'ರಾಜ್ಯದ ನೀರಿನ ಸಮಸ್ಯೆಗೆ ರಾಜಕಾರಣಿಗಳೇ ಕಾರಣ'
ಮಂಗಳೂರು, ಡಿಸೆಂಬರ್, 02: ರಾಜ್ಯದಲ್ಲಿ ತಲೆದೋರಿರುವ ನೀರಿನ ಸಮಸ್ಯೆಗಳಿಗೆ ಮತ್ತು ಹಲವು ನೀರಾವರಿ ಯೋಜನೆಗಳು ಪೂರ್ಣಗೊಳ್ಳದಿರುವುದಕ್ಕೆ ರಾಜಕಾರಣಿಗಳ ನಿರ್ಲಕ್ಷ್ಯತೆ ಮತ್ತು ಆಸೆಬುರುಕತನ ಕಾರಣ ಎಂದು ಆರೋಪಿಸಿದ್ದಾರೆ.
ಮೂಡಬಿದ್ರೆಯ ಆಳ್ವಾಸ್ ನುಡಿಸಿರಿಯಲ್ಲಿ ವೇದಿಕೆ ಹಂಚಿಕೊಂಡ ಪ್ರಮುಖ ಹೋರಾಟಗಾರರಾದ ವಿಕಾಸ್ ಸೊಪಿನ್ ಮಹದಾಯಿ ಹೋರಾಟದ ಬಗ್ಗೆ ಮಾತನಾಡಿದರೆ, ಕೆ. ಸಿ ಬಸವರಾಜ್ ಕಾವೇರಿ ಹೋರಾಟ ಮತ್ತು ದಿನೇಶ್ ಹೊಳ್ಳ ನೇತ್ರಾವತಿ, ಎತ್ತಿನಹೊಳೆ ತಿರುವು ಯೋಜನೆಯ ವಿರುದ್ದದ ಹೋರಾಟದ ಬಗ್ಗೆ ಮಾತನಾಡಿ ತಮ್ಮ ಚಿಂತನೆ ಹರಿಯಬಿಟ್ಟಿದ್ದಾರೆ.['ಮಳೆ ನೀರು ಸಂಗ್ರಹಿಸದಿದ್ದರೆ ದಂಡ ಗ್ಯಾರಂಟಿ']
ಎತ್ತಿನಹೊಳೆ ಯೋಜನೆಯ ಲಾಭ ಕರಾವಳಿ ಜಿಲ್ಲೆಗಾಗಲೀ, ಬರಪೀಡಿತ ಪ್ರದೇಶಗಳಿಗಾಗಲೀ ಬೇಡ, ಇದು ಬೇಕಾಗಿರುವುದು ಸರ್ಕಾರಕ್ಕೆ ಮಾತ್ರ ಎಂದು ಹೋರಾಟಗಾರ ವಿಕಾಸ್ ಸೊಪಿನ್ ವ್ಯಂಗ್ಯವಾಗಿ ಮಾತನಾಡಿದ್ದಾರೆ.
ರಾಜ್ಯದಲ್ಲಿ ದೊರೆಯುವ ನೀರಿನ ಪ್ರಮಾಣ 4400 ಟಿಎಂಸಿ ಎಂದು ಅಂದಾಜಿಸಲಾಗಿದೆ. ಆದರೆ ಕೇವಲ ಅರ್ಧದಷ್ಟು ನೀರು ಮಾತ್ರ ಬಳಕೆಯಾಗಿದೆ. ಕೃಷ್ಣ ಮತ್ತು ಕಾವೇರಿ ನದಿಗಳಿಂದ ಸಂಗ್ರಹಿಸಲಾದ ನೀರನ್ನು ಬಳಸಿಕೊಳ್ಳಲು ಸರ್ಕಾರ ವಿಫಲವಾಗಿದೆ.[ನಿಮಗಿದು ತಿಳಿದಿರಲಿ: ಕಳಸಾ ಬಂಡೂರಿ ಕುಡಿಯುವ ನೀರು ಹೋರಾಟ]
ಇದೇ ವೇಳೆ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ತಮ್ಮ ಪಾಲಿಗೆ ಹಂಚಲಾದ ನೀರನ್ನು ಸರಿಯಾಗಿ ಉಪಯೋಗಿಸಿಕೊಂಡಿವೆ. ಸರ್ಕಾರ ಎಚ್ಚೆತ್ತುಕೊಂಡು ರಾಜ್ಯದ ನೀರಿನ ಪಾಲನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಇದು ಸಕಾಲ ಎಂದು ವಿಕಾಸ್ ಕಿವಿಮಾತು ಹೇಳಿದ್ದಾರೆ.