ಮೇಟಿಯನ್ನು ವಜಾ ಮಾಡಲಿ : ಸಿದ್ದುಗೆ ಪೂಜಾರಿ ಸವಾಲ್
ಸಿದ್ದರಾಮಯ್ಯನವರ ವಿರುದ್ಧ ಎಂದಿನ ವಾಗ್ದಾಳಿ ಮುಂದುವರಿಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಅವರು, ಮುಖ್ಯಮಂತ್ರಿಗೆ ತಾಕತ್ ಇದ್ದರೆ ರಾಸಲೀಲೆಯಲ್ಲಿ ಸಿಲುಕಿರುವ ಮೇಟಿ ಅವರನ್ನು ವಜಾಗೊಳಿಸಲು ಎಂದು ಸವಾಲು ಎಸೆದಿದ್ದಾರೆ.
ಮಂಗಳೂರು, ಡಿಸೆಂಬರ್ 12 : ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೈತಿಕತೆ ಇದ್ದರೆ ಕೂಡಲೇ ರಾಸಲೀಲೆ ಪ್ರಕರಣದಲ್ಲಿ ಸಿಲುಕಿರುವ ಅಬಕಾರಿ ಸಚಿವ ಎಚ್.ವೈ.ಮೇಟಿಯನ್ನ ಸಂಪುಟದಿಂದ ವಜಾಗೊಳಿಸಲಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಸವಾಲು ಹಾಕಿದ್ದಾರೆ.
ಸೋಮವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಪೂಜಾರಿ ಅವರು, ಮೇಟಿ ರಾಸಲೀಲೆ ಪ್ರಕರಣದಲ್ಲಿ ಸಿಲುಕುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಕಳಂಕ ತಂದಿದ್ದಾರೆ. ರಾಜೀನಾಮೆ ನೀಡದಿದ್ದರೆ ಮೇಟಿಯವರನ್ನ ಸಂಪುಟದಿಂದ ವಜಾಗೊಳಿಸಲಿ. ತಾಕತ್ತು ಇಲ್ಲದಿದ್ದರೆ ತಾವೇ ರಾಜೀನಾಮೆ ನೀಡಲಿ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪೂಜಾರಿ, ಮುಖ್ಯಮಂತ್ರಿಗೆ ಸಚಿವರ, ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲ. ಅವರು ಅಧಿಕಾರ ನಡೆಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅಧಿಕಾರ ಕೊಡಿಸಿದ ಕನ್ನಡಿಗರನ್ನ ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೇಟಿ ರಾಸಲೀಲೆ ಪ್ರಕರಣದ ಬಗ್ಗೆ ಮಾಧ್ಯಮದವರು, ರಾಜ್ಯದ ಜನರು ಪ್ರಶ್ನಿಸಿದ್ದು ತಪ್ಪೇ? ಎಂದೂ ಪ್ರಶ್ನಿಸಿದರು. [ಸಿದ್ದು ಸರಕಾರದ ಕ್ಯಾಬಿನೆಟ್ ಸಚಿವರೊಬ್ಬರ ರಾಸಲೀಲೆ ಬಯಲು?]
ಪತ್ರಕರ್ತರ ವಿರುದ್ಧ ಪೂಜಾರಿ ಗರಂ..!
ಜನಾರ್ದನ ಪೂಜಾರಿಯವರ ಸುದ್ದಿಗೋಷ್ಠಿ ಬೆಳಗ್ಗೆ 11 ಗಂಟೆಗೆ ನಡೆಯಬೇಕಾಗಿತ್ತು. ಆದರೆ ಪೂಜಾರಿಯವರು ಮಂಗಳೂರು ಪ್ರೆಸ್ ಕ್ಲಬ್ ಗೆ ಆಗಮಿಸಿದ್ದು 11.40ರ ಸುಮಾರಿಗೆ. ಅಲ್ಲದೇ ಇವತ್ತು ಬೆಳಗ್ಗೆ ಪ್ರೆಸ್ ಕ್ಲಬ್ ಗೆ ಕರೆ ಮಾಡಿ ಸುದ್ದಿಗೋಷ್ಠಿ ಇದೆ ಎಂದು ಹೇಳಿದ್ದರು. ಹೀಗಾಗಿ ಎಲ್ಲಾ ಮಾಧ್ಯಮದವರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ.
ಈ ಬಗ್ಗೆ ಪತ್ರಕರ್ತರೊಬ್ಬರು ನೀವು ಸುದ್ದಿಗೋಷ್ಠಿ ಏನಿದ್ದರೂ ಮುಂಚಿತವಾಗಿಯೇ ಹೇಳಬೇಕಿತ್ತು ಅಂದರು. ಈ ವೇಳೆ ಪೂಜಾರಿ, 'ಇದು ಬರ್ನಿಂಗ್ ಇಷ್ಯೂ. ನಾನು ಯಾವಾಗ ಬೇಕಾದರೂ ಸುದ್ದಿಗೋಷ್ಠಿ ಮಾಡಬಹುದು. ಈ ವಿಚಾರದಲ್ಲಿ ನೀವು ನನ್ನನ್ನ ಹೊಗಳಬೇಕಿತ್ತು' ಅಂತ ಪತ್ರಕರ್ತರಿಗೇ ತಿರುಮಂತ್ರ ಹೇಳಿದರು.