ಮಂಗಳೂರು ಹೊರವಲಯದಲ್ಲಿ ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರ ದಾಳಿ
ಮಂಗಳೂರು, ಫೆಬ್ರವರಿ 03:ಮಂಗಳೂರು ಹೊರವಲಯದಲ್ಲಿ ನಡೆಯುತ್ತಿದ್ದ ಬೃಹತ್ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಮಂಗಳೂರು ಪೋಲಿಸರು ದಾಳಿ ನಡೆಸಿದ್ದಾರೆ. ಉಳಾಯಿಬೆಟ್ಟು , ಪೆರ್ಮಂಕಿ ಎಂಬಲ್ಲಿ ಪಲ್ಗುಣಿ ನದಿ ತಟದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕಾ ಅಡ್ಡೆಯ ಮೇಲೆ ದಾಳಿ ನಡೆಸಲಾಗಿದೆ.
ಯೂಸುಫ್ ಉಳಾಯಿಬೆಟ್ಟು, ಇಸಾಕ್ ಉಲಾಯಿಬೆಟ್ಟು, ಅಸನ್ ಉಳಾಯಿಬೆಟ್ಟು, ಶರೀಫ್ ಉಳಾಯಿಬೆಟ್ಟು, ವಿನಯ್ ಶೆಟ್ಟಿ ಹಾಗೂ ಯಶವಂತ್ ಆಳ್ವ ಎಂಬುವವರು ನದಿ ತೀರದ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ಪರವಾನಗಿಯಿಲ್ಲದೇ, ಅನಧಿಕೃತವಾಗಿ ಮರಳು ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ದೊರೆತಿತ್ತು.
ಮಂಗಳೂರಿನಲ್ಲಿ ಅಕ್ರಮ ಮರಳು ಅಡ್ಡೆಗೆ ದಾಳಿ: 30 ಲಾರಿ, 20 ದೋಣಿಗಳು ವಶಕ್ಕೆ
ಈ ಮಾಹಿತಿ ಆಧರಿಸಿ ಎಸಿಪಿ ರಾಮ್ ರಾವ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ದಾಳಿ ಸಂದರ್ಭದಲ್ಲಿ 45 ದೋಣಿ , 5 ಟಿಪ್ಪರ್ ಲಾರಿ , 3 ಡ್ರೆಜ್ಜರ್ , ಅಕ್ರಮ ಮರಳು ದಾಸ್ತಾನು ಸೇರಿದಂತೆ ಸುಮಾರು 1.20 ಕೋಟಿ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ರಮ ಮರಳುಗಾರಿಕೆ: ಮಂಗಳೂರು ಹೊರವಲಯದಲ್ಲಿ 12ಕ್ಕೂ ಅಧಿಕ ಬೋಟ್ ವಶ
ಅದಲ್ಲದೇ ತುಂಬೆ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೇರಳಕ್ಕೆ ಮರಳನ್ನು ಅಕ್ರಮವಾಗಿ ಸಾಗಿಸಲು ಬಳಸುತ್ತಿದ್ದ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.