ಮಧ್ಯರಾತ್ರಿ ವೇಳೆ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಮಂಗಳೂರು ಪೊಲೀಸರು
ಮಂಗಳೂರು, ಏಪ್ರಿಲ್ 27: ಮಧ್ಯರಾತ್ರಿ ವೇಳೆ ಹೆದ್ದಾರಿ ಪಕ್ಕದಲ್ಲಿ ಕೆಟ್ಟು ಹೋದ ಕಾರಿನಲ್ಲಿ ಚಡಪಡಿಸುತ್ತಿದ್ದ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಮಂಗಳೂರು ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಕಳೆದ ಶನಿವಾರ ಮಧ್ಯರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಗುರುವಾಯನಕೆರೆ ನಿವಾಸಿ ಸಿದ್ಧೀಕ್ ಎಂಬುವವರ ಪತ್ನಿ ಶಾಹಿದಾ(29) ಹೆರಿಗೆ ನೋವು ಕಾಣಿಸಿಕೊಂಡಿದೆ.
ವಿಟ್ಲದ ಮನೆಯಿಂದ ತುಂಬು ಗರ್ಭಿಣಿಯನ್ನು ಸರಿಸುಮಾರು 80 ಕಿಮೀ ದೂರದ ವರೆಗಿನ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ನಿರ್ಧಾರ ಮಾಡಲಾಯಿತು. ಕಾರು ಇನ್ನೇನು ಮಂಗಳೂರು ನಗರ ಹೊರವಲಯದ ಅರ್ಕುಳಕ್ಕೆ ಸಮೀಪಿಸುತ್ತಿದ್ದಂತೆಯೇ ಕಾರು ಕೆಟ್ಟು ಹೋಗಿದೆ.
ಅರ್ಕುಳ ಸಮೀಪಿಸಿದಾಗ ಸಮಯ 1.15 ಆಗಿದ್ದು, ಕರ್ಫ್ಯೂ ಇದ್ದ ಕಾರಣ ಹೆದ್ದಾರಿಯಲ್ಲಿ ವಾಹನ ಸಂಚಾರವಿಲ್ಲದೆ ಗರ್ಭಿಣಿ ಮತ್ತು ಮನೆಯವರು ಪರದಾಡಿದ್ದಾರೆ. ಇದೇ ವೇಳೆ ರಾತ್ರಿ ಗಸ್ತು ತಿರುಗುತ್ತಿದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಎಎಸ್ಐ ಹರೀಶ್ ಮತ್ತು ಪೊಲೀಸ್ ಕಾನ್ಸ್ಟೆಬಲ್ ವಿಜಯ ಕುಮಾರ್ ಗರ್ಭಿಣಿಯ ಪರದಾಟ ಕಂಡು ತಮ್ಮದೇ ಇಲಾಖೆಯ ವಾಹನದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಶಾಹಿದಾ ಸೋಮವಾರ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕಷ್ಟ ಕಾಲದಲ್ಲಿ ನೆರವಾದ ಪೊಲೀಸರಿಗೆ ಸಿದ್ಧೀಕ್ ಮಗುವಿನ ಫೋಟೋ ಕಳುಹಿಸಿ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ.
ಮಾನವೀಯತೆ ಮೆರೆದ ಪೊಲೀಸರಿಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಕಚೇರಿಗೆ ಕರೆಯಿಸಿ ಸನ್ಮಾನ ಮಾಡಿದ್ದಾರೆ. ಪೊಲೀಸರ ಮಾನವೀಯ ಕಾರ್ಯವನ್ನು ಮುಕ್ತ ಕಂಠದಿಂದ ಹೊಗಳಿದ್ದು, ತನ್ನ ಸಿಬ್ಬಂದಿಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.