ನ್ಯಾಯಬೆಲೆ ಅಂಗಡಿಗಳಲ್ಲಿ 'ಪಿಒಎಸ್' ಯಂತ್ರ ಕಡ್ಡಾಯ : ಯು.ಟಿ.ಖಾದರ್
ಮಂಗಳೂರು, ಸೆಪ್ಟೆಂಬರ್ 13: ಪಡಿತರ ಸಾಮಗ್ರಿಗಳನ್ನು ಪೂರೈಸುವ ನ್ಯಾಯಬೆಲೆ ಅಂಗಡಿಗಳಲ್ಲಿ ಸೋರಿಕೆ ತಡೆಗಟ್ಟಲು ಪಾಯಿಂಟ್ ಆಫ್ ಸ್ಕೇಲ್ (ಪಿಒಎಸ್) ಯಂತ್ರಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.ಇಂಟರ್ ನೆಟ್ ಸೌಲಭ್ಯ ಇರುವಲ್ಲಿಯೂ ಪಿಒಎಸ್ಗಳನ್ನು ಅಳವಡಿಸದೇ ಇದ್ದಲ್ಲಿ ಆಹಾರ ಇಲಾಖೆಯಿಂದಲೇ ನೇರವಾಗಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.
ಸೆಪ್ಟೆಂಬರ್ ಅಂತ್ಯಕ್ಕೆ 16.35 ಲಕ್ಷ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ - ಖಾದರ್
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಆಹಾರ ಇಲಾಖೆಯಿಂದಲೇ ಪಿಒಎಸ್ಗಳನ್ನು ಅಳವಡಿಸಿದರೆ, ಮುಂದಿನ ಹಂತಗಳಲ್ಲಿ ಪಡಿತರ ಅಂಗಡಿಗಳಿಂದ ಅಳವಡಿಕೆಯ ಶುಲ್ಕವನ್ನು ವಸೂಲಿ ಮಾಡಲಾಗುವುದು. ಇಲಾಖೆಯು ಖಾಸಗಿ ಸಂಸ್ಥೆಯೊಂದರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಅದರ ಮುಖಾಂತರ ಪಿಒಎಸ್ಗಳನ್ನು ಅಳವಡಿಸಲಾಗುವುದು," ಎಂದು ಹೇಳಿದರು.
ಇಂಟರ್ ನೆಟ್ ಸೌಲಭ್ಯ ಇಲ್ಲದ ಕಡೆಗಳಲ್ಲಿ ಮಾತ್ರ ಯಂತ್ರ ಅಳವಡಿಕೆಗೆ ವಿನಾಯ್ತಿ ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ರಾಜ್ಯದಲ್ಲಿ ಶೇ.60ರಷ್ಟು ಪಡಿತರ ಅಂಗಡಿಗಳಲ್ಲಿ ಪಿಒಎಸ್ಗಳನ್ನು ಅಳವಡಿಸಲಾಗಿದೆ. ಬಳ್ಳಾರಿಯಲ್ಲಿ ಶೇ.80 ಅನುಷ್ಠಾನವಾಗಿದೆ. ನನ್ನ ಮಂಗಳೂರು ಕ್ಷೇತ್ರದಲ್ಲಿ ಶೇ.90 ಅನುಷ್ಠಾನವಾಗಿದೆ ಎಂದು ಖಾದರ್ ಮಾಹಿತಿ ನೀಡಿದರು.
ರಾಜ್ಯದಲ್ಲಿ ಒಟ್ಟು 24 ಸಾವಿರ ಪಡಿತರ ಅಂಗಡಿಗಳು ಇವೆ. ಇವುಗಳ ಮೂಲಕ ರಾಜ್ಯದಲ್ಲಿ ಅನಿಲ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಗ್ಯಾಸ್ ಸ್ಟೌವನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಬಾರಿಯಿಂದ 2 ಗ್ಯಾಸ್ ಸಿಲಿಂಡರನ್ನೂ ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಮಂಗಳೂರು 'ವಾರ್ತಾ ಭಾರತಿ' ಪತ್ರಿಕೆಯ ಬಂಟ್ವಾಳ ವರದಿಗಾರನ ವಿರುದ್ಧದ ಪ್ರಕರಣವೊಂದರ ವರದಿಗೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿ ಬಂಧಿಸಿದ್ದಾರೆ. ಈ ವಿಚಾರದಲ್ಲಿ ಪೊಲೀಸರು ಹಾಗೂ ಮಾಧ್ಯಮದ ನಡುವೆ ಪರಸ್ಪರ ಆರೋಪ ಇರುವುದರಿಂದ ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ನಡೆಸುವಂತೆ ಗೃಹ ಸಚಿವರನ್ನು ಕೋರಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.