲ, ಕಡು ಬಡತನದಿಂದಲೇ ಬಂದ ಪ್ರಧಾನಿ ಮೋದಿ ಅವರಿಗೆ ಇರುವ ಬಡತನದ ಅರಿವಿನಿಂದಾಗಿಯೇ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು.
ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ರಮೇಶ್ ಜಿಗಜಣಗಿ, ಕೇಂದ್ರವನ್ನು ಆಳಿದ ಕಾಂಗ್ರೆಸ್ ಪಕ್ಷ ಬಡವರ ಹೆಸರು ಹೇಳಿಕೊಂಡು ಮತ ಪಡೆದು ಅಧಿಕಾರ ಪಡೆದುಕೊಂಡಿದೆ. ಆದರೆ ಬಡವರಿಗಾಗಿ ಯಾವುದೇ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬಡವರಿಗಾಗಿಯೇ ಸುಮಾರು 40ಕ್ಕೂ ಮಿಕ್ಕಿದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದು ಮೋದಿ ಅವರನ್ನು ಪ್ರಶಂಸಿಸಿದರು.
ಪ್ರಿಯಾಂಕಾ ರಾಜಕೀಯ ಪ್ರವೇಶದ ನಂತರ ಮೈತ್ರಿ ಮರೆತ ಕಾಂಗ್ರೆಸ್!
ಕಾರ್ಯಕ್ರಮದಲ್ಲಿ ಉಜ್ವಲ ಅನಿಲ ಯೋಜನೆಯಡಿಯಲ್ಲಿ ನೊಂದಾಯಿತ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಣೆ ಮಾಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಫಲಾನುಭವಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.